ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದ ಯುವ ಪತ್ರಕರ್ತನ ಹತ್ಯೆ

ರಾಷ್ಟ್ರೀಯ

ಮುಖೇಶ್ ಚಂದ್ರಕರ್ ಭೋಪಾಲ್‌ನಲ್ಲಿ ಎನ್‌ಡಿಟಿವಿ ವರದಿಗಾರ

ಛತ್ತೀಸ್‌ಗಡದಲ್ಲಿ ಗುತ್ತಿಗೆದಾರನೊಬ್ಬನ 120 ಕೋಟಿ ಮೊತ್ತದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದ ಯುವ ಪತ್ರಕರ್ತನ ಮೃತದೇಹ ಅದೇ ಗುತ್ತಿಗೆದಾರನಿಗೆ ಸೇರಿದ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಪತ್ತೆಯಾಗಿದೆ. ಹೊಸ ವರ್ಷದ ಜನವರಿ ಒಂದರಂದು ನಾಪತ್ತೆಯಾಗಿದ್ದ ಯುವ ಪತ್ರಕರ್ತ ಮುಕೇಶ್ ಚಂದ್ರಕಾರ್ ಮೃತದೇಹವನ್ನು ಚಟ್ಟನಪರ ಬಸ್ತಿ ಎಂಬಲ್ಲಿ ಪತ್ತೆ ಮಾಡಲಾಗಿದೆ.

ಗುತ್ತಿಗೆದಾರ ಸುರೇಶ್ ಚಂದ್ರಕಾರ್ ಎಂಬಾತನ ಅಕ್ರಮಗಳ ವಿರುದ್ಧ ತನಿಖಾ ವರದಿಗಳನ್ನು ಪ್ರಕಟಿಸಿದ್ದ ಮುಕೇಶ್, ಬಸ್ತಾರ್‌ನಲ್ಲಿನ 120 ಕೋಟಿ ರೂ ಮೊತ್ತದ ರಸ್ತೆ ನಿರ್ಮಾಣ ಯೋಜನೆಯಲ್ಲಿ ಭಾರಿ ಅವ್ಯವಹಾರ ನಡೆದಿರುವುದನ್ನು ಬಯಲಿಗೆಳೆದಿದ್ದರು. ಈ ವರದಿಯು ಗುತ್ತಿಗೆದಾರನ ಚಟುವಟಿಕೆಗಳ ಕುರಿತಂತೆ ತನಿಖೆ ನಡೆಸಲು ಆದೇಶಿಸಲು ಸರ್ಕಾರದ ಮೇಲೆ ಒತ್ತಡ ಹೇರಲು ಯಶಸ್ವಿಯಾಗಿತ್ತು.

ಪತ್ರಕರ್ತ ಮುಕೇಶ್ ಜನವರಿ ಒಂದರ ರಾತ್ರಿಯಿಂದ ನಾಪತ್ತೆಯಾಗಿದ್ದರು. ಗುತ್ತಿಗೆದಾರ ಸುರೇಶ್ ಚಂದ್ರಕಾರ್‌ನ ಸಹೋದರ ರಿತೇಶ್, ತನ್ನ ಕುಟುಂಬಕ್ಕೆ ಸೇರಿದ ಸ್ಥಳದೊಂದರಲ್ಲಿ ಮುಕೇಶ್ ಜತೆ ಸಭೆ ಆಯೋಜಿಸಿದ್ದ. ಆದರೆ ಇದರ ಬಳಿಕ ಮುಕೇಶ್ ಫೋನ್ ಸ್ವಿಚ್ ಆಫ್ ಆಗಿತ್ತು. ನಂತರ ಮುಕೇಶ್ ಅವರ ಅಣ್ಣ ಯುಕೇಶ್ ಚಂದ್ರಕಾರ್ ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದರು. ಮಾತುಕತೆಗಾಗಿ ಚಟ್ಟನಪರದಲ್ಲಿನ ಸುರೇಶ್‌ನ ಸ್ಥಳಕ್ಕೆ ತೆರಳಿದ್ದ ಮುಕೇಶ್, ಅದೇ ಜಾಗದಲ್ಲಿನ ನೀರಿನ ಟ್ಯಾಂಕ್‌ನಲ್ಲಿ ಜನವರಿ 3ರಂದು ಶವವಾಗಿ ಪತ್ತೆಯಾಗಿದ್ದಾರೆ.

ಮುಖೇಶ್ ಚಂದ್ರಕರ್ ಭೋಪಾಲ್‌ನಲ್ಲಿ ಎನ್‌ಡಿಟಿವಿ ವರದಿಗಾರರಾಗಿದ್ದರು. ಜನವರಿ 1ರಿಂದ ನಾಪತ್ತೆಯಾಗಿದ್ದ 31 ವರ್ಷದ ಮುಖೇಶ್​ನ ಶವ ಶುಕ್ರವಾರ ಸಂಜೆ ಛತ್ತೀಸ್‌ಗಢದ ಬಿಜಾಪುರದ ಚಟ್ಟನ್‌ಪಾರಾ ಬಸ್ತಿಯ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಪತ್ತೆಯಾಗಿದೆ. ಸೆಪ್ಟಿಕ್ ಟ್ಯಾಂಕ್​ನಲ್ಲಿ ಪತ್ತೆಯಾದ ಅವರ ದೇಹ ಊದಿಕೊಂಡಿತ್ತು. ತಲೆ ಮತ್ತು ಬೆನ್ನಿಗೆ ಅನೇಕ ಗಾಯಗಳಾಗಿದ್ದು, ಅವರ ಬಟ್ಟೆಯಿಂದ ಶವವನ್ನು ಗುರುತಿಸಲಾಗಿದೆ. ಮುಕೇಶ್‌ ಕೊನೆಯದಾಗಿ ಮೊಬೈಲ್ ಬಳಸಿದ ಸ್ಥಳದ ಆಧಾರದ ಮೇಲೆ ಹುಡುಕಾಟ ನಡೆಸಿದ ಪೊಲೀಸರು ಗುತ್ತಿಗೆದಾರ ಸುರೇಶ್ ಚಂದ್ರಕರ್ ಅವರ ಪ್ರದೇಶ ಪತ್ತೆಹಚ್ಚಿದರು. ಅಲ್ಲಿ ಕಾಂಕ್ರೀಟ್​ನಿಂದ ಮುಚ್ಚಲಾಗಿದ್ದ ಟ್ಯಾಂಕ್​ ಅನ್ನು ಓಪನ್ ಮಾಡಿದಾಗ ಶವ ಪತ್ತೆಯಾಗಿದೆ.