ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ ವಿರುದ್ಧ ಸಚಿವ ಜಮೀರ್ ಅಹ್ಮದ್ ಖಾನ್ ಕಾಲಿಯಾ ಎಂಬ ಪದ ಬಳಕೆ ಮಾಡಿದ್ದು ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಇದೇ ವಿಚಾರವಾಗಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಪುನೀತ್ ಕೆರೆಹಳ್ಳಿ ವಿರುದ್ಧ ಧರ್ಮ, ಜಾತಿ ಹೆಸರಿನಲ್ಲಿ ನಿಂದನೆ ಆರೋಪ ಮಾಡಲಾಗಿತ್ತು, ಅಲ್ಲದೆ ಎಫ್ಐಆರ್ ಕೂಡ ದಾಖಲಿಸಿ ರಾತ್ರೋರಾತ್ರಿ ಬಂಧನ ಮಾಡಲಾಗಿದೆ.ಸಚಿವ ಜಮೀರ್ ಅಹಮದ್ ಖಾನ್ ಅವರ ಆಪ್ತ ಸಹಾಯಕ ಬಿ. ಎಸ್. ಅಶೋಕ್ ಅವರು ಪುನೀತ್ ಕೆರೆಹಳ್ಳಿ ವಿರುದ್ಧ ಚಾಮರಾಜಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಧರ್ಮ ಧರ್ಮಗಳ ನಡುವೆ ಸಂಘರ್ಷ ಸೃಷ್ಟಿಸುವ ಹೇಳಿಕೆ ನೀಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿದ್ದು, ಜೊತೆಗೆ ಪ್ರಾಣ ಬೆದರಿಕೆ ಕೂಡ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಬಗ್ಗೆ ಬುಧವಾರ ಎಫ್ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ಪುನೀತ್ ಕೆರೆಹಳ್ಳಿಯನ್ನು ಬಂಧಿಸಿದ್ದಾರೆ.
ನವೆಂಬರ್ 11 ರಂದು ಪುನೀತ್ ಕೆರೆಹಳ್ಳಿ ತಮ್ಮ ಸೋಷಿಯಲ್ ಮೀಡಿಯಾ ಫೇಸ್ಬುಕ್ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದನು. ಆ ವಿಡಿಯೋದಲ್ಲಿ ‘ಲೇ ಜಮೀರ್ ಅಹಮದ್ ಖಾನ್, ಕುಮಾರಸ್ವಾಮಿ ಅವರನ್ನು ಕರಿಯಾ ಅಂದ ನೀನು ನನ್ನ ಈ ಮಾತುಗಳನ್ನು ಸರಿಯಾಗಿ ಕೇಳಿಸಿಕೊ ಎಂದು ಆಕ್ಷೇಪಾರ್ಹ ಪದಗಳನ್ನು ಬಳಸಲಾಗಿತ್ತು. ನಮ್ಮದೇ ನಾಡಿನಲ್ಲಿ, ನಮ್ಮದೇ ಜನರ ಮುಂದೆ ಅದೂ ನಮ್ಮ ನಾಯಕರ ಬಗ್ಗೆ ಅವರ ಬಣ್ಣವನ್ನು ಹಂಗಿಸಿ ಮಾತನಾಡಿದ್ದೀಯಾ. ನಿನಗೆಷ್ಟು ದುರಹಂಕಾರ ಹಾಗೂ ದರ್ಪ ಬಂತಾ ಎಂದು ವಾಗ್ದಾಳಿ ನಡೆಸಿದ್ದರು. ನಾವು ಹಿಂದೂಗಳು ಕಪ್ಪಗಿದ್ದೇವೆ. ನಾವು ಪೂಜಿಸುವ ಕೃಷ್ಣ ಕಪ್ಪಗಿದ್ದಾರೆ ಎಂದು ಹೇಳಿದ್ದ ಪುನೀತ್ ಕೆರೆಹಳ್ಳಿ ಜಮೀರ್ ಮತ್ತು ಅನ್ಯ ಧರ್ಮದ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಕೆ ಮಾಡಿದ್ದರು.
ಇದೀಗ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ವಿರುದ್ಧ ಅವಹೇಳನಕಾರಿ ಮಾತು ಹಾಗೂ ಧರ್ಮ ಮತ್ತು ಜಾತಿ ನಿಂದನೆ ಮಾಡಿದ್ದ ಪುನೀತ್ ಕೆರೆಹಳ್ಳಿಯನ್ನು ಚಾಮರಾಜಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆತನನ್ನು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಲಾಗಿದೆ