ಪೊಲೀಸರ ಮೇಲೆಯೇ ಕಾರು ಹಾಯಿಸಿ ಹತ್ಯೆಗೆ ಸಂಚು ನಡೆಸಿದ ನಟೋರಿಯಸ್ ಕ್ರಿಮಿನಲ್ ಆಕಾಶ್ ಭವನ್ ಶರಣ್

ಕರಾವಳಿ

ಮಂಗಳೂರು ನಗರ ಅಪರಾಧ ಪತ್ತೆದಳ CCB ಪೊಲೀಸರ ಮೇಲೆ ರೌಡಿಶೀಟರ್ ಆಕಾಶ ಭವನ ಶರಣ್ ಕಾರು ಹಾಯಿಸಿ ಕೊಲೆಗೆ ಯತ್ನಿಸಿದ ಘಟನೆ ನಡೆದಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲವು ಪ್ರಕರಣಗಳಲ್ಲಿ ಅರೆಸ್ಟ್ ವಾರೆಂಟ್ ಎದುರಿಸುತ್ತಿರುವ ಆಕಾಶಭವನ ಶರಣ್ ಜ.2ರಂದು ರಾತ್ರಿ ನಗರದ ಮೇರಿಹಿಲ್ ಬಳಿ ಕಾರಿನಲ್ಲಿ ತೆರಳುತ್ತಿರುವ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸ್ ಪೊಲೀಸರು ಅಡ್ಡಗಟ್ಟಿ ನಿಲ್ಲಿಸಲು ಪ್ರಯತ್ನಿಸಿದ್ದರು. ಆದರೆ ಆರೋಪಿ ಪೊಲೀಸರ ಮೇಲೆಯೇ ಕಾರು ಹಾಯಿಸಿ ಕೊಲ್ಲಲು ಯತ್ನಿಸಿದ್ದು, ಪೊಲೀಸರು ಅಪಾಯದಿಂದ ಪಾರಾಗಿದ್ದಾರೆ.

ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ರಾಮಕೃಷ್ಣ ಕೊಲೆ ಪ್ರಕರಣದಲ್ಲಿ ರೇಣುಕಾಪ್ರಸಾದ್ ಸಹಿತ ಐದು ಮಂದಿಗೆ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು. ಸುಪಾರಿ ಪಡೆದು ಕೊಲೆ ಕೃತ್ಯ ನಡೆಸಿದ್ದ ಆಕಾಶ ಭವನ ಶರಣ್ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದರಿಂದ ಶಿಕ್ಷೆ ಪ್ರಕಟವಾಗಿರಲಿಲ್ಲ. ಉಳಿದ ಐದು ಮಂದಿ ಜೈಲು ಸೇರಿದ್ದರೆ, ರೌಡಿ ಶೀಟರ್ ಶರಣ್ ತಲೆಮರೆಸಿಕೊಂಡಿದ್ದ. ಈತನ ಮೇಲೆ ಮಂಗಳೂರು ಮತ್ತು ಉಡುಪಿಯಲ್ಲಿ ಕೊಲೆ, ಕೊಲೆಯತ್ನ, ಅತ್ಯಾಚಾರ, ಹಫ್ತಾ ಸಹಿತ 21 ಕೇಸುಗಳು ದಾಖಲಾಗಿವೆ.

ಹುಲಿವೇಷ ತರಬೇತಿಗಾಗಿ ಬಂದಿದ್ದ ಬಾಲಕಿಯೊಬ್ಬಳನ್ನು ಪುಸಲಾಯಿಸಿ ಜಿಲ್ಲೆಯ ಹೊರಗಿನ ಲಾಡ್ಜ್ ವೊಂದಕ್ಕೆ ಕರೆದೊಯ್ದು, ಅಲ್ಲಿ ಮೂರು ದಿನಗಳ ಕಾಲ ಅತ್ಯಾಚಾರ ಎಸಗಿದ್ದ ಎಂದು ಆರೋಪಿಸಲಾಗಿದೆ. ಅತ್ಯಾಚಾರದ ಬಳಿಕ ಬಾಲಕಿ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿತ್ತು. ಆರೋಪಿ ಶರಣ್ ವಿರುದ್ಧ ಅತ್ಯಾಚಾರ, ಕೊಲೆ ಬೆದರಿಕೆ ಸೇರಿದಂತೆ ಪೊಕ್ಸೋ ಕಾಯ್ದೆಯಡಿ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.