ಎರಡು ತಿಂಗಳ ಹಿಂದೆ ಮಂಗಳೂರಿನಲ್ಲಿ ತೀವ್ರ ಸಂಚಲನ ಸೃಷ್ಟಿಸಿದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗು ಅದಲು ಬದಲು ಆರೋಪ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಂಡಿದ್ದು, ಮಗುವಿನ ಡಿಎನ್ಎ ರಿಪೋರ್ಟ್ ಸಲ್ಲಿಕೆಯಾಗಿದ್ದು, ಸಂತ್ರಸ್ತೆಯ ಮಗು ಅದೇ ಅನ್ನುವುದು ಇದೀಗ ಡಿಎನ್ಎ ವರದಿಯಲ್ಲಿ ಬಹಿರಂಗವಾಗಲಿದೆ.
ಅಕ್ಟೋಬರ್ 18 ರಂದು ಪಾಣೆಮಂಗಳೂರು ನಿವಾಸಿ, ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಸಂತ್ರಸ್ತೆ ಎರಡನೇ ಹೆರಿಗೆಗಾಗಿ ಲೇಡಿಗೋಷನ್ ಆಸ್ಪತ್ರೆಗೆ ದಾಖಲಾಗಿದ್ದರು. ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆ ವೇಳೆ ಆಸ್ಪತ್ರೆಯ ವೈದ್ಯರು ಮಗು ನಾರ್ಮಲ್ ಆಗಿದೆ ಎಂದು ಹೇಳಿದ್ದರು. ಆ ನಂತರ ಮಗುವಿಗೆ ಉಸಿರಾಟದ ತೊಂದರೆ ಇರುವುದಾಗಿ ನವಜಾತ ಶಿಶು ತೀವ್ರ ನಿಗಾ ಘಟಕ (ಎನ್ ಎಸ್ ಯು ಐ) ಗೆ ದಾಖಲಿಸಲಾಗಿತ್ತು. ನಂತರ ಬಂದು ಮಗುವಿಗೆ ಒಂದು ಕಣ್ಣಿನ ಸಮಸ್ಯೆ ಇದೆ ಎಂದು ಹೇಳಿದ್ದರು. ಇದರಿಂದ ಮಗುವಿನ ಪೋಷಕರು ಆಘಾತಗೊಂಡಿದ್ದರು. ಹುಟ್ಟುವಾಗ ನಾರ್ಮಲ್ ಇದ್ದ ಮಗು ನಂತರ ಏನಾಯಿತು ಎಂಬ ಬಗ್ಗೆ ಆಸ್ಪತ್ರೆಯ ನಡೆಯ ಬಗ್ಗೆ ಸಂಶಯಕ್ಕೆಡೆ ಮಾಡಿತ್ತು. ಲೇಡಿಗೋಶನ್ ಆಸ್ಪತ್ರೆಯಲ್ಲಿ ಮಗು ಅದಲು ಬದಲು ಪ್ರಕರಣ ಕೆಲವು ವರ್ಷಗಳಿಂದ ಆರೋಪಗಳು ಕೇಳಿ ಬರುತ್ತಿರುವುದರಿಂದ, ಆಸ್ಪತ್ರೆಯ ನಿರ್ಲಕ್ಷ್ಯ ವಿರುದ್ಧ ಉನ್ನತ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.

ಈ ಬಗ್ಗೆ ಲೇಡಿಗೋಷನ್ ಅಧೀಕ್ಷಕ ಅವರು ಮಾಧ್ಯಮಗಳಿಗೆ ಅಂದೇ ಸ್ಪಷ್ಟನೆ ನೀಡಿದ್ದು, ಈ ಬಗ್ಗೆ
ಮಕ್ಕಳ ಕಣ್ಣಿನ ತಜ್ಞರ ಅಭಿಪ್ರಾಯ ಪಡೆಯಲು ನಿರ್ಧರಿಸಿ ಆಗಸ್ಟ್ 20ರಂದು ಬೆಳಗ್ಗೆ ಈ ಬಗ್ಗೆ ಮಗುವಿನ ಪೋಷಕರಿಗೆ ವಿಷಯ ತಿಳಿಸಿದ್ದು ಮಕ್ಕಳ ಕಣ್ಣಿನ ತಜ್ಞರು ಅಲ್ಟ್ರಾಸೌಂಡ್ ತಪಾಸಣೆ ನಡೆಸಿದಾಗ ಮಗುವಿನ ಕಣ್ಣು ಗುಡ್ಡೆ ಜನನದ ವೇಳೆಯೇ ಇಲ್ಲದಿರುವುದು ಕಂಡು ಬಂದಿದೆ. ಸಂಜೆ ಪೋಷಕರಿಗೆ ತಿಳಿಸಿದಾಗ ಅವರು ಆತಂಕಕ್ಕೊಳಗಾಗಿದ್ದಾರೆ. ಈ ವಿಷಯ ತಿಳಿಸಲು ವಿಳಂಬ ಮಾಡಲಾಗಿದೆ ಎಂದು ಆಸ್ಪತ್ರೆ ವಿರುದ್ಧ ಆರೋಪ ಮಾಡಿದ್ದಾರೆ.
ಆಸ್ಪತ್ರೆಯಲ್ಲಿಹೆರಿಗೆಯಾದ ಬಳಿಕ ಜನಿಸಿದ ಮಗುವಿಗೆ ತೊಂದರೆ ಇಲ್ಲದಾಗ ತಾಯಿ ಜತೆ ಮಗುವಿನ ಫೋಟೋ ತೆಗೆಯುವ ವ್ಯವಸ್ಥೆಯೂ ಇದೆ. ತೊಂದರೆ ಇದ್ದು ಎನ್ಎಸ್ಯುಐಗೆ ಶಿಫ್ಟ್ ಮಾಡುವಾಗ ಅಲ್ಲಿಯೂ ಮಗುವಿಗೆ ಹೆರಿಗೆ ವೇಳೆ ಹಾಕಲಾಗುವ ಟ್ಯಾಗ್, ಕೇಸ್ ಶೀಟ್ ಇಟ್ಟು ಫೋಟೋ ನಮ್ಮ ಸಿಸ್ಟಮ್ಗಳಲ್ಲಿ ಅಪ್ಲೋಡ್ ಮಾಡಲಾಗುತ್ತದೆ. ಈ ಪ್ರಕರಣದಲ್ಲಿ ಈ ಎಲ್ಲಾ ದಾಖಲೆಗಳು ಇವೆ. ಅದಲ್ಲದೆ, ಹೆರಿಗೆ ರೂಂನಿಂದ ಉನ್ನತ ಚಿಕಿತ್ಸೆಗಾಗಿ ಎನ್ಎಸ್ಯುಐಗೆ ಶಿಫ್ಟ್ ಮಾಡುವ ವೇಳೆಯೂ ಸಿಸಿಟಿವಿ ಫೂಟೇಜ್ ದಾಖಲೆಯೂ ಆಸ್ಪತ್ರೆಯಲ್ಲಿದೆ. ಈ ಪ್ರಕರಣದಲ್ಲಿ ನಮ್ಮ ವೃತ್ತಿ ಧರ್ಮಕ್ಕೆ ಅಪಚಾರ ಆಗಿಲ್ಲ ಎಂದು ವರದಿಯಾಗಿತ್ತು.
ಇದೀಗ ಸಂತ್ರಸ್ತೆಯ ಮಗುವಿನ ಡಿಎನ್ಎ ಪರೀಕ್ಷೆ ವರದಿ ಸಂಬಂಧ ಪಟ್ಟ ಇಲಾಖೆಯ ಕೈ ಸೇರಿದ್ದು, ಸಂತ್ರಸ್ತೆಯ ಹೆಣ್ಣು ಮಗು ಆಕೆಯದ್ದೇ, ಆಸ್ಪತ್ರೆಯಲ್ಲಿ ಅದಲು ಬದಲಾಗಿಲ್ಲ, ಆರೋಪಗಳು ನಿರಾಧಾರ ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದುಬಂದಿದೆ.