ಲೋಕಸಭಾ ಚುನಾವಣೆಗೆ ಮುನ್ನ ಕಾಸರಗೋಡಿನಲ್ಲಿ ಚುನಾವಣಾ ಆಯೋಗ ನಡೆಸಿದ ಅಣಕು ಮತದಾನದ ಸಂದರ್ಭದಲ್ಲಿ ಯಾರಿಗೇ ಮತ ನೀಡಿದರೂ ಬಿಜೆಪಿಗೆ ಹೆಚ್ಚು ಸಂಖ್ಯೆ ಒದಗಿಸುವ ಇವಿಎಂ ಗಳು ಪತ್ತೆಯಾಗಿದ್ದು, ಈ ಕುರಿತು ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಮತ ಎಣಿಕೆ ಸಂದರ್ಭದಲ್ಲಿ ಎಲ್ಲ ವಿವಿ ಪ್ಯಾಟ್ ಗಳ ವಿವಿ ಪ್ಯಾಟ್ ಚೀಟಿಗಳನ್ನೂ ಎಣಿಸುವಂತೆ ಆದೇಶಿಸಲು ಕೋರಿ ಸಲ್ಲಿಸಲಾಗಿರುವ ಹಲವಾರು ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ವಿಭಾಗೀಯ ಪೀಠ, ಕೇರಳದ ಕಾಸರಗೋಡಿನಲ್ಲಿ ನಡೆದಿರುವ ಪ್ರಕರಣ ಸಂಬಂಧಿಸಿದಂತೆ ಚುನಾವಣೆಯ ಕುರಿತು ಪರಿಶೀಲನೆ ನಡೆಸಲು ಸೂಚಿಸಿತು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಾಂಕರ್ ದತ್ತ ಅವರನ್ನೊಳಗೊಂಡ ವಿಭಾಗೀಯ ಪೀಠ ಇಂದು ವಿಚಾರಣೆ ಆರಂಭಿಸುತ್ತಿದ್ದಂತೆ, ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಕಾಸರಗೋಡಿನಲ್ಲಿ ನಡೆದ ಅಣಕು ಮತದಾನದಲ್ಲಿ ಬಿಜೆಪಿಗೆ ಹೆಚ್ಚು ಮತ ಒದಗಿಸುವ ನಾಲ್ಕು ಇವಿಎಂ ಗಳು ಪತ್ತೆಯಾಗಿರುವುದನ್ನು ಪೀಠದ ಗಮನಕ್ಕೆ ತಂದರು. ಈ ಸಂಬಂಧ ಮನೋರಮಾ ಪತ್ರಿಕೆಯಲ್ಲಿ ಬಂದಿರುವ ವರದಿಯನ್ನು ಸಹ ಪೀಠಕ್ಕೆ ಸಲ್ಲಿಸಿದ್ದರು.
ಚುನಾವಣಾ ಆಯೋಗ ಇದುವರೆಗೆ ಒಂದು ವಿಧಾನಸಭಾ ವ್ಯಾಪ್ತಿಯಲ್ಲಿ ಐದು ಇವಿಎಂಗಳನ್ನು ಆಯ್ಕೆ ಮಾಡಿ ವಿವಿಪ್ಯಾಟ್ ಚೀಟಿಯನ್ನು ಎಣಿಕೆ ಮಾಡಿ ತಾಳೆ ಹಾಕುತ್ತಿದೆ. ಇದನ್ನು ಬದಲಿಸಿ, ಎಲ್ಲ ಇವಿಎಂಗಳು ಮತ್ತು ವಿವಿ ಪ್ಯಾಟ್ ಗಳನ್ನು ತಾಳೆ ಹಾಕಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ಅಷ್ಟೇ ಅಲ್ಲದೆ, ವಿವಿ ಪ್ಯಾಟ್ ಹಾಳೆಗಳನ್ನು ಮತ ಚಲಾಯಿಸಿದ ನಂತರ ಮತದಾರರೇ ಬ್ಯಾಲೆಟ್ ಬಾಕ್ಸ್ ಗಳಿಗೆ ಹಾಕುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ಅವರು ಕೋರಿದ್ದಾರೆ. ಈ ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ಕಾಸರಗೋಡಿನಲ್ಲಿ ನಡೆದಿರುವ ಘಟನೆಯನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಲಾಗಿದೆ.
ದೇಶದ ಹಲವು ಭಾಗಗಳಲ್ಲಿ ಚುನಾವಣಾ ಆಯೋಗ ಅಣಕು ಮತದಾನ, ಮತ ಎಣಿಕೆ ಕಾರ್ಯಗಳನ್ನು ನಿನ್ನೆ ಸಂಘಟಿಸಿತ್ತು. ಇದರ ಅಂಗವಾಗಿ ಕಾಸರಗೋಡಿನಲ್ಲೂ ಸಹ ಅಣಕು ಮತದಾನ ನಡೆದಿತ್ತು. ಈ ಮತದಾನದ ಸಂದರ್ಭದಲ್ಲಿ ಕನಿಷ್ಠ ನಾಲ್ಕು ಮತಯಂತ್ರಗಳು ಬಿಜೆಪಿಗೆ ಹೆಚ್ಚಿನ ಮತಗಳನ್ನು ಒದಗಿಸುವುದು ಪತ್ತೆಯಾಗಿತ್ತು. ಬಿಜೆಪಿಗೆ ಒಬ್ಬ ಮತದಾರರ ಒಂದು ಮತ ನೀಡಲು ಯಂತ್ರದ ಬಟನ್ ಒತ್ತಿದರೆ ಬಿಜೆಪಿಗೆ ಎರಡು ಮತಗಳು ಲಭ್ಯವಾಗುವಂತೆ ಇವಿಎಂ ತಿರುಚಿರುವುದು ಬೆಳಕಿಗೆ ಬಂದಿತ್ತು. ಇದೇ ಸಂದರ್ಭದಲ್ಲಿ ಇತರ ಪಕ್ಷಗಳಿಗೆ ನೀಡಿದ ಮತಗಳು ಮಾತ್ರ ಒಂದು ಪ್ರೆಸ್ ಗೆ ಒಂದೇ ಮತ ದಾಖಲಾಗುತ್ತಿರುವುದು ಕಂಡುಬಂದಿತ್ತು. ಅಷ್ಟೇ ಅಲ್ಲದೆ, ಇವಿಎಂ ಮೇಲಿನ ಪಕ್ಷಗಳ ಚಿಹ್ನೆಗಳ ಚಿತ್ರಗಳಲ್ಲೂ ತಾರತಮ್ಯ ಎಸಗಿರುವುದು ಕಂಡುಬಂದಿತ್ತು.