ಸಾರ್ವಜನಿಕರ ಹಣ ಲೂಟಿ ಮಾಡಿ ಪರಾರಿ; ರಾಯಲ್ ತ್ರಿವಂಕೂರ್ ಕಂಪೆನಿ ವಿರುದ್ಧ ಪ್ರತಿಭಟನೆ, ವಂಚಕರ ಬಂಧಿಸಿ ಆಸ್ತಿ ಮುಟ್ಟುಗೋಲಿಗೆ ಆಗ್ರಹ

ಕರಾವಳಿ

ಮಂಗಳೂರು : ನಗರದ ಪಿವಿಎಸ್ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ರಾಯಲ್ ತ್ರಿವಂಕೂರು ಎಂಬ ಹಣಕಾಸು ಸಂಸ್ಥೆಯು ಸಾರ್ವಜನಿಕರಿಂದ ಪಿಗ್ಮಿ, ವಿವಿಧ ಠೇವಣಿಗಳ ಮೂಲಕ ಕೋಟ್ಯಂತರ ಹಣ ವಂಚನೆ ಕಚೇರಿಗೆ ಬೀಗ ಹಾಕಿ ಪರಾರಿಯಾಗಿದೆ. ರೈತರ ಹೆಸರಿನಲ್ಲಿ ಕೇರಳ ಕರ್ನಾಟಕ ತಮಿಳುನಾಡು, ಆಂಧ್ರಪ್ರದೇಶ, ಪುದುಚೇರಿ, ದೇಶದ ಮತ್ತಿತರ ರಾಜ್ಯಗಳಲ್ಲಿ ಶಾಖೆಗಳನ್ನು ತೆರೆದು ಸಣ್ಣ ಆದಾಯದ ಜನ ವಿಭಾಗವನ್ನೇ ಗುರಿಯಾಗಿಟ್ಟು ಕೊಂಡು ವಂಚನೆ ಮಾಡಿದೆ. ಮಂಗಳೂರಿನಲ್ಲಿ ಕೂಲಿ ಕಾರ್ಮಿಕರು, ಬೀದಿ ವ್ಯಾಪಾರಿಗಳು,ಸಣ್ಣ ಸಣ್ಣ ವ್ಯಾಪಾರಸ್ಥರು ಪ್ರತಿನಿತ್ಯ ಪಿಗ್ಮಿಯ ಹೆಸರಿನಲ್ಲಿ ಈ ಹಣಕಾಸು ಸಂಸ್ಥೆಗೆ ಹಣ ಪಾವತಿಸಿ ವಂಚನೆಗೆ ಒಳಗಾಗಿದ್ದಾರೆ. ಕಂಪೆನಿಯ ವಂಚನೆಯನ್ನು ಖಂಡಿಸಿ ಸಂತ್ರಸ್ತ ಗ್ರಾಹಕರು ಇಂದು ಡಿವೈಎಫ್ಐ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಅವರು ಬಡವರು, ಅವಿದ್ಯಾವಂತರನ್ನೇ ಗುರಿಯಾಗಿಸಿ ವಂಚನೆ ಮಾಡಲಾಗಿದೆ. ಮಂಗಳೂರಿನಲ್ಲಿ ಸುಮಾರು 50ಕೋಟಿ ಯಷ್ಟು ವಂಚನೆ ಆಗಿರುವ ಅನುಮಾನ ಇದೆ. ಸರಕಾರ ಸಂತ್ರಸ್ತರ ಪರವಾಗಿ ನಿಲ್ಲಬೇಕು. ವಂಚನೆ ಮಾಡಿದ ರಾಯಲ್ ತ್ರಿವಂಕೂರು ಕಂಪೆನಿ ಆಡಳಿತ ಮಂಡಳಿಯ ಎಲ್ಲ ನಿರ್ದೇಶಕರನ್ನು ಬಂಧಿಸಿ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಬೇಕು ಮತ್ತು ರಾಯಲ್ ತ್ರಿವಂಕೂರು ಕಂಪೆನಿ ಬ್ಯಾಂಕ್ ಖಾತೆಗಳನ್ನು ಯಾವುದೇ ವ್ಯವಹಾರ ನಡೆಸದಂತೆ ತಡೆಹಿಡಿದು ಸಂತ್ರಸ್ತ ಜನರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಡಿವೈಎಫ್ಐ ಮುಖಂಡರಾದ ನವೀನ್ ಕೊಂಚಾಡಿ, ರಿಜ್ವಾನ್ ಹರೇಕಳ, ತಯ್ಯುಬ್ ಬೆಂಗ್ರೆ, ರಫೀಕ್ ಹರೇಕಳ, ಬೀದಿಬದಿ ವ್ಯಾಪಾರಸ್ಥರ ಸಂಘದ ಮುಖಂಡರಾದ ಆಸೀಫ್ ಬಾವ ಉರುಮನೆ, ರಿಯಾಜ್ ಎಲ್ಯಾರ್ ಪದವು, ಜಗದೀಶ್, ಹಂಝ, ಸರೋಜಿನಿ ಮುಂತಾದವರು ಉಪಸ್ಥಿತರಿದ್ದರು