ಬೆಂಗಳೂರು ಕಂಬಳದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಲೆಕುಡಿಯ ಜನಾಂಗದವರ ಯಜಮಾನಿಕೆಯ ಕೋಣಗಳು ಶನಿವಾರ ಗಮನ ಸೆಳೆದವು. ಅಂದಾಜು 15-17 ಸಾವಿರಷ್ಟು ಜನಸಂಖ್ಯೆ ಇರುವ ಮಲೆಕುಡಿಯ ಜನಾಂಗದ ಏಕೈಕ ಕೋಣಗಳ ಜೋಡಿ ‘ಗುಂಡ’ ಹಾಗೂ ‘ದಾಸ’ ಭಾಗವಹಿಸಿವೆ. ಕೋಣಗಳ ಜತೆ ಅದರ ನಿಯಂತ್ರಣ, ಆರೈಕೆಗೆ ಸರಿ-ಸುಮಾರು 20 ಮಂದಿ ಆಗಮಿಸಿದ್ದಾರೆ.
ಮಂಗಳೂರಿನ ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿಯವರು ಈ ಕೋಣಗಳ ಪ್ರಾಯೋಜಕತ್ವ ವಹಿಸಿದ್ದು, ಮಲೆಕುಡಿಯರ ಹೆಸರಿನಲ್ಲೇ ಕೋಣಗಳು ಓಡುತ್ತಿರುವುದು ಇದೇ ಮೊದಲ ಬಾರಿ. ಇದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಡಿಡುಪೆ ಗ್ರಾಮದ ಕಾಡಂಚಿನ ಪ್ರದೇಶ ಬಿಳಿಯೂರು ಎಂಬಲ್ಲಿನ ನಾರಾಯಣ ಮಲೆಕುಡಿಯ ಈ ಕೋಣದ ಮಾಲೀಕರು.
ಈ ಹಿಂದೆ ಹಲವು ಕಂಬಳಗಳಲ್ಲಿ ಭಾಗವಹಿಸಿದ ಅನುಭವ ಈ ಕೋಣಗಳಿಗಿವೆ. ಆರ್ಥಿಕವಾಗಿ ಹಿಂದುಳಿದವರಾಗಿದ್ದರಿಂದ ಊರಿನ ಸಮೀಪ ನಡೆಯುತ್ತಿದ್ದ ಕಂಬಳಕ್ಕೆ ಮಾತ್ರ ಕೋಣಗಳನ್ನು ಕರೆದುಕೊಂಡು ಹೋಗಲಾಗುತ್ತಿತ್ತು. ನೇಗಿಲು ಹಿರಿಯ ವಿಭಾಗದಲ್ಲಿ ಇಲ್ಲಿನ ಕಂಬಳದಲ್ಲಿ ಸ್ಪರ್ಧೆ ಮಾಡುತ್ತಿವೆ. ಇವರ ತಂಡದಲ್ಲಿ ಮಲೆಕುಡಿಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಬೇರೆ ಸಮುದಾಯದವರೂ ಕೂಡ ಇದ್ದಾರೆ.
ಕೆಲ ದಿನಗಳ ಹಿಂದೆ ಪ್ರವಾಸಕ್ಕೆಂದು ದಿಡುಪೆಗೆ ಹೋಗಿದ್ದಾಗ ಈ ಕೋಣಗಳನ್ನು ನೋಡಿದ್ದ ದಿನೇಶ್ ಹೆಗ್ಡೆಯವರು ಬೆಂಗಳೂರು ಕಂಬಳದಲ್ಲಿ ಭಾಗಿಯಾಗಲು ಕೋಣದ ಯಜಮಾನರಿಗೆ ಆರ್ಥಿಕ ಸಮಸ್ಯೆ ಇರುವುದನ್ನು ಮನಗಂಡು ನಾನೇ ಪ್ರಾಯೋಜಕತ್ವ ವಹಿಸಿಕೊಂಡು ಮಲೆಕುಡಿಯ ಸಮುದಾಯದವರ ಕೋಣಗಳು ಬೆಂಗಳೂರು ಕಂಬಳದಲ್ಲಿ ಬಾಗವಹಿಸುವಂತೆ ಮಾಡುವಲ್ಲಿ ಸಹಕಾರಿಯಾದರು.