ಸಿ.ಎಂ ಪುತ್ರ ಯತೀಂದ್ರ, ಮೊಹಮ್ಮದ್ ನಲಪಾಡ್, ಗೀತಾ ಶಿವರಾಜ್ ಕುಮಾರ್, ನಿಕೇತ್ ರಾಜ್ ಮೌರ್ಯ, ಪ್ರಿಯಾಂಕಾ ಜಾರಕಿಹೊಳಿ ಕಣಕ್ಕೆ.!
ಲೋಕಸಭೆ ಚುನಾವಣೆ ಸಂಬಂಧ ಬಿಜೆಪಿಯಲ್ಲಿ ಬಿರುಗಾಳಿ ಎದ್ದಿರುವಂತೆ ಕಾಂಗ್ರೆಸ್ ನಲ್ಲೂ ಚಟುವಟಿಕೆ ಜೋರಾಗಿದೆ. ವಿಧಾನಸಭೆ ಚುನಾವಣೆಯ ದೊಡ್ಡ ಗೆಲುವಿನ ಖುಷಿಯಲ್ಲಿರುವ ಕಾರ್ಯಕರ್ತರ ಪಡೆ ತಡಮಾಡದೇ ಲೋಕಸಭೆ ಚುನಾವಣೆಗೆ ಸಜ್ಜಾಗಬೇಕೆಂದು ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಂದೇಶ ಕಳುಹಿಸಿದ್ದಾರೆ.
ಲೋಕಸಭಾ ಚುನಾವಣೆಗೆ ಪರೋಕ್ಷ ತಯಾರಿ, ಚರ್ಚೆಗಳು ನಡೆದಿದೆ. ಕ್ಷೇತ್ರವಾರು ವಿಚಾರ ವಿನಿಮಯ ಕೂಡ ನಡೆದಿದೆ. 28 ಕ್ಷೇತ್ರಗಳ ಪೈಕಿ ಎಂಟು ಕ್ಷೇತ್ರಗಳಿಗೆ ಸಮರ್ಥ ಅಭ್ಯರ್ಥಿ ಇನ್ನೂ ಸಿಕ್ಕಿಲ್ಲ. ಕಳೆದ ಬಾರಿ ಕಣದಲ್ಲಿದ್ದವರ ಪೈಕಿ ಹೆಚ್ಚೆಂದರೆ 8 ಮಂದಿ ಮಾತ್ರ ಪುನಃ ಕಣಕ್ಕಿಳಿಯುವ ಉಮೇದಿನಲ್ಲಿದ್ದಾರೆ. ಉಳಿದ 20 ಕ್ಷೇತ್ರಕ್ಕೆ ಹೊಸ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಯತ್ನದಲ್ಲಿ ಪಕ್ಷ ಇದೆ.

ಮೂಲಗಳ ಪ್ರಕಾರ ಎಂಟು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಕೊರತೆ ಇದೆ. ಆಕಾಂಕ್ಷಿಗಳು ಇದ್ದರೂ ಸಮರ್ಥವಾಗಿಲ್ಲ. ಇನ್ನು ಕೆಲವು ಕಡೆ ಆಕಾಂಕ್ಷಿಗಳು ಕೂಡ ಇಲ್ಲದ ಸ್ಥಿತಿ ಇದೆ. ಹೀಗಾಗಿ ಪಕ್ಷದ ಪ್ರಮುಖ ನಾಯಕರ ಕುಟುಂಬ ಸದಸ್ಯರನ್ನೋ ಅಥವಾ ಬಿಜೆಪಿಯಿಂದ ಆಪರೇಷನ್ ನಡೆಸಿ ಅಭ್ಯರ್ಥಿಗಳನ್ನು ಸಿದ್ಧಗೊಳಿಸಲು ಪ್ರಮುಖ ನಾಯಕರು ಚಿಂತನೆ ನಡೆಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಲೋಕಸಭೆ ಕ್ಷೇತ್ರದಿಂದ ಜಗದೀಶ್ ಶೆಟ್ಟರ್ ಅವರನ್ನು ಕಣಕ್ಕಿಳಿಸುವ ಆಶಯ ಪಕ್ಷದ್ದು. ಅವರು ಒಪ್ಪದೇ ಹೋದರೆ ಅಥವಾ ಅವರ ಪರ ಒಲವು ವ್ಯಕ್ತವಾಗದೇ ಹೋದರೆ ಬೇರೆ ಆಯ್ಕೆ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಕಣಕ್ಕಿಳಿಸುವುದು. ಇಲ್ಲವಾದರೆ ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ರನ್ನು ಬಿಜೆಪಿಯಿಂದ ಕರೆ ತಂದು ಟಿಕೆಟ್ ನೀಡುವ ಬಗ್ಗೆ ಚರ್ಚೆ ನಡೆದಿದೆ.
ಬಿಜೆಪಿ ಜೊತೆ ಗುರುತಿಸಿಕೊಂಡಿದ್ದ ಲಿಂಗಾಯತ ಸಮುದಾಯ ವಿಧಾನಸಭೆ ಚುನಾವಣೆಯಲ್ಲಿ ಚದುರಿ ಹೋಗಿದೆ. ಅದರ ಪೂರ್ಣ ಲಾಭ ಕಾಂಗ್ರೆಸ್ ಪಕ್ಷಕ್ಕಾಗಿದೆ. ಲೋಕಸಭೆ ಚುನಾವಣೆಯೂ ಅದೇ ಯೋಜನೆ ಕಾರ್ಯಗತಮಾಡುವ ಕಾರ್ಯತಂತ್ರ ಹೆಣೆಯಲಾಗುತ್ತಿದೆ.
ಮೈಸೂರು ಲೋಕಸಭಾ ಕ್ಷೇತ್ರದಿಂದ ಸಮರ್ಥ ಅಭ್ಯರ್ಥಿ ಎಂದರೆ ಮುಖ್ಯಮಂತ್ರಿ ಪುತ್ರ ಯತೀಂದ್ರ ಮಾತ್ರ ಎಂದು ಕಾಂಗ್ರೆಸ್ ನಾಯಕರು ನಿರ್ಧರಿಸಿದಂತೆ ಕಾಣುತ್ತಿದೆ. ಅವರ ಹೆಸರೇ ಪ್ರಧಾನವಾಗಿ ಕೇಳಿ ಬರುತ್ತಿದೆ. ಬೆಂಗಳೂರು ಉತ್ತರದಿಂದ ಮೊಹಮ್ಮದ್ ನಲಪಾಡ್ ಪ್ರಮುಖ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಗೀತಾ ಶಿವರಾಜ್ ಕುಮಾರ್ ಅವರನ್ನು ಕಣಕ್ಕಿಳಿಸಲು ಪಕ್ಷದ ನಾಯಕರು ಇಚ್ಛಿಸಿದ್ದಾರೆ. ಬೆಳಗಾವಿಯಲ್ಲಿ ಜಾರಕಿಹೊಳಿ ಕುಟುಂಬಕ್ಕೆ ಟಿಕೆಟ್ ನೀಡಿದರೆ ಕ್ಷೇತ್ರ ಗೆಲ್ಲಬಹುದೆಂದು ಅಂದಾಜಿಸಿದ್ದು , ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಹೆಸರು ಮುಂಚೂಣಿಯಲ್ಲಿದೆ. ತುಮಕೂರಿನಿಂದ ಖ್ಯಾತ ವಾಗ್ಮಿ ನಿಕೇತ್ ರಾಜ್ ಮೌರ್ಯ ಅವರನ್ನು ಕಣಕ್ಕಿಳಿಸಲು ಪಕ್ಷದ ನಾಯಕರು ಚಿಂತನೆ ನಡೆಸಿದ್ದಾರೆ.