ಜನನ ಮರಣ ನೋಂದಣಿಯಲ್ಲಿ ಯಾವುದೇ ವಿಳಂಬ ಹಾಗೂ ಸಾಮಾನ್ಯ ಜನರು ತೊಂದರೆಗಳಿಗೆ ಒಳಗಾಗಬಾರದು. ಇ-ಜನ್ಮ ತಂತ್ರಾಂಶದಲ್ಲಿ ನೋಂದಣಿಯಾಗುವ ಮರಣ ಘಟನೆಗಳಿಗೆ ಮರಣ ಕಾರಣಗಳನ್ನು ಸರಿಯಾಗಿ ನಮೂದಿಸಬೇಕು ಎಂದು ಪ್ರಭಾರ ಜಿಲ್ಲಾಧಿಕಾರಿ ಡಾ.ಆನಂದ್ ಕೆ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜನನ ಮರಣ ನೋಂದಣಿ ಜಿಲ್ಲಾಮಟ್ಟದ ಸಮನ್ವಯ ಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸೆಕ್ಷನ್ 18 ರ ಪ್ರಕಾರ ಜಿಲ್ಲೆಯ ಎಲ್ಲ ನೋಂದಣಿ ಘಟಕವು ನಿಯಮಾನುಸಾರ ನೋಂದಣಿ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಹಾಗೂ ಶೇಕಡ 100 ರಷ್ಟು ಘಟನೆಗಳು ದಾಖಲಾತಿಯಾಗಿರುವ ಬಗೆಗೆ ಪರಿಶೀಲನೆಯನ್ನು ಕಂದಾಯ ಇಲಾಖೆ, ನಗರ ಅಭಿವೃದ್ಧಿ, ಸಾಂಖ್ಯಿಕ ಇಲಾಖೆ ಅಧಿಕಾರಿಗಳು ನಡೆಸಬೇಕು. ಪರಿಶೀಲನಾ ವರದಿಯನ್ನು ಪ್ರತಿ ತ್ರೈ ಮಾಸಿಕಕ್ಕೆ ಕಳುಹಿಸಬೇಕಾಗಿರುತ್ತದೆ. ಜನನ ಮರಣ ನೋಂದಣಿಗೆ ಆಧಾರ್ ಕಡ್ಡಾಯವಲ್ಲ, ಬೇರೆ ದಾಖಲೆಗಳಾದ ಲೈಸೆನ್ಸ್ ಮುಂತಾದ ದಾಖಲೆಗಳನ್ನು ಬಳಸಬಹುದಾಗಿದೆ. ಗ್ರಾಮ ಒನ್ ಕಚೇರಿಯಲ್ಲಿ ಕೂಡ ಸಾರ್ವಜನಿಕರು ಅರ್ಜಿ ಸಲ್ಲಿಸಬಹುದಾಗಿದೆ ಎಂದರು.