ಕೇರಳ,ತಮಿಳುನಾಡು ರಾಜ್ಯಗಳಲ್ಲಿ ಮತ್ತೆ ಕೊರೋನಾ ಉಲ್ಬಣವಾಗಿದ್ದು, ಲಾಕ್ ಡೌನ್ ವಿಧಿಸುವ ಸಾಧ್ಯತೆ ಇದೆ

ರಾಷ್ಟ್ರೀಯ

ದೇಶವನ್ನೇ ಕಾಡಿ ಬೆಚ್ಚಿ ಬೀಳಿಸಿದ ಸಂಕ್ರಾಮಿಕ ರೋಗ ಕೊರೋನಾ ಮತ್ತೆ ಕೇರಳದಲ್ಲಿ ಉಲ್ಬಣವಾಗಿದ್ದು, ಜನ ಸಂಚಾರಕ್ಕೆ ನಿರ್ಬಂಧಗಳನ್ನು ವಿಧಿಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.ಭಾರತದಲ್ಲಿ ಮೊದಲ ಪ್ರಕರಣ ಕೇರಳದಲ್ಲೇ ಕಂಡು ಬಂದಿತ್ತು. ಈಗ ಮತ್ತೆ ಅದೇ ರಾಜ್ಯದಲ್ಲಿ ಸಂಕ್ರಾಮಿಕ ರೋಗದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ನಿರಂತರ ಮುಂಜಾಗ್ರತೆ ವಹಿಸುವಂತೆ ಸೂಚನೆಗಳನ್ನು ನೀಡಲಾಗಿದೆ.

ಸಿಂಗಾಪುರ, ಮಲೇಷ್ಯಾ ಮತ್ತು ಇಂಡೋನೇಷ್ಯಾದಂತಹ ಹಲವಾರು ಆಗ್ನೇಯ ಏಷ್ಯಾದ ದೇಶಗಳಲ್ಲಿ ಕೊರೋನಾ ಪ್ರಕರಣಗಳು ದಾಖಲೆಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವ ಈ ಸಮಯದಲ್ಲಿ ಕೇರಳದಲ್ಲೂ ಕೊರೋನಾ ತ್ವರಿತ ಏರಿಕೆ ಕಂಡಿದೆ. ಓಮಿಕ್ರಾನ್‌ನ ಉಪ ತಳಿಯಾದ ಜೆಎನ್.1 ಹೆಚ್ಚಳವು ಕೇರಳದಲ್ಲಿ ಈಗ ಆತಂಕಕ್ಕೆ ಕಾರಣವಾಗಿದೆ. ಆದರೆ ಈ ಬಗ್ಗೆ ಚಿಂತಿಸಬೇಕಾಗಿಲ್ಲ. ಆದರೆ ವೈರಸ್‌ಗಳ ನಿರಂತರ ಮೇಲ್ವಿಚಾರಣೆ ಮಾಡುವ ಅಗತ್ಯವಿದೆ ಎಂದು ತಜ್ಞರು ಹೇಳಿದ್ದಾರೆ. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಲೇ ಇದ್ದರೆ ಕೇರಳ ಸರ್ಕಾರವು ಸೂಕ್ಷ್ಮ ಪ್ರದೇಶಗಳಲ್ಲಿ ನಿರ್ಬಂಧಗಳು ಮತ್ತು ತಡೆಗಟ್ಟುವ ಕ್ರಮಗಳನ್ನು ವಿಧಿಸಬಹುದು ಎಂದು ಹೇಳಲಾಗುತ್ತಿದೆ.

ಕೇವಲ ಒಂದು ತಿಂಗಳಲ್ಲಿ ಕೇರಳದಲ್ಲಿ ಸಕ್ರಿಯ ಪ್ರಕರಣಗಳು 33 ರಿಂದ 768 ಕ್ಕೆ ಏರಿಕೆಯಾಗಿದ್ದು ಆತಂಕವನ್ನು ಉಂಟುಮಾಡಿದೆ. ಇದೀಗ ನೆರೆಯ ತಮಿಳುನಾಡಿನಲ್ಲೂ ಸಂಕ್ರಾಮಿಕ ರೋಗ ಕೊರೋನಾ ಉಲ್ಬಣವಾಗಿ, ಅತಂಕ ಸೃಷ್ಠಿಸಿದೆ.