ಸರ್ಕಾರ ಬದಲಾದರೂ ಖಾಸಗಿ ಆಸ್ಪತ್ರೆಯ ಆಟಾಟೋಪಕ್ಕೆ ಕಡಿವಾಣವಿಲ್ಲವೇ.?
ಇತ್ತೀಚೆಗೆ ವ್ಯಾಪಕ ಚರ್ಚೆಗೊಳಗಾದ ಮಂಗಳೂರಿನ ಎ.ಜೆ ಆಸ್ಪತ್ರೆಯಲ್ಲಿ ಗರ್ಭಿಣಿ ಹೆಣ್ಣುಮಗಳೊಬ್ಬಳ ಹೆರಿಗೆಗಾಗಿ ನಡೆದ ಶಸ್ತ್ರಚಿಕಿತ್ಸೆಯಿಂದಾದ ಎಡವಟ್ಟಿಗೆ ಗರ್ಭಕೋಶವನ್ನು ಕಳೆದುಕೊಂಡಿದ್ದಲ್ಲದೆ ಮೆದುಳು ನಿಷ್ಕ್ರಿಯಗೊಂಡು ಕೋಮಕ್ಕೆ ತೆರಳಿದ ಶಿಲ್ಪ ಆಚಾರ್ಯ 25-07-2023ರ ಮಂಗಳವಾರದಂದು ಕೊನೆಯುಸಿರೆಳೆದಿದ್ದಾರೆ.
ಮಂಗಳೂರಿನ ಪ್ರತಿಷ್ಠಿತವೆಂದು ಕರೆಸಿಕೊಳ್ಳುವ ಎ.ಜೆ ಆಸ್ಪತ್ರೆಗೆ ಹೆರಿಗೆಗೆಂದು ದಾಖಲಾಗಿರುವ ಗರ್ಭಿಣಿ ಹೆಣ್ಣುಮಗಳೊಬ್ಬಳು ಆಸ್ಪತ್ರೆಯ ಬೇಜವಾಬ್ದಾರಿ ಮತ್ತು ವೈದ್ಯರ ನಿರ್ಲಕ್ಷಕ್ಕೆ ಬಲಿಯಾಗಿದ್ದಾರೆ. ಹೆರಿಗೆಗಾಗಿ ನಡೆದ ಶಸ್ತ್ರಚಿಕಿತ್ಸೆಯಿಂದಾದ ಎಡವಟ್ಟಿಗೆ ಗರ್ಭಕೋಶವನ್ನು ಕಳೆದುಕೊಂಡಿದ್ದಲ್ಲದೆ ಮೆದುಳು ನಿಷ್ಕ್ರಿಯಗೊಂಡು ಕೋಮಕ್ಕೆ ಜಾರಿದ್ದಳು.

ವೇಣೂರಿನ ಶಿಲ್ಪಾ ಅನ್ನುವ ಗರ್ಭಿಣಿ ಹೆಣ್ಣುಮಗಳೊಬ್ಬಳು ತನ್ನ ಎರಡನೇ ಮಗುವಿನ ಚೊಚ್ಚಲ ಹೆರಿಗೆಗಾಗಿ ಜುಲೈ 2 ರಂದು ಎ.ಜೆ ಮೆಡಿಕಲ್ ಕಾಲೇಜಿನ ಆಸ್ಪತ್ರೆಗೆ ದಾಖಲಾಗುತ್ತಾರೆ. ಹೆರಿಗೆಗೆ ಮೊದಲು ಕಳೆದ ಒಂಬತ್ತು ತಿಂಗಳು ಎಲ್ಲಾ ರೀತಿಯ ವೈದ್ಯಕೀಯ ಪರೀಕ್ಷೆಗಳನ್ನು ಇದೇ ಅಸ್ಪತ್ರೆಯಲ್ಲಿ ಅಲ್ಲಿನ ವೈದ್ಯರೇ ನಡೆಸಿರುತ್ತಾರೆ. ಆರ್ಥಿಕವಾಗಿ ಹಿಂದುಳಿರುವ ಕುಟುಂಬ ಇಲ್ಲಿ ಉಚಿತ ಚಿಕಿತ್ಸೆ ಸಿಗುತ್ತದೆಂಬ ಕಾರಣಕ್ಕೆ ಎ.ಜೆ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ( ಉಚಿತದ ಹೆಸರಲ್ಲಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಯೋಗಕ್ಕಾಗಿ ಬಡವರ ದೇಹವನ್ನು ಬಳಸುವುದು ಮತ್ತು ಸರಕಾರದ ಉಚಿತ ಯೋಜನೆಗಳ ಸ್ಕೀಮ್ ಗಳನ್ನು ಲೂಟಿ ಹೊಡೆಯುವುದರ ಉದ್ದೇಶ ಅಡಗಿದೆ).
ಮನೆಮಂದಿಯ ಹೇಳಿಕೆಯ ಪ್ರಕಾರ ಜುಲೈ 2 ರಂದು ಹೆರಿಗೆ ನೋವು ಬಂದ ಹಿನ್ನಲೆಯಲ್ಲಿ ಒಳರೋಗಿಯಾಗಿ ದಾಖಲಾಗಿ,ಈ ವರೆಗೆ ಪರೀಕ್ಷಿಸುತ್ತಿದ್ದ ವೈದ್ಯರಿಗೆ ಕರೆ ಮಾಡಿದಾಗ ಇವತ್ತು ಆದಿತ್ಯವಾರ ನಾನು ಬರೋದಿಲ್ಲ ಬೇರೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡುತ್ತಾರೆಂದು ತಿಳಿಸಲಾಗುತ್ತೆ. ಶಸ್ತ್ರಚಿಕಿತ್ಸೆ ಮೂಲಕ ಹೆಣ್ಣು ಮಗುವೊಂದು ಆರೋಗ್ಯವಾಗಿ ಹುಟ್ಟುತ್ತದೆ. ನಂತರ ಅವಳ ಗರ್ಭಕೋಶದಲ್ಲಿ ಕಸ ಅಂಟಿಕೊಂಡಿರುತ್ತದೆ ಅದನ್ನು ತೆಗೆಯಬೇಕೆಂದು ಸಲಹೆ ನೀಡಿ,ಪ್ರಯತ್ನ ಪಟ್ಟಾಗ ಬ್ಲೀಡಿಂಗ್ ಪ್ರಾರಂಭವಾಗುತ್ತೆ. ದೇಹದಲ್ಲಿ ರಕ್ತದೊತ್ತಡದ ಏರಿಳಿತದಿಂದ ಪೀರ್ಸ್ ಪ್ರಾರಂಭವಾಗಿ ಅದನ್ನು ನಿಯಂತ್ರಿಸಲು ಪ್ರಯತ್ನಿಸುವ ಸಂದರ್ಭದಲ್ಲೇ ಮೆದುಳು ನಿಷ್ಕ್ರಿಯಗೊಂಡು ಕೋಮಕ್ಕೆ ತೆರಳುತ್ತಾರೆ. ಕೊನೆಗೆ ಇನ್ನೂ ಯಾವತ್ತೂ ಸರಿ ಹೊಂದದ ಸ್ಥಿತಿಗೆ ಬಂದು ತಲುಪುತ್ತಾರೆ. ಕಳೆದ 23 ದಿನಗಳಿಂದ ಮನೆ ಮಂದಿ ಆ ಹೆಣ್ಣುಮಗಳು ಗುಣ ಹೊಂದಲೆಂದು ಪಟ್ಟ ಪಾಡು,ಯಾತನೆಯನ್ನು ಹೇಳಲು ಸಾಧ್ಯವಿಲ್ಲ.ಆದರೆ ಮಂಗಳವಾರ 25-07-2023 ರಂದು ಶಿಲ್ಪ ಎಂಬ ಅ ಹೆಣ್ಣು ಮಗಳು ಮರಳಿ ಬಾರದ ಊರಿಗೆ ಪಯಣಿಸಿದಳು.

ಹಾಗಾದರೆ ಆರೋಗ್ಯವಂತ ಗರ್ಭಿಣಿ ಹೆಣ್ಣು ಮಗಳ ಮೇಲಾದ ಅನ್ಯಾಯಕ್ಕೆ ಹೊಣೆ ಯಾರು? ತಂತ್ರಜ್ಞಾನ ಮುಂದುವರಿದ ಈ ಕಾಲಘಟ್ಟದಲ್ಲಿ ಎಲ್ಲ ತಂತ್ರಜ್ಞಾನ ವನ್ನು ಅಳವಡಿಸಿ,ಪ್ರತಿಷ್ಠಿತ ಅಂತ ಕರೆದುಕೊಳ್ಳುವ ಆಸ್ಪತ್ರೆಯಲ್ಲಿ ಯಾವುದೇ ಎಡವಟ್ಟುಗಳಾಗದೆ ಆರೋಗ್ಯಯುತವಾಗಿ ಗರ್ಭಿಣಿ ಹೆಣ್ಣುಮಗಳ ಹೆರಿಗೆ ಮಾಡಿಸಲು ಯಾಕೆ ಸಾಧ್ಯವಾಗಿಲ್ಲ.? ಬಣ್ಣ ಬಣ್ಣದ ಜಾಹಿರಾತು ನೀಡಿ ಆರೋಗ್ಯದ ಕಾಳಜಿ, ನುರಿತ ವೈದ್ಯರು, ಗುಣಮಟ್ಟದ ಚಿಕಿತ್ಸೆ ಹೆಸರಲ್ಲಿ ಧೈರ್ಯ ತುಂಬಿ ಆಹ್ವಾನಿಸುವ ಆಸ್ಪತ್ರೆಯು ಈ ರೀತಿ ಎಡವಟ್ಟಾದ ಚಿಕಿತ್ಸೆಯಿಂದ ಜೀವವನ್ನೇ ಕಳೆದುಕೊಳ್ಳುವ ಕುಟುಂಬಗಳಿಗೆ ಯಾವ ರೀತಿಯ ಧೈರ್ಯವನ್ನು ತುಂಬುತ್ತದೆ.?.
ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಾಗಿ 25 ದಿನಗಳು ಕಳೆದಿದೆ. ಮನೆಯಲ್ಲಿ ಶಿಲ್ಪಳಾ 12 ವರುಷದ ಹೆಣ್ಣು ಮಗಳಾದ ನಮೃತ ತನ್ನ ತಾಯಿ ಮತ್ತು ಜನಿಸಿದ ಮುದ್ದು ತಂಗಿಯ ಜೊತೆ ಒಂದೆರಡು ದಿನದಲ್ಲಿ ಮರಳಿ ಮನೆಗೆ ಬರಬಹುದೆಂದು ಕಾಯುತ್ತಾ ತಾಯಿ ಮತ್ತು ತಂಗಿಯ ದಾರಿ ಕಾಯುತ್ತಿದ್ದಳು.ಅಮ್ಮ ಯಾವಾಗ ಮನೆ ಬರುತ್ತಾರೆಂದು ದಿನಾ ವಿಚಾರಿಸುವ ಹಿರಿಯ ಮಗಳಿಗೆ ಇವತ್ತು,ನಾಳೆ ಎಂದು ಕಳೆದ 25 ದಿನಗಳಿಂದ ಮನೆಮಂದಿ ಸಮಾಧಾನ ಪಡಿಸಿದರೂ ಆ ಮಗಳು ತನ್ನ ತಾಯಿ ಮತ್ತು ಜನಿಸಿದ ತಂಗಿಯ ಮುಖ ನೋಡುವ ತವಕದಲ್ಲಿ ದಿನಾ ಕೊರಗಿ ಕೊರಗಿ ಬೇಸತ್ತು ನಿರಾಶಾಳಾಗಿದ್ದಾಳೆ. ಇವತ್ತಲ್ಲ ನಾಳೆ ಗುಣ ಹೊಂದಬಹುದೆಂದು ಶಿಲ್ಪಳಾ ತಂದೆ, ತಾಯಿ, ಸಹೋದರ, ಗಂಡ ಆಸ್ಪತ್ರೆಯ ಬಾಗಿಲ ಬಳಿ ಕಾಯುತ್ತಾ ಕುಳಿತಿದ್ದರು.
ಪ್ರಕರಣ ಬೆಳಕಿಗೆ ಬಂದು ವ್ಯಾಪಕ ಚರ್ಚೆಗೊಳಗಾದರೂ ಜಿಲ್ಲಾಡಳಿತ, ಆರೋಗ್ಯ ಇಲಾಖೆ , ಸರಕಾರ, ಆರೋಗ್ಯ ಮಂತ್ರಿಗಳಿಗೆ ಬಡವರ ಕೂಗೂ ಕೇಳಲೇ ಇಲ್ಲ. ಸರಕಾರಗಳು ಬದಲಾದರೂ ಖಾಸಗೀ ಆಸ್ಪತ್ರೆಗಳ ಬಡವರ ಬಗೆಗಿನ ನಿರ್ಲಕ್ಷ್ಯ, ಬೇಜವಾಬ್ದಾರಿ, ಲೂಟಿಕೋರ ನೀತಿಗಳಿಗೆ ಕಡಿವಾಣ ತರಲು ಈ ಸರಕಾರಗಳಿಗೂ ಎದೆಗಾರಿಕೆ ಇಲ್ಲ. ಬಡವರ ಕಾಳಜಿ, ಏಳಿಗೆಗಳೆಲ್ಲವೂ ಬರಿಯ ಚುನಾವಣಾ ರಾಜಕೀಯಕಷ್ಟೇ ಸೀಮಿತ ಇಲ್ಲಿ ಆಡಳಿತ ದರಬಾರುಗಳೆಲ್ಲವೂ ಧಣಿಕರ ಕೈಯೊಳಗಷ್ಟೆ.
ಅನ್ಯಾಯ, ದಬ್ಬಾಳಿಕೆ ,ದೌರ್ಜನ್ಯ ಅದರಷ್ಟಕ್ಕೆ ಕೊನೆಯಾಗೋದಿಲ್ಲ ಅದರ ವಿರುದ್ಧ ಸಂಘಟಿತ ದ್ವನಿಮೊಳಗಬೇಕು. ಇಂದು ಶಿಲ್ಪ ನಾಳೆ ನಮ್ಮ ಮನೆಯ ಹೆಣ್ಣು ಮಗಳು ಬಲಿಯಾಗೋದಕ್ಕಿಂತ ಮುಂಚೆ ಜಾಗ್ರತರಾಗೋಣ.
ಇಂತಹ ಹಲವಾರು ಪ್ರಕರಣಗಳು ಮೆಡಿಕಲ್ ಕಾಲೇಜುಗಳಲ್ಲಿ ನಡೆಯುತ್ತಿದೆ. ಬಡವರ ಜೀವಕ್ಕೆ ಬೆಲೆನೇ ಇಲ್ಲದ ಸ್ಥಿತಿ ನಿರ್ಮಾಣಗೊಂಡಿದೆ. ಎ.ಜೆ ಮೆಡಿಕಲ್ ಆಸ್ಪತ್ರೆಯಲ್ಲಿ ನಡೆದ ಈ ಪ್ರಕರಣವನ್ನು ಜಿಲ್ಲಾಡಳಿತ , ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥ ವೈದ್ಯರ ಮೇಲೆ ಮತ್ತು ಬೇಜವಾಬ್ದಾರಿ ವಹಿಸಿದ ಆಸ್ಪತ್ರೆಯ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು.ಮಾತ್ರವಲ್ಲ ಅಸ್ಪತ್ರೆಯ ವೈದ್ಯರ ನಿರ್ಲಕ್ಷಕ್ಕೆ ಬಲಿಯಾದ ಶಿಲ್ಪಳ ಸಾವಿಗೆ ನ್ಯಾಯ ಒದಗಿಸಿ,ಅ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕಾಗಿದೆ.ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಇದು ನಾಗರಿಕರ ಒತ್ತಾಯವಾಗಿದೆ.