KIADB scam: ಸಿದ್ದು ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ಸಿಟಿಜನ್ ರೈಟ್ಸ್ ಫೌಂಡೇಶನ್ ದೂರು.
ಕೆಐಎಡಿಬಿ ಕರ್ಮಕಾಂಡಕ್ಕೆ ರೋಚಕತೆ ತುಂಬಿದ CRF; ಹಂದಿಗುಂದ ಎತ್ತಂಗಡಿಗೆ ಆಗ್ರಹ
ಕೆಐಎಡಿಬಿ ಕರ್ಮಕಾಂಡಕ್ಕೆ ರೋಚಕತೆಯ ತಿರುವು. ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಸವಾಲಾದ ‘ಹಂದಿಗುಂದ ಪ್ರಕರಣ’. ಕೆ.ಎ.ಎಸ್ ಅಧಿಕಾರಿ ಬಾಳಪ್ಪ ಹಂದಿಗುಂದ ವಿರುದ್ಧ ರಾಜ್ಯಪಾಲರಿಗೆ ದೂರು
ತನಿಖೆಗೆ ನಿರ್ದೇಶನ ಕೋರಿ ರಾಜ್ಯಪಾಲರಿಗೆ CRF (ಸಿಟಿಜನ್ ರೈಟ್ಸ್ ಫೌಂಡೇಶನ್) ಅಧ್ಯಕ್ಷ ಕೆ.ಎ.ಪಾಲ್ ರಿಂದ ದೂರು
ಕೆಎಎಸ್ ಅಧಿಕಾರಿ ಬಾಳಪ್ಪ ಹಂದಿಗುಂದ ವಿರುದ್ದ ಹಲವಾರು ದೂರು ಇದೆ. ಆದರೂ ಹಂದಿಗುಂದ ಭ್ರಷ್ಟಾಚಾರ ಆರೋಪ ಬಗ್ಗೆ ಸರ್ಕಾರದ ಮೌನ. ಈ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಿ KIADB ಅಕ್ರಮದ ತನಿಖೆಗೆ ಆಗ್ರಹ
ದೇವನಹಳ್ಳಿ ಸುತ್ತಮುತ್ತ ನಡೆದಿರುವ ಭೂಸ್ವಾಧೀನ ಅಕ್ರಮ ಆರೋಪ. ಭೂಸ್ವಾಧೀನ ಅಕ್ರಮ, ಪರಿಹಾರ ಹಂಚಿಕೆಯಲ್ಲೂ ಗೋಲ್ ಮಾಲ್. ಈ ಬಗ್ಗೆ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆಗೆ ಆಗ್ರಹ. ಮುಖ್ಯಮಂತ್ರಿಗೆ ದೂರು ನೀಡಿದ್ದರೂ ಕ್ರಮ ಇಲ್ಲ. ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರೂ ಕ್ಯಾರೇ ಇಲ್ಲ,
ಇದೀಗ ಪ್ರಕರಣದ ಬಗ್ಗೆ ಪರಿಶೀಲನೆ ಆರಂಭಿಸಿರುವ ED. ಸಿಟಿಜನ್ ರೈಟ್ಸ್ ಫೌಂಡೇಶನ್ ದೂರಿನ ಬಗ್ಗೆ ED ಪರಿಶೀಲನೆ. ಹೀಗಿದ್ದರೂ ಭ್ರಷ್ಟಾಚಾರ ನಡೆದಿರುವ ಸ್ಥಾನದಲ್ಲೇ ಬಾಳಪ್ಪ ಹಂದಿಗುಂದ ಮುಂದುವರಿಕೆ. ಇದರಿಂದ ಸಾಕ್ಷ್ಯ ನಾಶವಾಗುವ ಸಾಧ್ಯತೆ ಬಗ್ಗೆ ಆತಂಕ
ಭ್ರಷ್ಟ ಅಧಿಕಾರಿಗೆ ಸಿಎಂ, ಕೈಗಾರಿಕಾ ಸಚಿವರ ಶ್ರೀರಕ್ಷೆ. ಹಾಗಾಗಿ ಹಂದಿಗುಂದ ಅವರ ವರ್ಗಾವಣೆ ಆಗಿಲ್ಲ ಎಂದು CRF ಆರೋಪ. ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಹಾಗೂ ಆರೋಪಗಳ ಬಗ್ಗೆ ತನಿಖೆಗೆ ನಿರ್ದೇಶನ ನೀಡಲು ಆಗ್ರಹ.
ಬೆಂಗಳೂರು: ಹಿಂದಿನ ಸರ್ಕಾರದ ಅವಧಿಯಲ್ಲಿ ‘ಪೇ ಸಿಎಂ ಸೇ ಸಿಎಂ’ ಘೋಷಣೆ ಮೂಲಕ ಭ್ರಷ್ಟಾಚಾರ ಪ್ರಕರಣಗಳ ವಿರುದ್ಧ ಮೆಗಾ ಅಭಿಯಾನ ಕೈಗೊಂಡು ಆಡಳಿತಕ್ಕೆ ಬಂದಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಇದೀಗ ‘ಹಂದಿಗುಂದ ಪ್ರಕರಣ’ ಸವಾಲಾಗಿ ಪರಿಣಮಿಸಿದೆ. ಭ್ರಷ್ಟಾಚಾರ ವಿರುದ್ಧ ದೇಶವ್ಯಾಪಿ ಕಾನೂನು ಹೋರಾಟ ನಡೆಸುತ್ತಿರುವ ‘ಸಿಟಿಜನ್ ರೈಟ್ಸ್ ಫೌಂಡೇಶನ್’ ಕೆಎಎಸ್ ಅಧಿಕಾರಿ ಬಾಳಪ್ಪ ಹಂದಿಗುಂದ ವಿರುದ್ದದ ಭ್ರಷ್ಟಾಚಾರ ಆರೋಪದಲ್ಲಿ ಸಿದ್ದರಾಮಯ್ಯ ಸರ್ಕಾರದ ಲೋಪವನ್ನೇ ಎತ್ತಿ ಹಿಡಿದಿದೆ. ಈ ಸಂಬಂಧ ರಾಜ್ಯಪಾಲರಿಗೆ ದೂರು ನೀಡಿ KIADB ಕರ್ಮಕಾಂಡದ ತನಿಖೆಗೆ ರೋಚಕತೆ ತುಂಬಿದೆ.

ಕೆಐಎಡಿಬಿಯಲ್ಲಿ ಪ್ರಸ್ತುತ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿರುವ KAS ಅಧಿಕಾರಿ ಬಾಲಪ್ಪ ಹಂದಿಗುಂದ ವಿರುದ್ಧ ಬೆಂಗಳೂರಿನ ದೇವನಹಳ್ಳಿ ಸುತ್ತಮುತ್ತ ಅಕ್ರಮವಾಗಿ ಭೂಸ್ವಾಧೀನ ಮಾಡಿರುವ ಹಾಗೂ ಪರಿಹಾರ ಹಂಚಿಕೆಯಲ್ಲಿನ ಅಕ್ರಮಗಳ ವಿರುದ್ಧ ಗಂಭೀರ ಆರೋಪ ಕೇಳಿಬಂದಿವೆ. ಈ ಬಗ್ಗೆ ನ್ಯಾಯಾಲಯದ ಉಸ್ತುವಾರಿಯಲ್ಲಿ ಉನ್ನತಮಟ್ಟದ ತನಿಖೆಗೆ ಕೋರಿ ಸಿಟಿಜನ್ ರೈಟ್ಸ್ ಫೌಂಡೇಶನ್ (Citizen Rights Foundation) ಅಧ್ಯಕ್ಷ ಕೆ.ಎ.ಪಾಲ್ (K.A. Paul) ಅವರು ಮುಖ್ಯಮಂತ್ರಿಗೆ ಸೆಪ್ಟೆಂಬರ್ 12ರಂದು ದೂರು ಸಲ್ಲಿಸಿದ್ದರು. ಅಷ್ಟೇ ಅಲ್ಲ, ಈ ಭ್ರಷ್ಟಾಚಾರ ಆರೋಪ ಬಗ್ಗೆ ತನಿಖೆಗೆ ಕೋರಿ ಅಕ್ಟೊಬರ್ 10ರಂದು ಲೋಕಾಯುಕ್ತರಿಗೂ ದೂರು ಸಲ್ಲಿಸಿದ್ದರು.
ರಾಜ್ಯ ಸರ್ಕಾರ ಹಾಗೂ ಲೋಕಾಯುಕ್ತದಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗದಿದ್ದಾಗ ಜಾರಿ ನಿರ್ದೇಶನಾಲಯಕ್ಕೆ ಕೆ.ಎ.ಪಾಲ್ ಅವರು ದೂರು ಸಲ್ಲಿಸಿದ್ದಾರೆ. EDಯು ಪ್ರಕರಣದ ಬಗ್ಗೆ ಪರಿಶೀಲನೆ ಆರಂಭಿಸಿದೆ. ಆದರೆ ಬಾಳಪ್ಪ ಹಂದಿಗುಂದ ಅವರಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಕೈಗಾರಿಕಾ ಸಚಿವರು ಶ್ರೀರಕ್ಷೆಯಾಗಿದ್ದಾರೆ ಎಂದು ಆರೋಪಿಸುತ್ತಿದ್ದ ಕೆ.ಎ.ಪಾಲ್ ಅವರು ಶನಿವಾರ (11.01.2025) ರಾಜ್ಯಪಾಲರಿಗೆ ದೂರು ಸಲ್ಲಿಸಿ ಬಾಳಪ್ಪ ಹಂದಿಗುಂಡ ವಿರುದ್ದದ ಆರೋಪಗಳ ಬಗ್ಗೆ ತನಿಖೆಗೆ ನಿರ್ದೇಶನ ಕೋರಿದ್ದಾರೆ.

ಹಲವಾರು ಭ್ರಷ್ಟಾಚಾರ ಪ್ರಕರಣಗಳಲ್ಲಿ ವಿಚಾರಣೆ ಎದುರಿಸಬೇಕಿರುವ ಬಾಳಪ್ಪ ಹಂದಿಗುಂದ ಅವರು ಪ್ರಭಾವಿ ಅಧಿಕಾರಿಯಾಗಿದ್ದು ಅವರ ವಿರುದ್ಧ ಗಂಭೀರ ಪ್ರಕರಣಗಳಿದ್ದರೂ KIADBಯಲ್ಲೇ ಮುಂದುವರಿಸಲಾಗಿದೆ. ಇದರಿಂದಾಗಿ ಹಗರಣಗಳ ಕುರಿತ ಸಾಕ್ಷ್ಯಗಳನ್ನೂ ನಾಶಪಡಿಸುವ ಸಾಧ್ಯತೆಗಳಿದ್ದರೂ ಅವರನ್ನು ವರ್ಗಾಯಿಸದೆ ಇರುವ ಸರ್ಕಾರದ ನಡೆ ಬಗ್ಗೆಯೂ ರಾಜ್ಯಪಾಲರಿಗೆ ನೀಡಿರುವ ದೂರಿನಲ್ಲಿ ಕೆ.ಎ.ಪಾಲ್ ಅವರು ಗಮನಸೆಳೆದಿದ್ದಾರೆ.
ಗಂಭೀರ ಆರೋಪಗಳ ಬಗ್ಗೆ ರಾಜ್ಯಪಾಲರಿಗೆ ಮನವರಿಕೆ:
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕುಂದಾಣ ಹೋಬಳಿ, ಚಪ್ಪರದಹಳ್ಳಿ ಗ್ರಾಮದಲ್ಲಿ ಕೆಐಎಡಿಬಿ ಭೂಸ್ವಾಧೀನ ಸಂದರ್ಭದಲ್ಲಿ ಅರ್ಹರಲ್ಲದವರ ಹೆಸರಿಗೆ ಹಣ ಸಂದಾಯ ಆರೋಪ.
ಸರ್ಕಾರಿ ಜಮೀನನ್ನು ರೈತರ ಹೆಸರುಗಳಲ್ಲಿ ಗುರುತಿಸಿ ಅಕ್ರಮವಾಗಿ ಪರಿಹಾರ ನೀಡಲಾಗಿದೆ ಎಂಬ ಆರೋಪ.

ಆಕ್ಷೇಪಾರ್ಹ ನಿರ್ಧಾರದಿಂದ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ.
KIADBಯ ಈಗಿನ ಹಾಗೂ ಹಿಂದಿನ ಭೂಸ್ವಾಧೀನಾಧಿಕಾರಿಗಳು ಹಾಗೂ ಇತರ ಅಧಿಕಾರಿಗಳೂ ಹಗರಣದಲ್ಲಿ ಶಾಮೀಲಾಗಿರುವ ಶಂಕೆ
ಈ ಬಗ್ಗೆ ಸರಣಿ ದೂರುಗಳು ದಾಖಲಾದರೂ ವಿವಾದಿತ ವಿಶೇಷ ಭೂಸ್ವಾಧೀನಾಧಿಕಾರಿ ಬಾಳಪ್ಪ ಹಂದಿಗುಂದ ಅವರನ್ನು ಅದೇ ಸ್ಥಾನದಲ್ಲಿ ಮುಂದುವರಿಸಲು ಕೈಗಾರಿಕಾ ಸಚಿವರಿಂದ ಸಿಎಂಗೆ ಒತ್ತಡ.
ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವವರಿಗೆ ಸರ್ಕಾರದ ಶ್ರೀರಕ್ಷೆ ಇರುವುದರಿಂದ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆಗೆ ಆಗ್ರಹ.