ಆರೋಪಿಗಳ ಪರ ವಾದಿಸಿದ ನ್ಯಾಯವಾದಿ ಮಹೇಶ್ ಕಜೆ
ರಸ್ತೆಯಲ್ಲಿ ತೆಗೆಯಲಾಗಿದ್ದ ಹೊಂಡವನ್ನು ಜೆಸಿಬಿ ಸಹಾಯದಿಂದ ಮುಚ್ಚುವ ವೇಳೆ ಟಿಪ್ಪರ್ ಲಾರಿಗಳನ್ನು ಅಡ್ಡವಿಟ್ಟು ಅವಾಚ್ಯ ಶಬ್ದಗಳಿಂದ ಬೈದು,ಜಾತಿ ನಿಂದನೆ ಮಾಡಲಾಗಿದೆ ಎಂಬ ದೂರಿಗೆ ಸಂಬಂಧಿಸಿದ ಪ್ರಕರಣದಲ್ಲಿ ನಾಲ್ವರು ಆರೋಪಿಗಳಾದ ಜೋಸೆಫ್ ಯಾನೆ ಕಾಟಿ ಬೇಬಿ, ಪ್ರಿನ್ಸ್, ಸಂತೋಷ್ ಹಾಗೂ ಅಜಯ್ ರವರಿಗೆ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ರಸ್ತೆಯಲ್ಲಿ ತೆಗೆಯಲಾಗಿದ್ದ ಹೊಂಡವನ್ನು ಜೆಸಿಬಿ ಸಹಾಯದಿಂದ ಮುಚ್ಚುವ ವೇಳೆ ಟಿಪ್ಪರ್ ಲಾರಿಗಳನ್ನು ಅಡ್ಡವಿಟ್ಟು ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಲಾಗಿದೆ ಎಂದು ಆರೋಪಿಸಿ ನೆಲ್ಯಾಡಿ ಗ್ರಾಮದ ಮೊರಂಕಳ ನಿವಾಸಿ ಸದಾನಂದ ನಾಯ್ಕ ಎಂಬವರು ನೀಡಿದ ದೂರಿನಂತೆ ವಿ.ಜೆ. ಜೋಸೆಫ್ ಯಾನೆ ಕಾಟಿ ಬೇಬಿ, ಪ್ರಿನ್ಸ್, ಸಂತೋಷ, ಅಜಯ ಎಂಬವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು.
ಸದಾನಂದ ನಾಯ್ಕ ಅವರ ಮನೆಗೆ ಹೋಗುವ ರಸ್ತೆಗೆ ಜೂನ್ 7 ರಂದು ಹೊಂಡ ತೆಗೆಯಲಾಗಿದ್ದು, ಈ ಹೊಂಡ ಮುಚ್ಚುವುದಕ್ಕಾಗಿ ಅವರು ಜೂನ್ 11 ರಂದು ಸಂಜೆ ಜೆಸಿಬಿ ತರಿಸಿ ಕೆಲಸ ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ವಿ.ಜೆ. ಜೋಸೆಫ್ ಯಾನೆ ಕಾಟಿ ಬೇಬಿ ಎಂಬವರ ಕೆಲಸದಾಳುಗಳು ಎರಡು ಟಿಪ್ಪರ್ ಲಾರಿಯನ್ನು ತಂದು ಜೆಸಿಬಿಯನ್ನು ತೆಗೆಯದಂತೆ ಅಡ್ಡವಾಗಿ ನಿಲ್ಲಿಸಿದ್ದರು. ಈ ಬಗ್ಗೆ ಸದಾನಂದ್ ನಾಯ್ಕ್ ಹಾಗೂ ಅವರ ತಂಗಿ ವಾರಿಜ ಆಕ್ಷೇಪಿಸಿದ್ದರು. ಆರೋಪಿಗಳು ವಾರಿಜ ಅವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿದ್ದಾರೆ. ಅಲ್ಲದೇ ವಿ.ಜೆ. ಜೋಸೆಫ್ ರವರು ಜೆಸಿಬಿ ಚಾಲಕ ಕುಮಾರ್ ರವರ ಪೋನ್ ಗೆ ಕರೆ ಮಾಡಿ ಸದಾನಂದ ನಾಯ್ಕ್ ರವರ ಬಾವ ಮೋಹನ್ ನಾಯ್ಕ ರವರಿಗೆ ಪೋನ್ ಕೊಡುವಂತೆ ತಿಳಿಸಿ ಅವರಿಗೂ ಪೋನ್ ನಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ, ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಕರಣದ ಕುರಿತಂತೆ ಆರೋಪಿಗಳ ವಿರುದ್ಧ ಉಪ್ಪಿನಂಗಡಿ ಪೊಲೀಸರು ಕಲಂ: 341, 504, 506 ಜೊತೆಗೆ 34 ಐಪಿಸಿ ಮತ್ತು ಕಲಂ 3(1)(R) SC/ ST AMANDEMENT ACT 2015 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಇದೀಗ ಪ್ರಕರಣದ ನಾಲ್ವರು ಆರೋಪಿಗಳಿಗೂ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರುಗೊಳಿಸಿ ಆದೇಶ ಹೊರಡಿಸಿದೆ. ಆರೋಪಿಗಳ ಪರ ಪುತ್ತೂರಿನ ಖ್ಯಾತ ನ್ಯಾಯವಾದಿ ಮಹೇಶ್ ಕಜೆ ವಾದಿಸಿದ್ದರು.