ಕಣ್ಣೀರ ನಡುವೆಯಲ್ಲೂ ಮೊಂಟೆಪದವು ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯ ಸಂತೋಷ್ ಕಾರ್ಯಕ್ಕೆ ಮಿಡಿಯಿತು ಹೃದಯಗಳು.!
ಶಿಕ್ಷಕರು ಎಂದರೆ ಕೇವಲ ಮಕ್ಕಳ ಭವಿಷ್ಯ ರೂಪಿಸುವವರಲ್ಲ, ಬದಲಾಗಿ ಮಾನವೀಯತೆಯ ಜೊತೆಗೆ ಅಕ್ಷರ ಜ್ಞಾನದ ಮೂಲಕ ಶಿಕ್ಷಣ ನೀಡುವ ಮಹಾನ್ ವ್ಯಕ್ತಿಗಳು. ಮೊನ್ನೆ ಮಂಜನಾಡಿ ಗ್ಯಾಸ್ ದುರಂತದಲ್ಲಿ ಮರಣ ಹೊಂದಿದ ಇಬ್ಬರು ಶಾಲಾ ಬಾಲಕಿಯರು, ಮತ್ತು ಚೇತರಿಸಿಕೊಳ್ಳುತ್ತಿರುವ ಒಂದು ಪುಟಾಣಿ ಇದೇ ಮೊಂಟೆಪದವು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು. ಮೂವರೂ 14, 12, 9 ವರ್ಷದ ಹೆಣ್ಣು ಮಕ್ಕಳು. ಇವರು ಗ್ಯಾಸ್ ದುರಂತ ಸಂಭವಿಸಿದ ದಿನದಿಂದ ಹಿಡಿದು 21 ದಿನಗಳವರೆಗೆ ಆಸ್ಪತ್ರೆಯಲ್ಲಿ ಮಕ್ಕಳ ಪೋಷಕರು ಮತ್ತು ಸಂಬಂಧಿಕರ ಜೊತೆ ರಾತ್ರಿ ಹೊತ್ತಿನ ತನಕ ಇದ್ದು ಮಕ್ಕಳ ಆರೋಗ್ಯ ವಿಚಾರಿಸಿ ಮತ್ತೆ ಮನೆಗೆ ಹೋಗುತ್ತಿದ್ದರು.
ಐಸಿಯು ಒಳಗಡೆ ಹೋಗಿ ಮಕ್ಕಳ ಜತೆ ಮಾತನಾಡುತ್ತಾ ಆ ಮಕ್ಕಳಿಗೆ ಧೈರ್ಯ ಕೊಡುತ್ತಿದ್ದರು. ತೀರಾ ಸುಟ್ಟ ಗಾಯಗಳೊಂದಿಗೆ ನೋವಲ್ಲಿ ಚೀರಾಡುತ್ತಿದ್ದ ಆ ಮೂವರು ಮಕ್ಕಳೂ ತನ್ನ ಅಧ್ಯಾಪಕನನ್ನು ಗುರುತು ಹಿಡಿದು ನಾವಿನ್ನು ಪಾಸಾಗಲ್ಲ, ಹೋಮ್ ವರ್ಕ್ ಬಾಕಿ ಇದೆ, ಫೈಲ್ ಆಗ್ತಿವಿ, ನಮ್ಮ ಭವಿಷ್ಯ ಹೋಯಿತಲ್ಲಾ ಎಂದಲ್ಲಾ ಹೇಳುತ್ತಾ ಕಣ್ಣೀರು ಹಾಕುತ್ತಿದ್ದುದು ಎಂತಹ ಕಲ್ಲು ಹೃದಯವನ್ನೂ ಕರಗಿಸುತ್ತಿತ್ತು. ಇಲ್ಲ..ನಿಮ್ಮನ್ನು ಪಾಸ್ ಮಾಡಿಯೇ ಮಾಡುತ್ತೇವೆ, ಅದಕ್ಕಾಗಿ ಏನೂ ಟೆನ್ಶನ್ ಮಾಡಬೇಡಿ ಎಂದು ಮಾನಸಿಕವಾಗಿ ಧೈರ್ಯಹೇಳುತ್ತಾ ಮಕ್ಕಳಿಗೆ ಆತ್ಮವಿಶ್ವಾಸ ತುಂಬುತ್ತಿದ್ದುದು ಇದೆ ಹೃದಯವಂತ ಶಿಕ್ಷಕ ಸಂತೋಷ್. ಗುರುವಿನ ಧೈರ್ಯದ ಮಾತುಗಳಿಂದ ಮಕ್ಕಳು ಒಂದಿಷ್ಟು ದಿನ ಚೇತರಿಸಿಕೊಳ್ಳುವಂತಾಗಿತ್ತು.

ಯಾವಾಗ ಮಕ್ಕಳ ಜತೆ ಮಾತಾಡಿ ಐಸಿಯುನಿಂದ ಹೊರಗಡೆ ಬರುತ್ತಿದ್ದರೋ ತನ್ನ ಕಣ್ಣಲ್ಲಿ ಹರಿಯುತ್ತಿದ್ದ ನೀರಿನ್ನು ಒರೆಸುತ್ತಾ ಭಾವುಕರಾಗುತ್ತಿದ್ದ ಶಿಕ್ಷಕ ಸಂತೋಷ್ ಅವರಿಗೆ ಎಷ್ಟು ಕೈ ಮುಗಿದರೂ ಕಡಿಮೆಯೇ. ತನ್ನ ವಿದ್ಯಾರ್ಥಿನಿಯರ ನೋವನ್ನು ಹೃದಯದೊಳಗೆ ಅದುಮಿಟ್ಟು ಹೊರಗಡೆ ಕಣ್ಣೀರಿಡುತ್ತಿದ್ದ ಪೋಷಕರ ಬಳಿ ಬಂದು ನಗುಮುಖದಿಂದ ಸಮಾಧಾನಪಡಿಸುತ್ತಿದ್ಜರು. ಪ್ರತಿದಿನ ಶಾಲೆಯಲ್ಲಿ ಮಕ್ಕಳನ್ನು ಒಟ್ಟು ಸೇರಿಸಿ ಮಕ್ಕಳು ಆರೋಗ್ಯದಿಂದ ಗುಣಮುಖರಾಗಿ ಬದುಕಿ ಬರಲೆಂದು ನಿರಂತರ ಪ್ರಾರ್ಥನೆ ಮಾಡಿಸುತ್ತಿದ್ದರು. ಪೋಷಕರ ನಂತರ ಮಕ್ಕಳ ಪಾಲಿಗೆ ಇಂತಹ ಹೃದಯವಂತ ಶಿಕ್ಷಕರೇ ಪ್ರಮುಖ ವ್ಯಕ್ತಿ ಎನ್ನುವುದು ಸಂತೋಷ್ ಅವರಿಂದ ಸಾಬೀತಾಗಿದೆ.
ಯಾವಾಗ ಡಾಕ್ಟರ್ ಬಂದು ಮಕ್ಕಳ ಚರ್ಮಕ್ಕೆ, ವೈದ್ಯಕೀಯ ಚಿಕಿತ್ಸೆಗೆ ಲಕ್ಷಗಟ್ಟಲೆ ಹಣಬೇಕಾಗಬಹುದು ಎಂದಾಗ, ಕೂಡಲೇ ಕಾರ್ಯ ಪ್ರವತ್ತರಾದ ಶಿಕ್ಷಕ ಸಂತೋಷ್
ಅವರು ನನ್ನ ವಿದ್ಯಾರ್ಥಿಗಳಿಗಾಗಿ ನನ್ನಿಂದ ಸಾಧ್ಯವಾಗುವಷ್ಟು ಸಹಾಯ ಮಾಡುತ್ತೇನೆಂದು ಹೇಳಿ ಶಾಲಾ ಆಡಳಿತ ಮಂಡಳಿಗೆ ತಿಳಿಸಿದ್ದರು. ಅಲ್ಲಿನ ಶಿಕ್ಷಕ ವೃoದದವರು, ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ಮಾನವೀಯತೆ ಮೆರೆದು ಒಟ್ಟುಗೂಡಿಸಿ ಕೊಟ್ಟ ಒಂದು ಲಕ್ಷಕ್ಕಿಂತಲೂ ಅಧಿಕ ಹಣವನ್ನು ಆಸ್ಪತ್ರೆಗೆ ತಂದು ಕೊಟ್ಟರು. ಗ್ಯಾಸ್ ಸ್ಫೋಟದಿಂದ ಮನೆಯಲ್ಲಿದ್ದ ವಸ್ತುಗಳು ಬೆಂಕಿಗಾಹುತಿಯಾದ ವಿಚಾರ ತಿಳಿದ ಅದೇ ಶಾಲೆಯ ಪ್ರೈಮರಿ ಶಾಲೆಯ ಎಚ್. ಎಂ ಪ್ರಮೀಳಾ ಮತ್ತು ಆಶಾ ಟೀಚರ್ ಮಕ್ಕಳ ಎಲ್ಲಾ ಡಾಕ್ಯೂಮೆಂಟ್ಸ್ ಅನ್ನು ಯಾವುದಕ್ಕಾದ್ರೂ ಬೇಕಾಗಬಹುದೆಂದು ಶಾಲೆಯಿಂದ ಆಸ್ಪತ್ರೆಗೆ, ಆಸ್ಪತ್ರೆಯಿಂದ ಶಾಲೆಗೆ ಅಲೆದಾಡಿದ್ದು ಕೂಡಾ ಖಂಡಿತ ಮರೆಯಲು ಅಸಾಧ್ಯವಾಗಿದೆ.
ಸಂತೋಷ್ ಸರ್, ಶಿಕ್ಷಣ ಇಲಾಖೆಯ ಡಿಡಿಪಿಐ ವೆಂಕಟೇಶ್ ಪಟಗಾರ್ ನ್ನು ಆಸ್ಪತ್ರೆಗೆ ಕರೆತಂದು ಮಕ್ಕಳ ಚಿಕಿತ್ಸೆಗಾಗಿ ಮಕ್ಕಳ ಕಲ್ಯಾಣ ಇಲಾಖೆಯಿಂದ ಪರಿಹಾರಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಅದರ ಪರಿಹಾರ ಸಿಗಲೆಂದು ಈಗಲೂ ಇವರು ಮತ್ತು ಪ್ರಮೀಳಾ ಮೇಡಂ ಸಾಕಷ್ಟು ಅಲೆದಾಡುತ್ತಿದ್ದಾರೆ. ಅದಲ್ಲದೆ, ದುರಂತ ಸಂಭವಿಸಿ ನಾಲ್ಕು ದಿನದಲ್ಲೇ ಮಕ್ಕಳ ತಾಯಿ ಮರಣ ಹೊಂದಿದಾಗ ಆ ತಾಯಿಯ ದಫನ ಕಾರ್ಯ ಮುಗಿಯುವವರೆಗೂ ಭಾವುಕರಾಗಿ ನಿಂತು ಇದೇ ಶಿಕ್ಷಕ ವೃಂದ ಕಂಬನಿ ಮಿಡಿದಿದೆ. ತಾಯಿ ತೀರಿ 14 ದಿವಸ ಆಗುವಾಗ ದೊಡ್ಡವಳು ಮಹದಿಯಾ ತೀವ್ರ ಇನ್ಫೆಕ್ಷನ್ ಆದ ಪರಿಣಾಮ ಮರಣ ಹೊಂದುತ್ತಾಳೆ. ಇವರ ಬೆಸ್ಟ್ ವಿದ್ಯಾರ್ಥಿನಿ ಕೂಡಾ ಹೌದು.
ಮುಗ್ದೆ, ಸೌಮ್ಯ ಸ್ವಭಾವದ ಹುಡುಗಿಯಾದರೂ ಕಲಿಕೆಯಲ್ಲಿ ಬಹಳಷ್ಟು ಮುಂದೆ ಇದ್ದಳು, ಬಹಳ ಸೈಲೆಂಟ್ ಹುಡುಗಿ ಎಂದು ಐಸಿಯು ಹೊರಗಡೆ ಇದ್ದಾಗ ಪೋಷಕರು ಮತ್ತು ಬಂಧುಗಳ ಜೊತೆ ಭಾವುಕರಾಗಿ ಹೇಳುತ್ತಿದ್ದರು. ಅವಳು ಬದುಕಿ ಬರ್ತಾಳೆ ಎಂಬ ವಿಶ್ವಾಸವಿತ್ತು. ಕ್ಲಾಸಲ್ಲಿ ಅವಳ ಸ್ನೇಹಿತೆಯರು ಈಗಲೂ ಅಳುತ್ತಿರುವುದು ನೋಡಲಾಗ್ತಿಲ್ಲ ಎಂದು ಶಿಕ್ಷಕರು ಹೇಳುತ್ತಿದ್ದರು. ಆದರೆ ವಿಧಿಯಾಟ ಬದಲಿಸಲು ಯಾರಿಂದಲೂ ಸಾಧ್ಯವಿಲ್ಲವಾಗಿದೆ. ಇವಳ ಮರಣದ ವಿಷಯ ತಿಳಿದ ಕೂಡಲೇ ಸಂತೊಷ್ ಸರ್, ಕಂಬನಿ ಮಿಡಿಯುತ್ತಲೇ ಆಸ್ಪತ್ರೆಗೆ ಬರ್ತಾರೆ. ಅಲ್ಲಿಂದ ಮೃತದೇಹವನ್ನ ಮನೆಗೆ ಕೊಂಡೊಯ್ಯುವಾಗಲೂ ಅವರು ಮಕ್ಕಳ ಪೋಷಕರಾದ ಸೈಫ್ ರೊಂದಿಗೆ ಹೇಳಿದ ಮಾತು ” ಸೈಫ್, ನನಗೆ ಮುಖ ದರ್ಶನಕ್ಕೆ ಅವಕಾಶ ಸಿಗುತ್ತೋ ಇಲ್ವೋ ಗೊತ್ತಿಲ್ಲ. ದಯವಿಟ್ಟು ನನ್ನ ಪ್ರಿಯ ವಿದ್ಯಾರ್ಥಿನಿಯ ಮೃತದೇಹಕ್ಕೆ ಹೆಗಲು ಕೊಡ್ಲಿಕ್ಕಾದ್ರು ಒಂದು ಅವಕಾಶ ನೀಡುತ್ತೀರಾ*? ಎಂದು ಕಣ್ಣoಚಲ್ಲಿ ನೀರು ತುಂಬಿ ಭಾವುಕರಾಗಿ ವಿನಂತಿಸಿದಾಗ ಏನೂ ಹೇಳಕ್ಕಾಗದೆ ಮೌನಕ್ಕೆ ಶರಣಾಗಿಬಿಟ್ಟಿದ್ದೆ ಎನ್ನುತ್ತಾರೆ ಸೈಫ್.

ಸೇರಿದ ಜನಸ್ತೋಮದ ಮಧ್ಯೆ ಮುಖ ದರ್ಶನಕ್ಕೆ ಎಲ್ಲರೂ ಅವರಿಗೆ ಅವಕಾಶ ಮಾಡಿ ಕೊಟ್ಟೆವು. ದಫನ ಕಾರ್ಯ ಮುಗಿಯೋ ತನಕ ಇದ್ದು, ರಾತ್ರಿ 1 ಗಂಟೆ ಹೊತ್ತಿಗೆ ಮಂಜನಾಡಿಯಿಂದ ತನ್ನ ಮನೆ ವಾಮಂಜೂರುಗೆ ಹೊರಟರು. ಅಷ್ಟಕ್ಕೆ ವಿಧಿ ತನ್ನ ಕ್ರೂರ ಆಟವನ್ನ ಇನ್ನೂ ನಿಲ್ಲಿಸಲ್ಲ. ಎರಡನೇ ಆಘಾತದಿಂದ ಇನ್ನೂ ಚೇತರಸಿಕೊಳ್ಳದ ನಮಗೆ ಇನ್ನೊಂದು ಆಘಾತ. ಆ ವಿಚಿತ್ರ ಆಟಕ್ಕೆ ಸ್ಮಶಾನದoತಿದ್ದ ಊರು, ಮನೆ ಇನ್ನೂ ದುಃಖದ ಸಾಗರದಲ್ಲಿ ಮಡುಗಟ್ಟುತ್ತೆ. ಅಂದ್ರೆ ದೊಡ್ಡವಳ ಮರಣವಾಗಿ ಒಂದು ದಿವಸ ಕಳೆದಿರಲಿಲ್ಲ, ಇನ್ನೊಂದು 9 ವರ್ಷದ ಮಾಝಿಯಾ ಮಗು ಮರಣ ಹೊಂದುತ್ತೆ. ಈ ಸುದ್ದಿ ತಿಳಿದು ಸರ್ ಕೂಡಾ ಆಸ್ಪತ್ರೆಗೆ ಓಡೋಡಿ ಬರ್ತಾರೆ. ಪ್ರೈಮರಿ ಶಾಲೆಯ ಎಚ್ ಎಂ ಪ್ರಮೀಳಾ ಜತೆ ಇತರೆ ಶಿಕ್ಷಕರೂ ಶಾಲೆಯಿಂದ ಆಸ್ಪತ್ರೆಗೆ ಬಂದು ಕಣ್ಣೀರಿನೊಂದಿಗೆ ಮಗುವಿನ ಮುಖ ದರ್ಶನ ಪಡೀತಾರೆ. ಆ ಕ್ಷಣದಲ್ಲಿ ಅಲ್ಲಿದ್ದ ಪೊಲೀಸರ, ಡಾಕ್ಟರ್ ಗಳ ಕಣ್ಣುಗಳೂ ಒದ್ದೆಯಾಗಿತ್ತು. ಸಂತೋಷ್ ಸರ್, ಇವಳ ದಫನ ಕಾರ್ಯ ಕೂಡಾ ಮುಗಿಯೋವರೆಗೂ ನಿಂತು, ಮೂರು ಖಬರ್ ಬಳಿ ತುಂಬಿದ ಕಣ್ಣೀರಿನೊಂದಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ಅಲ್ಲಿದ್ದ ಮುಸ್ಲಿಂ ಧರ್ಮಗುರುಗಳು ಕೂಡಾ ಇಂತಹ ಅಧ್ಯಾಪಕನನ್ನು ಪಡೆದ ಈ ವಿದ್ಯಾರ್ಥಿಗಳು ಧನ್ಯರು ಎಂದು ಅವರನ್ನ ಅಲ್ಲೇ ಶ್ಲಾಘಿಸಿದರು. ಅಲ್ಲಿದ್ದ ಕುಟುಂಬಿಕರು, ಊರ ಜನರು ಕೂಡಾ ಸರ್ ಅವರ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡ್ತಿದ್ರು ಶಿಕ್ಷಕರೆಂದರೆ ಹೀಗಿರಬೇಕೆಂದು. ಅವತ್ತು ಕೂಡ ರಾತ್ರಿ 12 ಗಂಟೆ ಹೊತ್ತಿಗೆ ನಮಗೆಲ್ಲ ಸ್ವಾoತನ ಪಡಿಸಿ, ಮಕ್ಕಳ ತಂದೆಯೊಂದಿಗೆ ಇದ್ದು ಸಮಾಧಾನ ಹೇಳಿ, ಧೈರ್ಯ ಕೊಟ್ಟು ನಿರ್ಗಮಿಸ್ತಾರೆ.
ಬಹುಷಃ ಇಂತಹ ಹೃದಯವಂತ ಶಿಕ್ಷಕನನ್ನು ಪಡೆದ ಆ ಮಕ್ಕಳು ಪುಣ್ಯವಂತರೇನೋ. ವಿದ್ಯಾರ್ಥಿಗಳ ಬದುಕು ಯಾವಾಗಲೂ ಹಸನಾಗಿರಬೇಕು ಎಂದು ಹಾರೈಸುವ ಈ ಒಳ್ಳೆಯ ಮನಸ್ಸುಗಳು ಇಂತಹ ವಿಷಮ ಸ್ಥಿತಿಯಲ್ಲಿ ವಿಧಿ ಲೀಲೆಯ ಮುಂದೆ ಏನೂ ಮಾಡಕ್ಕಾಗದ ಪರಿಸ್ಥಿತಿಯಲ್ಲಿ ಇರ್ತಾರೆ. ಶಾಲೆಯಲ್ಲಿ ಶ್ರದಾಂಜಲಿ, ಪ್ರಾರ್ಥನೆ ಎಲ್ಲಾನೂ ನಡೆಸ್ತಾ ಇದ್ರೂ ಒಂದೇ ಒಂದು ವಿಡಿಯೋ ತೆಗೆದಿಲ್ಲ. ಫೋಟೋ ತೆಗೆದಿಲ್ಲ. ಒಟ್ಟು ಮಾಡಿದ ಹಣ ಕೊಡುವಾಗಲೂ ಫೋಟೋ ತೆಗೆಯೋಕೆ ನಿರಾಕರಿಸಿದ್ದಾರೆ. ಇತ್ತೀಚಿಗೆ ನಾವು ಸಮಾಜದಲ್ಲಿ, ಶಿಕ್ಷಣದಲ್ಲೂ ಮಾನವೀಯತೆ ಕಾಣದಾಗಿದೆ ಎಂದು ಹೇಳುತ್ತಾರೆ. ಆದರೆ ಇದೆಲ್ಲದರ ಮಧ್ಯೆ ಇಂತಹ ಮಾನವೀಯತೆ ಮೆರೆಯುವ, ಹೃದಯವಂತ ಶಿಕ್ಷಕರು ಇರ್ತಾರೆ ಅಂದ್ರೆ ನಿಜಕ್ಕೂ ಗ್ರೇಟ್. ಆ ಶಾಲೆಯ ಎಲ್ಲಾ ಶಿಕ್ಷಕರಿಗೂ ನನ್ನ, ಕುಟುಂಬದ ಮತ್ತು ಎಲ್ಲರ ಪರವಾಗಿ ಧನ್ಯವಾದಗಳನ್ನು ಮೃತ ಬಾಲಕಿಯರ ಪೋಷಕರು ಹೇಳಿದ್ದಾರೆ.
ಸರ್, ನಮ್ಮೊಂದಿಗೆ 22 ದಿವಸಗಳ ಕಾಲ ಆಸ್ಪತ್ರೆಯಲ್ಲಿ ಒಟ್ಟಿಗೆ ಇದ್ದು, ಮಕ್ಕಳ ಜೀವ ಉಳಿಸಲು ಎಲ್ಲಾ ರೀತಿಯ ನಮ್ಮ ಪ್ರಯತ್ನಕ್ಕೆ ನಿಮ್ಮ ಮತ್ತು ನಿಮ್ಮ ಶಾಲೆಯ ಶಿಕ್ಷಕರ, ಆಡಳಿತ ಮಂಡಳಿಯ ಸಹಕಾರನೂ ಇತ್ತು. ಆದ್ರೂ ಎರಡು ಜೀವವನ್ನು ಉಳಿಸೋಕೆ ಸಾಧ್ಯವಾಗಿಲ್ಲ. ಆದ್ರೂ ನಮಗೆ ಸಾಂತ್ವನ ಪಡಿಸುತ್ತಾ, ಧೈರ್ಯ ಕೊಡ್ತಾ, ನಮ್ಮ ಕಣ್ಣೀರಲ್ಲಿ 22 ದಿವಸನೂ ಜತೆಯಾಗಿದ್ದಕ್ಕೆ ಕುಟುಂಬದ ಪರವಾಗಿ, ಎಲ್ಲರ ಪರವಾಗಿಯೂ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ ಸರ್. ದೇವರು ನಿಮಗೆ ಉತ್ತಮ ಆಯುರಾರೋಗ್ಯ ಕರುಣಿಸಿ ಇನ್ನಷ್ಟು ಶೈಕ್ಷಣಿಕ ರಂಗದಲ್ಲಿ ಸೇವೆ ನೀಡಲು ಮತ್ತು ಮಾನವೀಯ ಸೇವೆ ನೀಡಲು ಶಕ್ತಿ ನೀಡಲಿ. ಮೊಂಟೆಪದವು ಸರಕಾರಿ ಪ್ರೌಢಶಾಲೆಯಲ್ಲಿ 20 ವರ್ಷ ಪ್ರಭಾರ ಮುಖ್ಯ ಶಿಕ್ಷಕರಾಗಿದ್ದ ಆಂಗ್ಲ ಭಾಷಾ ಶಿಕ್ಷಕ ಸಂತೋಷ್ ಅವರು ವಿದ್ಯಾರ್ಥಿಗಳಿಗೆ ತುಂಬಾ ಆಪ್ತರಾಗಿದ್ದಾರೆ. ಆರಂಭದಲ್ಲಿ 300ರಷ್ಟು ವಿದ್ಯಾರ್ಥಿಗಳಿದ್ದ ಈ ಶಾಲೆಯಲ್ಲಿ ಈಗ 1,300ರಷ್ಟು ಮಕ್ಕಳು ಇದ್ದಾರೆ. ಸಂತೋಷ್ ಅವರು ಜಿಲ್ಲಾ ಉತ್ತಮ ಶಿಕ್ಷಕ, ಯೇನೆಪೊಯ ವಿವಿಯಿಂದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದಿದ್ದರು. ಈ ಮೂವರು ವಿದ್ಯಾರ್ಥಿನಿಯರು ಎಲ್ಕೆಜಿಯಿಂದಲೂ ಇದೇ ಶಾಲೆಯಲ್ಲಿ ಓದಿದ್ದರು.