ರಾಷ್ಟ್ರೀಯ ಹೆದ್ದಾರಿ 169 ಅಗಲೀಕರಣ ಕಾಮಗಾರಿ; ಚರಂಡಿ, ಸರ್ವಿಸ್ ರಸ್ತೆ, ಮೂಲಭೂತ ಸೌಕರ್ಯಕ್ಕೆ ಕಂಟಕ.!

ಕರಾವಳಿ

ಸೂಚನಾ ಪಲಕವಿಲ್ಲ. ಮುಂಜಾಗ್ರತಾ ಕ್ರಮ ವಹಿಸಿಲ್ಲ. ಎಲ್ಲಿ ನೋಡಿದರೂ ಮರಣ ಗುಂಡಿ.!

ಕೈಕಂಬ: ರಾಷ್ಟ್ರೀಯ ಹೆದ್ದಾರಿ ಬಿಕರ್ನಕಟ್ಟೆ- ಸಾಣೂರು 169 ರ ರಸ್ತೆ ಅಗಲೀಕರಣ ಕಾಮಗಾರಿ ಕಳೆದ ಕೆಲವು ತಿಂಗಳಿನಿಂದ ನಡೆಯುತ್ತಿದ್ದು, ಕಾಮಗಾರಿಯೂ ಆಮೆಗತಿಯಲ್ಲಿ ಸಾಗುತ್ತಿದೆ. ಈ ನಡುವೆ ಗಂಜಿಮಠ, ಸೂರಲ್ಪಾಡಿ, ಕೈಕಂಬ ಸಮೀಪದಿಂದ ಹಾದು ಹೋಗುವ ರಸ್ತೆಗೆ ಮಣ್ಣು ಹಾಕಲಾಗಿದ್ದು ಪರಿಸರ ಕೆಸರುಮಯವಾಗುತ್ತಿದೆ. ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಯುವ ವೇಳೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ವ್ಯವಸ್ಥಿತವಾಗಿ ಮಾಡಬೇಕಾಗಿರುವುದು ಸಂಬಂಧಿಸಿದವರ ಜವಾಬ್ದಾರಿಯಾಗಿರುತ್ತದೆ. ಆದರೆ ಈ ಪರಿಸರದಲ್ಲಿ ನಡೆಯುತ್ತಿರುವ ಕಾಮಗಾರಿಯಿಂದ ಸಾರ್ವಜನಿಕರಿಗೆ ತೊಂದರೆಯುಂಟಾಗಿದ್ದು ಇದಕ್ಕೆ ಹೆದ್ದಾರಿ ಇಲಾಖೆಯೇ ನೇರ ಹೊಣೆಗಾರರಾಗಿರುತ್ತಾರೆ.

ಸದ್ರಿ ಪರಿಸರದಲ್ಲಿ ಶಾಲೆಗಳು, ಕೈಗಾರಿಕಾ ವಲಯಗಳು, ಮನೆ-ಮಠಗಳು, ಧಾರ್ಮಿಕ ಕ್ಷೇತ್ರಗಳಿದ್ದು, ರಸ್ತೆಯದ್ದಕ್ಕೂ ಮಣ್ಣು ರಾಶಿ ಹಾಕಿ ಅವೈಜ್ಞಾನಿಕವಾಗಿ ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೂ, ಅಸುಪಾಸಿನ ನಿವಾಸಿಗಳಿಗೂ ಬಹಳ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಈ ಮಾರ್ಗದಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡ ಹಲವಾರು ಉದಾಹರಣೆಗಳಿವೆ. ಕೆಲವು ಮಂದಿ ಸವಾರರು ಮೂಳೆ ಮುರ್ಕ್ಕೊಂಡು ಅಸ್ಪತ್ರೆ ಸೇರಿರುತ್ತಾರೆ. ಡೈನೇಜ್, ತೋಡುಗಳನ್ನು ಮಣ್ಣು ಹಾಕಿ ಮುಚ್ಚಿದರಿಂದ ಮಳೆಗಾಲದ ಮಳೆ ನೀರು ಅಲ್ಲಲ್ಲಿ ತುಂಬಿ ಕೃತಕ ನೆರೆ ಸೃಷ್ಠಿಯಾಗಿ ಹಲವು ಕಡೆ ಮನೆಗಳಿಗೆ ಹರಿದು ಬರುತ್ತಿದೆ.

ರಸ್ತೆ ಅಗಲೀಕರಣಕ್ಕೆ ಮಣ್ಣು ಹಾಕಿ, ಮಾರ್ಗದ ಮಧ್ಯೆ ಅಲ್ಲಲ್ಲಿ ಗುಂಡಿ ತೋಡಿ, ಯಾವುದೇ ಸೂಚನಾ ಫಲಕ ಅಳವಡಿಸದೆ, ಮುಂಜಾಗ್ರತಾ ಕ್ರಮ ವಹಿಸದೆ ವಾಹನ ಸವಾರರ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಸಂಬಂದ ಪಟ್ಟವರು. ಹೆದ್ದಾರಿ ಕಾಮಗಾರಿಯಿಂದ ಕೆಲವು ಕಡೆಗಳಲ್ಲಿ ಅತೀ ಹೆಚ್ಚು ಸಮಸ್ಯೆ ಉಂಟಾಗಿದ್ದು ಕುಡಿಯುವ ನೀರು, ಡೈನೇಜ್ ಎನ್ನುತ್ತಾರೆ ಸ್ಥಳೀಯ ನಾಗರಿಕರು.
ರಸ್ತೆ ಕಾಮಗಾರಿ ಕೆಲಸ ಮಾಡುವಾಗ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ನಡೆಸುವುದು ವಾಡಿಕೆ. ಆದರೆ ಅದೆಲ್ಲವನ್ನು ಇಲ್ಲಿ ಕಡೆಗಣಿಸಲಾಗಿದೆ. ಗುತ್ತಿಗೆದಾರರಿಗೆ, ಇಲಾಖಾ ಇಂಜನಿಯರ್‌ಗಳಿಗೆ ಕರೆ ಮಾಡಿ ಹೇಳಿದರೆ ವ್ಯವಸ್ಥೆ ಮಾಡುವುದಾಗಿ ಹೇಳುತ್ತಿದ್ದಾರೆ ವಿನಃ ವ್ಯವಸ್ಥೆ ಮಾಡುತ್ತಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ.

ಕಾಮಗಾರಿ ನಡೆಯುವ ಪರಿಸರದಲ್ಲಿ ಸೂಚನಾ ಪಲಕವಿಲ್ಲ, ಮುಂಜಾಗ್ರತ ಕ್ರಮ ವಹಿಸಿಲ್ಲ. ರಿಪ್ಲೆಕ್ಟರ್ ಅಳವಡಿಸಿಲ್ಲ, ಕಾನೂನು ರೀತಿಯಲ್ಲಿ ಕರ್ತವ್ಯ ಪಾಲಿಸುತ್ತಿಲ್ಲ. ಗಂಜಿಮಠ ಗಣಪತಿ ದೇವಸ್ಥಾನದ ಮುಂದುಗಡೆ ರಸ್ತೆಯ ಮದ್ಯದಲ್ಲೇ ದೊಡ್ಡ ಗುಂಡಿ ತೋಡಿ ಇಡಲಾಗಿದೆ. ಇದು ವಾಹನ ಸವಾರರಿಗೆ ಮರಣ ಗುಂಡಿಯಾಗಿ ಪರಿಣಮಿಸಿದೆ. ಇಲ್ಲಿ ಯಾವುದೇ ಬ್ಯಾರಿಕ್ಯಾಡ್ ಅಳವಡಿಸಿಲ್ಲ. ನಾಲ್ಕು ತುಂಡು ರಿಬ್ಬನ್ ಕಟ್ಟಲಾಗಿದೆ. ರಾತ್ರಿ ಪ್ರಯಾಣಿಸುವವರ ಗತಿ ಅದೋಗತಿ.! ವಂಡೇಲಾ ಸಭಾಂಗಣದಿಂದ ಕೈಕಂಬದವರೆಗೆ ಅಲ್ಲಲ್ಲಿ ಗುಂಡಿಗಳನ್ನು ತೋಡಿ ಇಡಲಾಗಿದೆ. ಈ ಗುಂಡಿಗೆ ಬಿದ್ದವರೆಷ್ಟು.? ಎದ್ದು ಹೋದವರೆಷ್ಟು.? ಸೊಂಟದ ಕೀಲಿ ಮುರ್ಕೊಂಡವರೆಷ್ಟು.? ಆದರೂ ಅರ್ಥವಾಗುತ್ತಿಲ್ಲ ಕಾಮಗಾರಿ ನಡೆಸುವವರಿಗೂ ಮತ್ತು ದಪ್ಪ ಚರ್ಮದ ಅಧಿಕಾರಿಗಳಿಗೂ.!

ಮುಂದಿನ ದಿನಗಳಲ್ಲಿ ಈ ಸಮಸ್ಯೆಗೆ ಕೂಡಲೇ ಪರಿಹಾರ ಒದಗಿಸಬೇಕು. ವ್ಯವಸ್ಥಿತವಾಗಿ ಕಾಮಗಾರಿಕೆ ನಡೆಸಬೇಕು. ನಾಗರಿಕರಿಗೆ, ಪರಿಸರದ ನಿವಾಸಿಗಳಿಗೆ, ವಾಹನ ಸವಾರರಿಗೆ ತೊಂದರೆಯಾಗದಂತೆ ನೋಡಿ ಕೊಳ್ಳಬೇಕು. ಸಂಬಂಧಪಟ್ಟವರು ತಕ್ಷಣ ಜನರ ಕಷ್ಟಗಳಿಗೆ ಸ್ಪಂದಿಸಬೇಕಾಗಿದೆ.