ಪ್ರತಿಭಟನೆಯಿಂದ ಪೊಲೀಸರಿಗೆ ಸಂಕಷ್ಟ ಶುರು.! ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪೊಲೀಸ್‌ ಸಿಬ್ಬಂದಿಯ ವಿರುದ್ದ ಕ್ರಮಕ್ಕೆ ಮುಂದಾದ ಇಲಾಖೆ

ರಾಜ್ಯ

ಇತ್ತೀಚಿಗೆ ಚಿಕ್ಕ ಮಂಗಳೂರಿನಲ್ಲಿ
ಪೊಲೀಸ್‌ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ಹಾಗೂ ಪೊಲೀಸ್‌ ಠಾಣಾಧಿಕಾರಿಯ ಮೇಲೆ ಹಲ್ಲೆ ನಡೆಸಿದ್ದಲ್ಲದೇ, ಮದ್ಯಪಾನ ಮಾಡಿ ಬಂದು ಪೊಲೀಸ್‌ ಠಾಣೆಯಲ್ಲಿ ದಾಂಧಲೆ ಎಬ್ಬಿಸಿದ್ದಾರೆ ಎಂದು ಆರೋಪಿಸಿ ವಕೀಲರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಡೆಸಿದ್ದ ಪ್ರತಿಭಟನೆಯಿಂದ ಪೊಲೀಸರಿಗೆ ಸಂಕಷ್ಟ ಶುರುವಾಗಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪೊಲೀಸ್‌ ಸಿಬ್ಬಂದಿಯನ್ನು ಗುರುತಿಸಿ ಅವರ ವಿರುದ್ದ ಕ್ರಮ ಕೈಗೊಳ್ಳಲು ಇಲಾಖೆ ಮುಂದಾಗಿದೆ.

ಹೆಲ್ಮೆಟ್‌ ಧರಿಸದೆ ವಾಹನ ಚಲಾಯಿಸುತ್ತಿದ್ದ ಚಿಕ್ಕಮಂಗಳೂರಿನ ವಕೀಲ ಪ್ರೀತಮ್‌ ರನ್ನು ಪ್ರಶ್ನಿಸಿದ್ದ ಕಾರಣಕ್ಕೆ ವಿವಾದ ಪ್ರಾರಂಭವಾಗಿತ್ತು. ಪಿಎಸ್‌ಐ ಮಹೇಶ್‌ ಸೇರಿದಂತೆ ಆರು ಪೊಲೀಸ್‌ ಸಿಬ್ಬಂದಿ ವಿರುದ್ದ ಎಫ್‌ಐಆರ್‌ ದಾಖಲಾದುದನ್ನು ಖಂಡಿಸಿ ಪೊಲೀಸರು ಪ್ರತಿಭಟನೆ ನಡೆಸಿದ್ದರು. ಈ ಕುರಿತು ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕರಣದಲ್ಲಿ ಪೊಲೀಸರ ವಿರುದ್ದ ಏನು ಕ್ರಮ ಕೈಗೊಂಡಿದ್ದೀರೆಂದು ನ್ಯಾಯಾಧೀಶರು ಪ್ರಶ್ನಿಸಿದ್ದರು. ಮಾಧ್ಯಮಗಳಲ್ಲಿ ಬಿತ್ತರಗೊಂಡ ವರದಿ, ಮಾಹಿತಿ, ಫೋಟೋ, ವಿಡಿಯೋ ಹಾಗೂ ಸ್ಥಳೀಯ ಸಿಸಿಟಿವಿ ಕ್ಯಾಮರ ದೃಶ್ಯಾವಳಿಗಳನ್ನು ಆಧರಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪೊಲೀಸ್‌ ಸಿಬ್ಬಂದಿ ಹೆಸರುಗಳನ್ನು ಗುರುತಿಸಲಾಗುತ್ತಿದೆ. ವರದಿ ಸಿದ್ದಗೊಂಡ ಬಳಿಕ ಅದನ್ನು ಹಿರಿಯ ಅಧಿಕಾರಿಗಳಿಗೆ ರವಾನಿಸಿ ಮುಂದಿನ ಕ್ರಮದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಇಲಾಖೆ ತೀರ್ಮಾನಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.