ಉ.ಪ್ರದೇಶ:ನ್ಯಾಯಾಲಯದ ಅವರಣದಲ್ಲಿ ನ್ಯಾಯವಾದಿಯ ಗುಂಡಿಕ್ಕಿ ಭೀಕರ ಹತ್ಯೆ

ರಾಷ್ಟ್ರೀಯ

ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ತಹಸಿಲ್ ನ್ಯಾಯಾಲಯದ ಸಂಕೀರ್ಣದಲ್ಲಿರುವ ಕೊಠಡಿಯಲ್ಲೇ ವಕೀಲರೊಬ್ಬರನ್ನು ಬುಧವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮನೋಜ್ ಚೌಧರಿ ಅಲಿಯಾಸ್ ಮೋನು ಜಾತ್ ಅವರು ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ತಮ್ಮ ಚೇಂಬರ್‌ನಲ್ಲಿ ಊಟ ಮಾಡುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಕೋಣೆಗೆ ನುಗ್ಗಿ ಅವರ ಮೇಲೆ ಗುಂಡು ಹಾರಿಸಿದ್ದಾರೆ. ಮೋನು ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಗುಂಡಿನ ದಾಳಿ ನಡೆದ ಸ್ವಲ್ಪ ಸಮಯದ ನಂತರ, ಪೊಲೀಸ್ ತಂಡ ವಿಧಿವಿಜ್ಞಾನ ತಜ್ಞರೊಂದಿಗೆ ಸ್ಥಳಕ್ಕೆ ಆಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪೊಲೀಸರು ನ್ಯಾಯಾಲಯದ ಆವರಣದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.

ಹತ್ಯೆಯಾದ ವಕೀಲರ ಪತ್ನಿ ಕವಿತಾ ಚೌಧರಿ ಅವರು ಅಮಿತ್ ದಾಗರ್, ನಿತಿನ್ ದಾಗರ್ ಮತ್ತು ಅವರ ಸಹಚರರಾದ ಮದನ್ ದಾಗರ್, ಅನುಜ್ ಹಾಗೂ ಪಾಲೂ ಅಲಿಯಾಸ್ ಅಮಿತ್ ವಿರುದ್ಧ ದೂರು ನೀಡಿದ್ದು, ಅವರೆಲ್ಲರೂ ಶೂಟೌಟ್ ಸಮಯದಲ್ಲಿ ನ್ಯಾಯಾಲಯದ ಆವರಣದಲ್ಲಿದ್ದರು.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ