ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಕಿಡಿ
ದಿನಾಂಕ 26-09-2024 ರಂದು ರಾಜ್ಯದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಲು ಸರಕಾರ ಹೊರಡಿಸಿರುವ ಆದೇಶ ಅವೈಜ್ಞಾನಿಕವಾಗಿದ್ದು, ಈ ಆದೇಶದಿಂದ ಜಿಲ್ಲಾದ್ಯಂತ ಓಡಾಡಲು ಕೆಲವೇ ಕೆಲವು ಸೀಮಿತ ಪತ್ರಕರ್ತರಿಗೆ ಮಾತ್ರ ಅನುಕೂಲವಾಗುತ್ತದೆಯೇ ವಿನಹಃ ರಾಜ್ಯದ ಎಲ್ಲಾ ಪತ್ರಕರ್ತರಿಗೂ ಈ ಸೌಲಭ್ಯ ದೊರಕಲು ಸಾಧ್ಯವಿಲ್ಲ ಎಂಬುದಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ. ಸರಕಾರದ ಈ ಕರಾಳ ಆದೇಶದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಹಾಗೂ ಹೈಕೋರ್ಟ್ ನಲ್ಲಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಹೇಳಿಕೆ ನೀಡಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಿದೆ.
ಮಾಧ್ಯಮ ಪಟ್ಟಿಯಲ್ಲಿರಲೇಬೇಕೆಂಬ ಮಾನದಂಡಕ್ಕೆ ಸಂಬಂಧಿಸಿದಂತೆ, ಮಾಧ್ಯಮ ಪಟ್ಟಿಯಲ್ಲಿರದ ಪತ್ರಕರ್ತರು ನಕಲಿ ಪತ್ರಕರ್ತರೇ?
ತಾವು ಜಾಹೀರಾತಿನಲ್ಲಿ ತಿಳಿಸಿರುವಂತೆ ವಿದ್ಯುನ್ಮಾನ/ ಮುದ್ರಣ ಮಾಧ್ಯಮ ಸಂಸ್ಥೆಗಳ 5,222 ಪತ್ರಕರ್ತರಿಗೆ ಮಾತ್ರ ಅನುಕೂಲ. ರಾಜ್ಯದಲ್ಲಿ 5,222 ಮಾತ್ರ ಪತ್ರಕರ್ತರು ಇರುವುದಷ್ಟೆಯೇ?

ದಿನ ಪತ್ರಿಕೆ ಹಾಗೂ ಟಿವಿಗಳಲ್ಲಿ ಕೆಲಸ ನಿರ್ವಹಿಸುವವರು ಮಾತ್ರ ಪತ್ರಕರ್ತರೇ? ನಿಯತಕಾಲಿಕ ಪತ್ರಿಕೆಗಳಲ್ಲಿ ಅಂದರೆ ವಾರ, ಪಾಕ್ಷಿಕ ಹಾಗೂ ಮಾಸಿಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುವವರು ಪತ್ರಕರ್ತರಲ್ಲವೇ? ಅವರೇನಾದರೂ ಭಯೋತ್ಪಾದಕರೇ?
ಅರ್ಜಿದಾರರು ಪೂರ್ಣಾವಧಿಗೆ ನೇಮಕಗೊಂಡು ನಾಲ್ಕು ವರ್ಷಗಳಾಗಿರಬೇಕು ಜತೆಗೆ ನೇಮಕಾತಿ ಆದೇಶ, ವೇತನ ರಸೀದಿ ಒದಗಿಸಬೇಕೆಂದಿರುವುದು ದುರಾದೃಷ್ಟವೇ ಸರಿ. ಇಂದು ಅಕ್ರೆಡೇಷನ್ ಹೊಂದಿರುವ ಪತ್ರಕರ್ತರುಗಳಿಗೇ ಮಾಲೀಕರುಗಳು ಕಾಯಂ ನೇಮಕಾತಿ ಆದೇಶ ಪತ್ರ ನೀಡಿರುವುದಿಲ್ಲ. ಜತೆಗೆ ಕ್ಷೇಮನಿಧಿ ಅಂತೂ ಸಂಪಾದಕರುಗಳಿಂದ ಮರೀಚಿಕೆಯಾಗಿರುವ ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದಲ್ಲಿ ಓಡಾಡಲು ಇಷ್ಟೆಲ್ಲಾ ನಿಯಮಗಳು ಬೇಕಾ ಎಂಬ ಪ್ರಶ್ನೆಗಳು ರಾಜ್ಯದಲ್ಲಿರುವ ಪ್ರತಿಯೊಬ್ಬ ಪತ್ರಕರ್ತರನ್ನು ಕಾಡುತ್ತಿದೆ.
ಆರ್.ಎನ್.ಐ. ಪ್ರಮಾಣ ಪತ್ರ ಪತ್ರಕರ್ತರಿಗೆ ಪರವಾನಿಗೆ ಪತ್ರ ಇದ್ದಂತೆ, ಇದರ ಜತೆ ನಿರಂತರವಾಗಿ ಪ್ರಕಟವಾಗುವ ಸಂಚಿಕೆಗಳು ಹಾಗೂ ಪ್ರಸಾರ ಸಂಖ್ಯೆಯನ್ನು ಪರಿಗಣಿಸಬೇಕಿತ್ತು ಸರ್ಕಾರ.
ಆದರೆ, ಹಿತ್ತಾಳೆ ಕಿವಿ ಹೊಂದಿರುವ ಮುಖ್ಯಮಂತ್ರಿಗಳು ಕೆಲ ಹೊಗಳು ಭಟ್ಟರ ಮಾತಿಗೆ ಮನ್ನಣೆ ನೀಡಿರುವುದು ಸಾಮಾಜಿಕ ನ್ಯಾಯಕ್ಕೆ ಅಪರಾಧವೆಸಗಿದಂತಾಗಿದೆ. ಇನ್ನೂ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಒಬ್ಬ ವಿತರಕನಾಗಿ, ಪತ್ರಕರ್ತನಾಗಿ ಬಂದಿದ್ದರೂ ಪತ್ರಕರ್ತರ ನೋವು ಇವರಿಗೆ ಮನವರಿಕೆ ಇಂದಿಗೂ ಆಗದಿರುವುದು ವಿಷಾದನೀಯ. ಬರೀ ಸಭೆ ಸಮಾರಂಭಗಳಲ್ಲಿ ರಾಜಕಾರಣಿಯಂತೆ ಪತ್ರಕರ್ತರಿಗೆ ಆಶ್ವಾಸನೆ ಕೊಡವುದೊಂದೆ ಆಗಿದೆ ಎಂದೆನಿಸುತ್ತಿದೆ.
ರಾಜ್ಯದ ಎರೆಡೂವರೆ ಕೋಟಿ ಮಹಿಳೆಯರಿಗೆ ಶಕ್ತಿ ಯೋಜನೆಯಡಿ ವಾರ್ಷಿಕ 1800 ಕೋಟಿ ರೂ.ಗಳು ವ್ಯಯ ಮಾಡಿ ರಾಜ್ಯಾಧ್ಯಂತ ಓಡಾಡಲು ಉಚಿತ ಬಸ್ ಪಾಸ್ ಅದೂ ಆಧಾರಕಾರ್ಡ್ ಎಂಬ ಮಾನದಂಡ ಹೊಂದಿದ್ದರೆ ಸಾಕು ಎಂಬ ನಿಯಮ ವಿಧಿಸಿರುವ ಸಾಮಾಜಿಕ ಹರಿಕಾರರಾದ ಸಿದ್ದರಾಮಯ್ಯನವರು ಕೇವಲ 16 ಕೋಟಿ ರೂ.ಗಳಿಗೆ ಗ್ರಾಮಾಂತರ ಪತ್ರಕರ್ತರಿಗೆ ಇಷ್ಟೆಲ್ಲಾ ಮಾನದಂಡಗಳನ್ನು ಹಾಕಬೇಕಿತ್ತಾ?
ಎರಡೂವರೆ ಕೋಟಿ ಮಹಿಳೆಯರಿಗಿರುವ ಬೆಲೆ ರಾಜ್ಯದಲ್ಲಿ ಪ್ರಾಣವನ್ನೇ ಪಣಕ್ಕಿಟ್ಟು ಸಮಾಜ ತಿದ್ದುವ ಹಾಗೂ ಸಾರ್ವಜನಿಕರು ಸರ್ಕಾರದ ಮಧ್ಯ ಕೊಂಡಿಯಾಗಿ ಕಾರ್ಯನಿರ್ವಹಿಸುವ ಹನ್ನೆರೆಡು ಸಾವಿರ ಪತ್ರಕರ್ತರಿಗಿಲ್ಲವೇ? ಈ ಎಲ್ಲಾ ಅಂಶಗಳನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಾಗುವುದು
ಇಷ್ಟೆಲ್ಲ ಅಂಕಿ ಅಂಶಗಳ ಸಮೇತ ನಾಡಿನ ಪತ್ರಕರ್ತರಿಗೆ ಅನ್ಯಾಯವಾಗಿದ್ದರೂ ಕೂಡ ಕೆಲ ಪತ್ರಕರ್ತರ ಸಂಘಟನೆಗಳು ಸಿದ್ದರಾಮಯ್ಯನವರಿಗೆ ಅಭಿನಂದನೆ ನೆಪದಲ್ಲಿ ಬಹುಪರಾಕ್ ಹಾಡಿ ಪತ್ರಕರ್ತರ ಸಮಾಧಿಗಳ ಮೇಲೆ ಸೌಧ ನಿರ್ಮಾಸಿ ಜೀವನದಲ್ಲಿ ಸಾಧಿಸಿರುವುದು ಮಾಧ್ಯಮ ಅಕಾಡೆಮಿಯಲ್ಲಿ ಸದಸ್ಯರಾಗಿ ದೊಡ್ಡಸ್ಥಿಕೆ ಸಾಧಿಸುವುದೊಂದೇನಾ ಎಂಬ ನೋವು ಕಾಡುತ್ತಿದೆ.
ಸರಕಾರದ ಈ ಕಠಿಣ ಆದೇಶದಿಂದ 5222 ಸಂಖ್ಯೆ ಬಿಡಿ ಕನಿಷ್ಠ 100 ಸಂಖ್ಯೆಯ ಪತ್ರಕರ್ತರು ಪಾಸ್ ಪಡೆಯಲು ಸಾಧ್ಯವಿಲ್ಲದಂತಾಗಿದೆ. ಸರಕಾರ ಕಾಟಾಚಾರಕ್ಕೆ ಸಮಸ್ತ ಪತ್ರಕರ್ತರ ಕಿವಿಗೆ ಹೂವು ಮುಡಿಸುವ ಕಾರ್ಯದಲ್ಲಿ ತೊಡಗಿದೆ