ನಿಫಾ ವೈರಸ್ ಭೀತಿ: ಸುಳ್ಯ, ಪುತ್ತೂರು, ಬಂಟ್ವಾಳ, ತಲಪಾಡಿ ಗಡಿಭಾಗದಲ್ಲಿ ಜನರ ಆರೋಗ್ಯ ತಪಾಸಣೆಗೆ ಮುಂದಾದ ಇಲಾಖೆ

ಕರಾವಳಿ

ಕೇರಳದಲ್ಲಿ ಕಾಣಿಸಿಕೊಂಡ ನಿಫಾ ವೈರಸ್ ಭೀತಿಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕೂ ತಾಲ್ಲೂಕಿನ ಗಡಿಭಾಗದಲ್ಲಿ ಜನರ ತಾಪಮಾನ ಪರೀಕ್ಷೆಗೆ ತಂಡಗಳನ್ನು ಆರೋಗ್ಯ ಇಲಾಖೆ ಸಿದ್ಧಪಡಿಸಿದ್ದು, ಸೆಪ್ಟೆಂಬರ್ 17 ರಿಂದ ಈ ಎಲ್ಲಾ ತಂಡಗಳು ಕಾರ್ಯರೂಪಕ್ಕೆ ಇಳಿಸುವ ಕೆಲಸವಾಗಲಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಭಾಗದಲ್ಲಿ ಜಾಲ್ಸೂರು, ಮಂಡೆಕೋಲು, ಬಡ್ಡಡ್ಕ ಸೇರಿದಂತೆ ಇದರ ಆಸುಪಾಸಿನ ಊರುಗಳು, ಪುತ್ತೂರಿನ ಸ್ವರ್ಗ, ಮೇನಾಲ ಹಾಗೂ ಸುಳ್ಯಪದವು, ಬಂಟ್ವಾಳದ ಸಾರಡ್ಕ, ಸಾಲೆತ್ತೂರು, ಕನ್ಯಾನ, ಬೀರಿಪದವು ಹಾಗೂ ಮಂಗಳೂರಿನ ತಲಪಾಡಿ ಭಾಗದಲ್ಲಿ ಆರೋಗ್ಯ ಇಲಾಖೆ ಜನರ ತಾಪಮಾನ ಪರೀಕ್ಷೆ ಮಾಡಲು ಆರೋಗ್ಯ ಕಾರ್ಯಕರ್ತರನ್ನು ನೇಮಿಸಿದೆ.

ಈಗಾಗಲೇ ಪ್ರಾಯೋಗಿಕ ನೆಲೆಯಲ್ಲಿ ತಂಡಗಳು ಕಾರ್ಯರೂಪಕ್ಕೆ ಇಳಿದರೂ ಕೂಡ ಸೆಪ್ಟೆಂಬರ್ 17 ರಿಂದ ಇದು ಪೂರ್ಣ ರೂಪದಲ್ಲಿ ತಂಡ ಸಿದ್ಧವಾಗಲಿದೆ. ಮುಖ್ಯವಾಗಿ ಈ ತಂಡ ಜನರ ತಾಪಮಾನ ಪರೀಕ್ಷೆ ಮಾಡಿಸಿಕೊಂಡು ಜ್ವರದ ಲಕ್ಷಣಗಳು ಗೋಚರವಾದರೆ ಈ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲಕ ಚಿಕಿತ್ಸೆ ನೀಡುವ ಕಾರ್ಯವನ್ನು ಕೈಗೊಳ್ಳಲಿದೆ.

ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಈ ಕಾರ್ಯವನ್ನು ಮಾಡಲಿದ್ದಾರೆ. ಈಗಾಗಲೇ ಇಂತಹ ತಂಡ ರಚನೆಯಾಗಿ ಆರೋಗ್ಯ ಇಲಾಖೆ ಕೂಡ ಸೂಚನೆಗಳನ್ನು ಕಳುಹಿಸಿದ್ದು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೂಡ ಆದೇಶ ಹೊರಡಿಸಿದ್ದಾರೆ.