ಉಪಚುನಾವಣೆಯಲ್ಲಿ ಕೈ ಹಿಡಿದ ಮುಸ್ಲಿಂ ಸಮುದಾಯಕ್ಕೆ ಸಿಗುತ್ತಾ ಮಂತ್ರಿ ಭಾಗ್ಯ.?

ರಾಜ್ಯ

ಕ್ಯೂ ನಲ್ಲಿದ್ದಾರೆ ಆಸೀಫ್ ಸೇಠ್..ಕೈ ಹಿಡಿಯುತ್ತಾ.? ಕೈ ಕೊಡುತ್ತಾ.?

ವಿಧಾನಸಭಾ ಚುನಾವಣೆಯಲ್ಲಿ ಸಂಪೂರ್ಣವಾಗಿ ಕಾಂಗ್ರೆಸ್ ಕೈ ಹಿಡಿದ ಮುಸ್ಲಿಂ ಸಮುದಾಯ, ಮೊನ್ನೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಮುಸ್ಲಿಂ ಸಮುದಾಯ ಸಂಪೂರ್ಣ ಕೈ ಜೋಡಿಸಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ನಿಂದ ಒಂಭತ್ತು ಮುಸ್ಲಿಂ ಶಾಸಕರು ಆಯ್ಕೆಯಾದರೂ,
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಜೋಡೆತ್ತಿನ ಸರ್ಕಾರದಲ್ಲಿ ಈಗಾಗಲೇ ಮುಸ್ಲಿಂ ಸಮುದಾಯದ ಇಬ್ಬರಿಗೆ ಕ್ಯಾಬಿನೆಟ್ ಸ್ಥಾನ ನೀಡಲಾಗಿದೆ. ಬೇರೆ ಸಮುದಾಯಕ್ಕೆ ಮಂತ್ರಿ ಪಟ್ಟ ನೀಡಿದ ಪ್ರಾತಿನಿಧ್ಯಕ್ಕೆ ಹೋಲಿಸಿದರೆ ಇದು ತೃಪ್ತಿಕರವಾಗಿಲ್ಲ.

ಸಿಎಂ ಸಿದ್ಧರಾಮಯ್ಯ ಅವರ ಸಂಪುಟದಲ್ಲಿ ಮುಸ್ಲಿಂ ಸಮಾಜದ ಪ್ರಭಾವಿ ನಾಯಕ ಜಮೀರ್ ಅಹ್ಮದ್ ಮತ್ತು ರಹೀಂ ಖಾನ್ ಮಂತ್ರಿ ಆಗಿದ್ದಾರೆ. ಯು.ಟಿ ಖಾದರ್ ಸ್ಪೀಕರ್ ಆಗಿದ್ದಾರೆ. ಈಗ 3ನೇ ಸಚಿವ ಸ್ಥಾನಕ್ಕಾಗಿ ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ ಮುಸ್ಲಿಂ ಸಮುದಾಯದ ಶಾಸಕರು.

ಉತ್ತರ ಕರ್ನಾಟಕ ಭಾಗದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಲಾಗಿಲ್ಲ. ಹಾಗಾಗಿ ತಮಗೆ ಸಚಿವ ಸ್ಥಾನ ನೀಡಿ ಎಂದು ಬೆಳಗಾವಿ ಶಾಸಕ ಆಸಿಫ್ ಸೇಠ್ ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗುತ್ತಿದೆ.

ರಾಜ್ಯದಲ್ಲಿ ಸಂಡೂರು, ಶಿಗ್ಗಾಂವಿ ಮತ್ತು ಚನ್ನಪಟ್ಟಣ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಹುತೇಕ ಮುಸ್ಲಿಂ ಸಮುದಾಯ ಕೈ ಹಿಡಿದಿದ್ದರಿಂದಲೇ ಕಾಂಗ್ರೆಸ್ ಗೆಲುವು ಸುಲಭ ಸಾಧ್ಯವಾಗಿದೆ. ಹೀಗಾಗಿ ಸಚಿವ ಸಂಪುಟ ಸರ್ಜರಿ ನಡೆದರೆ ಮುಸ್ಲಿಂ ಸಮುದಾಯಕ್ಕೆ ಸಿಎಂ ಮತ್ತೊಂದು “ಮಂತ್ರಿಗಿರಿ ಗಿಫ್ಟ್ ” ಗಿಫ್ಟ್ ನೀಡುವ ಸಾಧ್ಯತೆಯಿದೆ ಎಂಬ ಚರ್ಚೆ ಶುರುವಾಗಿದೆ. ಆದರೆ, ಯಾರಿಗೆ? ಎಂಬುದು ಯಕ್ಷ ಪ್ರಶ್ನೆ.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಪ್ರತಿಕ್ರಿಯಿಸಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, “ಆಸಿಫ್ ಸೇಠ್ ಅವರು ಸಚಿವ ಸ್ಥಾನಕ್ಕೆ ಮನವಿ ಮಾಡಿರುವುದು ನಿಜ. ಆದರೆ, ಬೆಳಗಾವಿಗೆ ಮತ್ತೊಂದು ಸಚಿವ ಸ್ಥಾನ ನೀಡುವ ಬಗ್ಗೆ ತಮಗೇನು ತಿಳಿದಿಲ್ಲ” ಎಂದು ಹೇಳಿದ್ದಾರೆ.

ಮುಸ್ಲಿಂ ಸಮುದಾಯಕ್ಕೆ ಅದರಲ್ಲೂ ಬೆಳಗಾವಿಗೇ ಮತ್ತೊಂದು ಸಚಿವ ಸ್ಥಾನದ ಬೇಡಿಕೆ ಬಗ್ಗೆ ಬಹುಶಃ ಅಧಿವೇಶನದ ಬಳಿಕ ಸ್ಪಷ್ಟತೆ ಸಿಗಬಹುದು. ಏನಾಗುತ್ತದೆ ಕಾದು ನೋಡಬೇಕಷ್ಟೇ ಎಂದಿದ್ದಾರೆ.