ಮುಸ್ಲಿಂ ಮಹಿಳೆಯರನ್ನು ನಿಂದಿಸುವ ಹಾಗೂ ಸೌಹಾರ್ಧತೆಗೆ ಭಂಗ ಉಂಟು ಮಾಡುವ ಪ್ರಚೋದನಾಕಾರಿ ಹೇಳಿಕೆ ನೀಡಿದ ಕಲ್ಲಡ್ಕ ಪ್ರಭಾಕರ ಭಟ್ ನನ್ನು ಕೂಡಲೇ ಬಂಧಿಸಿ – ಸಿಪಿಐಎಂ.

ಕರಾವಳಿ

ಕಳೆದೆರಡು ದಿನಗಳ ಹಿಂದೆ ಶ್ರೀ ರಂಗ ಪಟ್ಟಣದಲ್ಲಿ ಒಂದು ಸಮಾವೇಶವನ್ನುದ್ದೇಶಿಸಿ ಮುಸ್ಲಿಂ ಮಹಿಳೆಯರನ್ನು ಅವಹೇಳನಕಾರಿಯಾಗಿ ನಿಂದಿಸಿ ಕೋಮು ಪ್ರಚೋದಕ ಹೇಳಿಕೆ ನೀಡಿರುವ ಬಿಜೆಪಿ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ರನ್ನು ಈ ಕೂಡಲೇ ಬಂಧಿಸಿ ಅವರ ಮೇಲೆ ಕಾನೂನಿನ ಕ್ರಮ ಕೈಗೊಳ್ಳುವಂತೆ ಸಿಪಿಐಎಂ ರಾಜ್ಯ ಸರಕಾರವನ್ನು ಬಲವಾಗಿ ಒತ್ತಾಯಿಸುತ್ತದೆ. ಈ ಹೇಳಿಕೆ ಅವರ ಕೀಳುತನದ ಮಟ್ವವನ್ನು ತೋರ್ಪಡಿಸುತ್ತದೆ ಎಂದು ಖಂಡಿಸಿದೆ.

ಇದು ದಕ್ಷಿಣ ಕರ್ನಾಟಕದ ಮತ್ತು ಮೈಸೂರು ಭಾಗದಲ್ಲಿನ ಶಾಂತಿಯ ವಾತಾವರಣವನ್ನು ಕದಡಲು ವಹಿಸುತ್ತಿರುವ ಕೋಮುವಾದಿಗಳ ಸಂಚಿನ ಮುಂದುವರಿಕೆಯ ಭಾಗವಾಗಿದೆ ಎಂಬುದನ್ನು ಎಲ್ಲ ಪ್ರಗತಿಪರರು ಹಾಗೂ ಪ್ರಜಾಪ್ರಭುತ್ವವಾದಿಗಳು ಗಮನಿಸಬೇಕೆಂದು ಸಿಪಿಐಎಂ ಹೇಳಿದೆ.

ರಾಜ್ಯ ಸರಕಾರ ರಾಜ್ಯದ ಸೌಹಾರ್ಧತೆಗೆ ಗಂಭೀರ ಧಕ್ಕೆ ತರುತ್ತಿರುವ ಮತ್ತು ಅಲ್ಪ ಸಂಖ್ಯಾತರನ್ನು ಅವಾಚ್ಯವಾಗಿ ನಿಂದಿಸುತ್ತಿರುವ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸದಿರುವುದು ನಾಚಿಕೆಗೇಡು ! ಎಂದು ತೀವ್ರವಾಗಿ ಖಂಡಿಸಿದೆ. ಸರಕಾರದ ದಿವ್ಯ ಮೌನವು ಇಂತಹ ಅವಹೇಳನಕಾರಿ ಹಾಗು ಪ್ರಚೋದನಕಾರಿ ಹೇಳಿಕೆಗಳಿಗೆ ಸಂಬಂದಿಸಿ ಅದರ ಸಮ್ಮತಿಯಂತೆ ಕಂಡು ಬರುತ್ತಿದೆ ಎಂದು ಸಿಪಿಐಎಂ ರಾಜ್ಯ ಸರಕಾರದ ಜವಾಬ್ದಾರಿರಹಿತ ನಡೆಯನ್ನು ಕಟುವಾಗಿ ಠೀಕಿಸಿದೆ.

ಇಂತಹ ಪ್ರಕರಣಗಳಲ್ಲಿ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸುವ ಎದೆಗಾರಿಕೆಯನ್ನು ತೋರಬೇಕೆಂದು ಮತ್ತು ಯಾರಾದರೂ ದೂರು ದಾಖಲಿಸಲಿ ಎಂದು ಕಾಯುತ್ತಾ ಕುಳಿತುಕೊಳ್ಳುವ ಜನವಿರೋದಿ ನೀತಿಯನ್ನು ರಾಜ್ಯ ಸರಕಾರ ಈ ಕೂಡಲೆ ಕೈ ಬಿಡಬೇಕೆಂದು ಸಿಪಿಐಎಂ ಒತ್ತಾಯಿಸುತ್ತದೆ.