ಬಾಡಿಗೆ ಕರಾರು ಪತ್ರಗಳನ್ನು ನೊಂದಾವಣೆ ಮಾಡದಿದ್ದರೆ ಬಾಡಿಗೆ ಹೆಚ್ಚಿಸುವಂತಿಲ್ಲ: ಕರ್ನಾಟಕ ಹೈಕೋರ್ಟ್‌ ಮಹತ್ವದ ತೀರ್ಪು

ರಾಜ್ಯ

ಬಾಡಿಗೆ ಕರಾರುಪತ್ರವನ್ನು ನೆೊಂದಾವಣೆ ಮಾಡದಿದ್ದರೆ ಬಾಡಿಗೆಯನ್ನು ಹೆಚ್ಚಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.ದಸ್ತಾವೇಜು ನಿಯಮದ ಪ್ರಕಾರ ಬಾಡಿಗೆ ಕರಾರು ಅಥವಾ ಒಪ್ಪಂದದ ದಸ್ತಾವೇಜನ್ನು ಮಾಲಿಕರು ನೋಂದಣಿ ಮಾಡದಿದ್ದರೆ ಪ್ರತಿ ವರ್ಷ ಬಾಡಿಗೆ ಹೆಚ್ಚಳ ಮಾಡಲು ಅವಕಾಶ ಇರುವದಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ.

ಬೆಂಗಳೂರಿನ ಶ್ರೀನಿವಾಸ ಎಂಟರ್‌ಪ್ರೈಸಸ್‌ಗೆ ಸೇರಿದ ಜಾಗವನ್ನು ಕೇರಳ ಮೂಲದ ನೆಡುಗುಂಡಿ ಬ್ಯಾಂಕಿಗೆ ಪ್ರತಿ ತಿಂಗಳು 13574 ರೂ. ಬಾಡಿಗೆ ಮತ್ತು 81444/- ಮುಂಗಡ ಅಡ್ವಾನ್ಸ್‌ ಠೇವಣಿ ಒಪ್ಪಂದಕ್ಕೆ ನೀಡಲಾಗಿತ್ತು.1998ರಲ್ಲಿ ಐದು ವರ್ಷದ ಅವಧಿಗೆ ಬಾಡಿಗೆ ನೀಡಲಾಗಿತ್ತು. ಆ ಬ್ಯಾಂಕ್‌ ಬಳಿಕ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಿಲೀನಗೊಂಡಿತ್ತು. ಒಪ್ಪಂದದಂತೆ ಪ್ರತಿ ಮೂರು ವರ್ಷಕ್ಕೆ ಅಗ್ರಿಮೆಂಟ್ ನವೀಕರಣ ಮಾಡಲಾಗಿದೆ.ಆದರೆ, ಬಾಡಿಗೆ ಹೆಚ್ಚಳದ ಬಾಕಿ ನೀಡುತ್ತಿಲ್ಲ ಎಂದು ಶ್ರೀನಿವಾಸ ಎಂಟರ್‌ಪ್ರೈಸಸ್ ಕೋರ್ಟ್‌ ಮೆಟ್ಟಿಲೇರಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಸಿವಿಲ್ ಕೋರ್ಟ್ 2018ರಲ್ಲಿ 5.19 ಲಕ್ಷ ರೂ. ಪಾವತಿಸುವಂತೆ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಬ್ಯಾಂಕ್ ಹೈಕೋರ್ಟ್‌ ಮೆಟ್ಟಿಲೇರಿತ್ತು.

ವಸತಿ, ವಾಣಿಜ್ಯ ಕಟ್ಟಡಗಳ ಮಾಲೀಕರು ಬಾಡಿಗೆಗೆ ನೀಡುವ ಮನೆ ಮತ್ತು ಮಳಿಗೆಗೆ ಸಂಬಂಧಿಸಿದ ಕರಾರು ಪತ್ರವನ್ನು ಸ್ಟ್ಯಾಂಪ್ ಪೇಪರ್‌ನಲ್ಲಿ ಮುದ್ರಿಸಿ ಸಹಿ ಮಾಡಿ ರಿಜಿಸ್ಟ್ರಾರ್ ಕಚೇರಿಗಳಲ್ಲಿ ನೋಂದಣಿ ಮಾಡಿಸಬೇಕಿದೆ. ಆದರೆ, ಹೆಚ್ಚಿನವರು ಇದನ್ನು ನೋಂದಣಿ ಮಾಡಿಸುವುದಿಲ್ಲ.ಆದರೆ, ಕರ್ನಾಟಕ ರೆಂಟ್ ಆಕ್ಟ್‌ 1999 ಪ್ರಕಾರ ಬಾಡಿಗೆ ಉದ್ದೇಶದಿಂದ ಯಾವುದೇ ಸ್ಥಳ ನೀಡಿ ಕರಾರು ಮಾಡಿಕೊಂಡರೂ ಅದು ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ಕರಾರು ಪತ್ರ ಊರ್ಜಿತವಾಗುವುದಿಲ್ಲ. ಕಾನೂನಿನಲ್ಲಿ ಅದು ಯಾವುದೇ ಮಾನ್ಯತೆ ಹೊಂದಿರುವುದಿಲ್ಲ. ಆದರೆ, ಬಾಡಿಗೆ ಮನೆಯವರನ್ನು ತೆರವುಗೊಳಿಸಲು ನೋಂದಣಿಯಾಗದ ಒಪ್ಪಂದ ಪತ್ರವನ್ನು ಮೇಲಾಧಾರವಾಗಿ ಬಳಸಬಹುದು ಎಂದು ಹೈಕೋರ್ಟ್‌ ತನ್ನ ತೀರ್ಪಿನಲ್ಲಿ ಹೇಳಿದೆ.