ನರ್ಸ್ ನಿಮಿಷಾ ಪ್ರಿಯಾಗೆ ಮರಣ ದಂಡನೆ ಶಿಕ್ಷೆ; ತಿಂಗಳೊಳಗೆ ಶಿಕ್ಷೆ ಜಾರಿಯಾಗುವ ಸಾಧ್ಯತೆ.! ಆಘಾತಕ್ಕೊಳಗಾಗಿರುವ ಕುಟುಂಬ; ರಕ್ಷಣೆಗೆ ಮೊರೆ.

ಅಂತಾರಾಷ್ಟ್ರೀಯ

ಯೆಮೆನ್ ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರಿಗೆ ಸಾಧ್ಯವಿರುವ ಎಲ್ಲಾ ಸಹಾಯಗಳನ್ನು ನೀಡುವುದಾಗಿ ಭಾರತ ಭರವಸೆ ನೀಡಿದೆ. ಯೆಮೆನ್ ಪ್ರಜೆಯೊಬ್ಬರನ್ನು ಕೊಲೆ ಮಾಡಿದ ಆರೋಪದ ಮೇಲೆ ನಿಮಿಷಾಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿದೆ.

ನಿಮಿಷಾ ಪ್ರಿಯಾ ಅವರಿಗೆ ನೀಡಿರುವ ಮರಣದಂಡನೆಯ ಶಿಕ್ಷೆಯನ್ನು ಯೆಮೆನ್ ಅಧ್ಯಕ್ಷ ರಶಾದ್ ಅಲ್-ಅಲಿಮಿ ಇತ್ತೀಚೆಗೆ ಅಂಗೀಕರಿಸಿದ್ದಾರೆ. ಒಂದು ತಿಂಗಳೊಳಗೆ ಶಿಕ್ಷೆ ಜಾರಿಯಾಗುವ ಸಾಧ್ಯತೆಗಳಿರುವುದರಿಂದ ಆಘಾತಕ್ಕೊಳಗಾಗಿರುವ ಕುಟುಂಬ ಅವರ ರಕ್ಷಣೆಗೆ ಮೊರೆ ಇಟ್ಟಿದೆ. ಮಗಳನ್ನು ಮರಣದಂಡನೆ ಶಿಕ್ಷೆಯಿಂದ ಪಾರು ಮಾಡಲು ಅವರ ತಾಯಿ ಪ್ರೇಮಾರವರು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಯೆಮೆನ್ ಮೂಲದ ಎನ್ಆರ್​ಐ ಸಾಮಾಜಿಕ ಕಾರ್ಯಕರ್ತರ ಸಂಘಟನೆಯಾದ ಸೇವ್ ನಿಮಿಷಾ ಪ್ರಿಯಾ ಇಂಟರ್ ನ್ಯಾಷನಲ್ ಆಕ್ಷನ್ ಕೌನ್ಸಿಲ್ ಸಹಾಯದಿಂದ ಕೊಲೆಗೀಡಾದವರ ಕುಟುಂಬಕ್ಕೆ ದಿಯಾ (ರಕ್ತದ ಹಣ) ಮೊತ್ತ ಪಾವತಿಸುವ ಬಗ್ಗೆ ಮಾತುಕತೆ ನಡೆಸಲು ಅವರು ಯೆಮನ್ ಪ್ರಯಾಣಿಸಿದ್ದರು.

ಕೇರಳದ ಪಾಲಕ್ಕಾಡ್ ಮೂಲದ ನರ್ಸ್ ನಿಮಿಷಾ ಪ್ರಿಯಾ 2008ರಲ್ಲಿ ಯೆಮನ್​ಗೆ ತೆರಳಿದ್ದರು. ಅಲ್ಲಿನ ಹಲವಾರು ಆಸ್ಪತ್ರೆಗಳಲ್ಲಿ ಕೆಲಸ ಮಾಡಿದ ನಂತರ ಅವರು ತಮ್ಮದೇ ಆದ ಆಸ್ಪತ್ರೆಯೊಂದನ್ನು ಆರಂಭಿಸಿದ್ದರು. 2017 ರಲ್ಲಿ ಅವರು ಮತ್ತು ಅವರ ಯೆಮೆನ್ ವ್ಯವಹಾರ ಪಾಲುದಾರ ತಲಾಲ್ ಮಹದಿ ನಡುವೆ ವಿವಾದ ಉಂಟಾಗಿತ್ತು. ಈ ಸಂದರ್ಭದಲ್ಲಿ ವಶಪಡಿಸಿಕೊಳ್ಳಲಾದ ತನ್ನ ಪಾಸ್ ಪೋರ್ಟ್ ಅನ್ನು ಹಿಂಪಡೆಯಲು ನಿಮಿಷಾ ಮಹದಿಗೆ ನಿದ್ರೆಯ ಇಂಜೆಕ್ಷನ್​ಗಳನ್ನು ನೀಡಿದ್ದರು. ಆದರೆ ದುರದೃಷ್ಟವಶಾತ್ ಓವರ್ ಡೋಸ್ ಆಗಿದ್ದರಿಂದ ಮಹದಿ ಮೃತಪಟ್ಟಿದ್ದರು. ಇದರ ನಂತರ ದೇಶದಿಂದ ಪಲಾಯನ ಮಾಡಲು ಯತ್ನಿಸುತ್ತಿರುವಾಗ ಆಕೆಯನ್ನು ಬಂಧಿಸಿ 2018ರಲ್ಲಿ ಕೊಲೆ ಪ್ರಕರಣದಲ್ಲಿ ಶಿಕ್ಷೆ ವಿಧಿಸಲಾಗಿತ್ತು.

2020 ರಲ್ಲಿ, ಸನಾದ ವಿಚಾರಣಾ ನ್ಯಾಯಾಲಯವು ಅವರಿಗೆ ಮರಣದಂಡನೆ ವಿಧಿಸಿತ್ತು. ಯೆಮೆನ್​ನ ಸುಪ್ರೀಂ ಜ್ಯುಡಿಷಿಯಲ್ ಕೌನ್ಸಿಲ್ ನವೆಂಬರ್ 2023 ರಲ್ಲಿ ಈ ತೀರ್ಪನ್ನು ಎತ್ತಿಹಿಡಿದಿತ್ತು.