ರಾಜ್ಯದಲ್ಲಿ ಕರ್ನಾಟಕ ಶಿಕ್ಷಣ ಇಲಾಖೆಯು ಈ ಬಾರಿ 15 ದಿನಗಳ ಕಾಲ ದಸರಾ ರಜೆ ಘೋಷಣೆ ಮಾಡಿದೆ. ಆದರೆ ಈ ಹಿಂದೆ ನೀಡಲಾಗುತ್ತಿರುವ ರಜೆಗೆ ಹೋಲಿಕೆ ಮಾಡಿದ್ರೆ ಈ ಬಾರಿಯೂ ರಜೆ ಕಡಿತವಾಗಿದೆ. ಇದು ರಾಜ್ಯದ ಶಿಕ್ಷಕರ ಅತೃಪ್ತಿಗೆ ಕಾರಣವಾಗಿದ್ದು, ಇದೀಗ ದಸರಾ ವಿಸ್ತರಣೆ ಮಾಡುವಂತೆ ಶಿಕ್ಷಕರ ಸಂಘ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಶಿಕ್ಷಣ ಸಚಿವರಿಗೆ ಪತ್ರ ಬರೆದಿದೆ
ಕರ್ನಾಟಕದ ಶಾಲೆಗಳಿಗೆ ಈಗಾಗಲೇ ದಸರಾ ರಜೆಯನ್ನು ನೀಡಲಾಗಿದೆ. ನವರಾತ್ರಿಯ ಆಚರಣೆ ನಡೆಯುತ್ತಿದೆ. ಅಕ್ಟೋಬರ್ 24 ರಂದು ವಿಜಯದಶಮಿ ಆಚರಿಸಲಾಗುತ್ತಿದೆ. ಹಬ್ಬದ ಮರುದಿನ ಅಕ್ಟೋಬರ್ 25 ರಂದು ಶಾಲೆ ಆರಂಭಿಸಲು ಶಿಕ್ಷಣ ಇಲಾಖೆ ಆದೇಶಿಸಿದೆ. ಹಬ್ಬದ ಮರುದಿನ ಶಾಲಾರಂಭ ಮಾಡುವುದು ಮಕ್ಕಳ ಮೇಲೆ ಒತ್ತಡ ಹೆಚ್ಚಲಿದೆ ಅನ್ನೋ ಆತಂಕ ವ್ಯಕ್ತವಾಗಿದೆ.
ಸದ್ಯ ಮಕ್ಕಳು ಶಾಲಾ ರಜೆಯ ಮಜಾ ಅನುಭವಿಸುತ್ತಿದ್ದಾರೆ. ಜೊತೆಗೆ ದಸರಾ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ. ಹಬ್ಬದ ಮರು ದಿನ ಶಾಲಾರಂಭ ಮಾಡುವ ಬದಲು ದಸರಾ ರಜೆಯನ್ನು ಅಕ್ಟೋಬರ್ 30ರ ವರೆಗೆ ವಿಸ್ತರಿಸುವಂತೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಪತ್ರ ಬರೆಯುತ್ತಿದ್ದಾರೆ. ಕೊರೊನಾ ಬೆನ್ನಲ್ಲೇ ಶಾಲೆಗಳ ದಸರಾ ರಜೆಗಳಿಗೆ ಕತ್ತರಿ ಬಿದ್ದಿತ್ತು. ಆದರೆ ಈ ಬಾರಿಯೂ ಶಿಕ್ಷಣ ಇಲಾಖೆಯು ದಸರಾ ರಜೆಯನ್ನು ಮೊಟಕುಗೊಳಿಸಿದೆ. ಈ ಹಿಂದೆ ದಸರಾ ರಜೆ ಒಂದು ತಿಂಗಳು ಇದ್ದು, ಈಗ ಕೇವಲ 15 ದಿನಕ್ಕೆ ಇಳಿಕೆಯಾಗಿದೆ. ಶಾಲೆಗಳಿಗೆ ದಸರಾ ರಜೆಯನ್ನು ಕಡಿತ ಮಾಡುವುದು ಸರಿಯಲ್ಲ ಎಂಬುದು ಶಿಕ್ಷಕರ ವಾದ.
ಈಗಾಗಲೇ ರಜೆ ವಿಸ್ತರಣೆಯ ಬಗ್ಗೆ ಶಿಕ್ಷಕರ ಸಂಘ ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರನ್ನು ಆಗ್ರಹಿಸಿದೆ. 25ರಂದು ಶಾಲೆ ಆರಂಭವಾಗಲಿದೆ ಆದರೆ, ಇನ್ನು ಇತರ ಇಲಾಖೆ ನೌಕರರಿಗೆ 30 ದಿನಗಳ ಗಳಿಕೆ ರಜೆ ಸಿಗುತ್ತದೆ, ಆದರೆ ಶಿಕ್ಷಕರಿಗೆ ಕೇವಲ 10 ಗಳಿಕೆ ದಿನಗಳ ರಜೆ ಸಿಗುತ್ತದೆ. ದಸರಾ ಹಾಗೂ ಬೇಸಿಗೆ ರಜೆ ಕಾರಣದಿಂದಲೇ ಗಳಿಕೆ ರಜೆ ಕಡಿಮೆ ಇದೆ. ಹೀಗಾಗಿ ದಸರಾ ರಜೆ ಕಡಿತ ಮಾಡದಂತೆ ಸರಕಾರಕ್ಕೆ ಒತ್ತಡ ಹೇರಿದ್ದಾರೆ