ಸೋನಿಯಾ ಹೆಗಲಿಗೆ ಡಿಕೆಶಿ ಗಂಟು; ಇತಿಹಾಸ ಮರುಕಳಿಸಿದರೆ ಡಿಕೆಶಿಗೆ ಪಟ್ಟ

ರಾಜ್ಯ

ಕೆಳಗಿಳಿಯಲು ಸಿದ್ದು ಒಪ್ಪುತ್ತಾರಾ.? ಇತಿಹಾಸದ ಈ ಘಟನೆಗಳು ಮರುಕಳಿಸಿದರೆ ಡಿಕೆಶಿ ಪಟ್ಟಾಭಿಷೇಕ ಅಸಂಭವವೇನಲ್ಲ.

✍️. ಆರ್.ಟಿ.ವಿಠ್ಠಲಮೂರ್ತಿ

ಕಳೆದ ವಾರ ರಾಜ್ಯ ಕಾಂಗ್ರೆಸ್ ನ ಹಿರಿಯ ನಾಯಕರ ಪಡೆ ಸದಾಶಿವನಗರದ ನಿವಾಸದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದೆ. ಪಕ್ಷದಲ್ಲಿ ಭುಗಿಲೆದ್ದಿರುವ ಬಣ ಸಂಘರ್ಷದ ಬಗ್ಗೆ ಈ ಸಂದರ್ಭದಲ್ಲಿ ಅದು ಆತಂಕ ವ್ಯಕ್ತಪಡಿಸಿದೆ. ಅಂದ ಹಾಗೆ ವಿ.ಎಸ್. ಉಗ್ರಪ್ಪ, ಹೆಚ್.ಎಂ.ರೇವಣ್ಣ, ಡಾ.ಎಲ್.ಹನುಮಂತಯ್ಯ, ಪ್ರಕಾಶ್ ರಾಥೋಡ್, ಕೊಂಡಜ್ಜಿ ಮೋಹನ್ ಸೇರಿದಂತೆ ರಾಜ್ಯ ಕಾಂಗ್ರೆಸ್ ನ ಹಲ ಹಿರಿಯರು ಸೇರಿ ಒಂದು ವಾರ್ ಗ್ರೂಪ್ ರಚಿಸಿಕೊಂಡಿದ್ದಾರೆ. ಪಕ್ಷದಲ್ಲಿ ಯಾವುದೇ ಬಿಕ್ಕಟ್ಟು ಉದ್ಭವಿಸಿದರೂ ತಕ್ಷಣ ಅದಕ್ಕೆ ಬ್ರೇಕ್ ಹಾಕುವ ಕೆಲಸ ಮಾಡುವುದು ಈ ವಾರ್ ಗ್ರೂಪಿನ ಉದ್ದೇಶ. ಹೀಗೆ ಪಕ್ಷದಲ್ಲಿ ಕಾಣಿಸಿಕೊಳ್ಳುವ ಬಿಕ್ಕಟ್ಟುಗಳ ಬಗ್ಗೆ ಬೆಂಗಳೂರಿನ ಕುಮಾರಕೃಪಾ ಅತಿಥಿಗೃದಲ್ಲಿ ಕಾಲಕಾಲಕ್ಕೆ ಸಭೆ ಸೇರಿ ಚರ್ಚಿಸುವ ಈ ವಾರ್ ಗ್ರೂಪು ಮೊನ್ನೆ ಕೂಡಾ ಫೀಲ್ಡಿಗಿಳಿದಿದೆ.

ಸಿಎಂ ಹುದ್ದೆಯ ಅಧಿಕಾರ ಹಂಚಿಕೆಗೆ ಸಂಬಂಧಿಸಿದ ಮಾತು ಇನ್ನೂ ಬೂದಿ ಮುಚ್ಚಿದ ಕೆಂಡದಂತಿರುವಾಗಲೇ ರಾಜ್ಯ ಕಾಂಗ್ರೆಸ್ ನಲ್ಲಿ ಶುರುವಾಗಿರುವ ಬಣ ಸಂಘರ್ಷ ಈ ವಾರ್ ಗ್ರೂಪಿನ ಆತಂಕಕ್ಕೆ ಕಾರಣ.
ಹೀಗಾಗಿಯೇ ಕಳೆದ ವಾರ ಸದಾಶಿವನಗರದಲ್ಲಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನಿವಾಸಕ್ಕೆ ಹೋದ ವಿ.ಎಸ್.ಉಗ್ರಪ್ಪ, ಹೆಚ್.ಎಂ.ರೇವಣ್ಣ, ಡಾ.ಹನುಮಂತಯ್ಯ, ಪ್ರಕಾಶ್ ರಾಥೋಡ್, ಕೊಂಡಜ್ಜಿ ಮೋಹನ್ ಮತ್ತಿತರರು, ಬಣ ಸಂಘರ್ಷದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಹೀಗೆ ವಾರ್ ಗ್ರೂಪಿನ ಪ್ರಮುಖರು ತಮ್ಮ ಆತಂಕ ವ್ಯಕ್ತಪಡಿಸಿದಾಗ ಡಿ.ಕೆ.ಶಿವಕುಮಾರ್ ಅವರು ನಲವತ್ತು ನಿಮಿಷಕ್ಕೂ ಹೆಚ್ಚು ಕಾಲ ತಮ್ಮ ಮನದಿಂಗಿತವನ್ನು ತೋಡಿಕೊಂಡರಂತೆ.

‘ನೋಡ್ರೀ. ಪಕ್ಷದ ರಾಜ್ಯಾಧ್ಯಕ್ಷನಾಗಿ ಬಣ ರಾಜಕೀಯದ ಬಗ್ಗೆ ನಾನೇ ಮಾತನಾಡಿದರೆ ಏನು ಮೆಸೇಜು ಹೋಗುತ್ತದೆ.? ಹೀಗಾಗಿ ಯಾರು ಯಾರು ಡಿನ್ನರ್ ಮೀಟಿಂಗು ಮಾಡುತ್ತಾರೆ.? ಏನು ಚರ್ಚಿಸುತ್ತಾರೆ.? ಅನ್ನುವುದರ ಬಗ್ಗೆ ನಾನು ಮಾತನಾಡುವುದೇನಿಲ್ಲ. ಅದನ್ನು ವರಿಷ್ಟರು ನೋಡಿಕೊಳ್ಳುತ್ತಾರೆ. ಆದರೆ ನನ್ನ ಕೆಲಸ ಏನು.? ಪಕ್ಷ ಕಟ್ಟುವುದು ತಾನೇ.?

ಈ ಹಿಂದೆ ನಾನು ತಿಹಾರ್ ಜೈಲು ಸೇರಿದೆ. ಯಾವ ಕಾರಣಕ್ಕಾಗಿ ನಾನು ಜೈಲು ಸೇರಬೇಕಾಯಿತು ಅನ್ನುವುದು ಮೇಡಂ ಸೋನಿಯಾಗಾಂಧಿ ಯವರಿಗೆ, ರಾಹುಲ್ ಗಾಂಧಿ ಅವರಿಗೆ ಗೊತ್ತು. ಹೀಗಾಗಿ ಅವತ್ತು ನನ್ನನ್ನು ನೋಡಲು ತಿಹಾರ್ ಜೈಲಿಗೆ ಬಂದ ಮೇಡಂ ಸೋನಿಯಾಗಾಂಧಿ ಯವರು: ‘ಇರಲಿ ಇವೆಲ್ಲ ನಡೆಯುತ್ತದೆ. ನೀವು ಕರ್ನಾಟಕಕ್ಕೆ ಹೋಗಿ ಪಕ್ಷ ಕಟ್ಟಿ. 2023 ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತನ್ನಿ. ಮುಂದಿನದನ್ನು ನಮಗೆ ಬಿಡಿ ಅಂತ ಸೂಚನೆ ಕೊಟ್ಟರು. ಅವತ್ತು ತಿಹಾರ್ ಜೈಲಿನಲ್ಲಿ ನನ್ನನ್ನು ಭೇಟಿ ಮಾಡಿ ಅವರೇನು ಆದೇಶ ಕೊಟ್ಟರೋ.?ನಾನು ಅದನ್ನೇ ಪಾಲಿಸಿದ್ದೇನೆ.

2023 ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ನಾನೇನು ಮಾಡಿದ್ದೇನೆ ಅಂತ ಮೇಡಂ ಸೋನಿಯಾಗಾಂಧಿಯವರಿಗೆ, ರಾಹುಲ್ ಗಾಂಧಿಯವರಿಗೆ ಗೊತ್ತು. ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವುದು ಎಂದರೆ ಸಣ್ಣ ಮಾತಲ್ಲ. ಅದಕ್ಕೆ ತಂತ್ರಗಾರಿಕೆ ಬೇಕು. ಚುನಾವಣಾ ರಣಾಂಗಣದಲ್ಲಿ ಹೋರಾಡುವ ಯೋಧರಿಗೆ ದೊಡ್ಡ ಮಟ್ಟದಲ್ಲಿ ಶಸ್ತ್ರಾಸ್ತ್ರ ಪೂರೈಸಬೇಕು. ಇದನ್ನೆಲ್ಲ ಮಾಡದೆ ಯುದ್ಧ ಗೆಲ್ಲಲು ಸಾಧ್ಯವಿಲ್ಲವಲ್ಲ.? ಮೇಡಂ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿಯವರಿಗೆ ಇದೆಲ್ಲ ಗೊತ್ತು. ಹೀಗಾಗಿ ಮುಂದೇನು ಮಾಡಬೇಕು.?ಅಂತ ಅವರೇ ತೀರ್ಮಾನ ತೆಗೆದುಕೊಳ್ಳುತ್ತಾರೆ.
ಹೀಗಾಗಿ ರಾಜ್ಯದಲ್ಲಿ ಬಣ ರಾಜಕೀಯ ಶುರುವಾದರೆ ನಾನೇನು ಹೇಳಲಿ. ವರಿಷ್ಟರು ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟು ಪಕ್ಷ ಕಟ್ಟಲು ಹೇಳಿದ್ದಾರೆ. ಅದರ ಪ್ರಕಾರ ಪಕ್ಷ ಕಟ್ಟುವುದು ನನ್ನ ಕೆಲಸ. ಕೆಪಿಸಿಸಿ ಅಧ್ಯಕ್ಷನಾದ ಮೇಲೆ ರಾಜ್ಯದ ಎಪ್ಪತ್ತೈದು ಕಡೆ ಪಕ್ಷಕ್ಕೆ ಸ್ವಂತ ಕಚೇರಿಗಳು ತಲೆ ಎತ್ತಿವೆ. ಮುಂದಿನ ದಿನಗಳಲ್ಲಿ ಇದು ನೂರರ ಗಡಿ ದಾಟುವಂತೆ ಮಾಡುವುದು ನನ್ನಾಸೆ.

ಬೇಡ, ಇನ್ನು ನಿಮ್ಮ ಕೆಲಸ ಸಾಕು ಅಂತ ಪಕ್ಷದ ವರಿಷ್ಟರು ಹೇಳಿದರೆ ಅದನ್ನು ಗೌರವಿಸುತ್ತೇನೆ. ಅದೇ ರೀತಿ ನನಗೆ ಕೊಟ್ಟಿರುವ ಡಿಸಿಎಂ ಹುದ್ದೆಯಿಂದ ಕೆಳಗಿಳಿಯಲು ಹೇಳಿದರೆ ಇಳಿಯುತ್ತೇನೆ. ಫೈನಲಿ ನನ್ನ ಕೆಲಸ ಏನು.? ಪಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿ ದುಡಿಯುವುದಷ್ಟೇ ನನ್ನ ಕೆಲಸ. ಹೀಗಾಗಿ ನಾನು ಮುಂದೇನಾಗಬೇಕೋ.? ಅದನ್ನು ಪಕ್ಷ ನಿರ್ಧರಿಸುತ್ತದೆ. ಅಂದ ಹಾಗೆ ಈ ಕ್ಷಣಕ್ಕೂ ಹೇಳುತ್ತೇನೆ. ನನಗೆ ಯಾವ ಶಾಸಕರ ಬೆಂಬಲವೂ ಬೇಕಿಲ್ಲ. ಗುಂಪುಗಾರಿಕೆಯ ಅಗತ್ಯವೂ ಇಲ್ಲ. ಪಕ್ಷವೇ ಎಲ್ಲ ಅಂದ ಮೇಲೆ ಈ ಬಣ ರಾಜಕಾರಣದ ಬಗ್ಗೆ ಹೇಳಲು ನನಗೇನೂ ಇಲ್ಲ ಅಂತ ಡಿಕೆಶಿ ವಿವರಿಸಿದ್ದಾರೆ. ಹೀಗೆ ತಮ್ಮನ್ನು ಭೇಟಿ ಮಾಡಿದ ವಾರ್ ಗ್ರೂಪಿಗೆ ಏನು ಹೇಳಿದರೋ.? ಅದನ್ನೇ ಮರುದಿನ ಶೃಂಗೇರಿ ಪ್ರವಾಸದ ಸಂದರ್ಭದಲ್ಲಿ ಸೂಚ್ಯವಾಗಿ ಹೇಳಿದ ಡಿ.ಕೆ.ಶಿವಕುಮಾರ್, ಅಧಿಕಾರ ಹಸ್ತಾಂತರ ಪ್ರಕ್ರಿಯೆಯ ಜವಾಬ್ದಾರಿಯನ್ನು ಹೈಕಮಾಂಡ್ ಹೆಗಲ ಮೇಲೆ ಹೊರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅರ್ಥಾತ್, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ನಿರ್ದಿಷ್ಟ ಕಾಲದ ನಂತರ ಕೆಳಗಿಳಿಸಿ, ತಮಗೆ ಪಟ್ಟ ಕಟ್ಟುವ ರಿಸ್ಕನ್ನು ವರಿಷ್ಟರಿಗೆ ಬಿಟ್ಟಿದ್ದಾರೆ. ಸಧ್ಯದ ಸ್ಥಿತಿಯಲ್ಲಿ ಡಿ.ಕೆ.ಶಿವಕುಮಾರ್ ಅವರ ಈ ನಡೆ ಕುಶಲ ತಂತ್ರಗಾರಿಕೆ ಎಂದರೆ ಅಸಹಜವೇನಲ್ಲ.

ಇತಿಹಾಸ ಮರುಕಳಿಸಿದರೆ ಡಿಕೆಶಿಗೆ ಪಟ್ಟ

ಅಂದ ಹಾಗೆ ಅಧಿಕಾರ ಹಂಚಿಕೆಯ ಜವಾಬ್ದಾರಿಯನ್ನು ವರಿಷ್ಟರ ಹೆಗಲಿಗೆ ಹಾಕಿರುವ ಡಿಕೆಶಿ ನಡೆ, ಇತಿಹಾಸದ ಆ ಎರಡು ಘಟನೆಗಳನ್ನು ನೆನಪಿಸುತ್ತಿದೆ.
ಮೊದಲನೆಯ ಘಟನೆ ನಡೆದಿದ್ದು 1990 ರಲ್ಲಿ. ಆ ಸಂದರ್ಭದಲ್ಲಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲರನ್ನು ಪದಚ್ಯುತಗೊಳಿಸಿದ ಕಾಂಗ್ರೆಸ್ ಹೈಕಮಾಂಡ್ ಪರ್ಯಾಯ ನಾಯಕನ ಆಯ್ಕೆಗೆ ಮುಂದಾಗಿತ್ತು. ಈ ಸಂದರ್ಭದಲ್ಲಿ ನಾಯಕನ ಆಯ್ಕೆಗೆ ಶಾಸಕಾಂಗ ಸಭೆಯಲ್ಲಿ ಚುನಾವಣೆ ನಡೆದಿದ್ದರೆ ನಿಸ್ಸಂಶಯವಾಗಿ ಹಿರಿಯ ನಾಯಕ, ಹುಲಕೋಟಿಯ ಹುಲಿ ಕೆ.ಹೆಚ್.ಪಾಟೀಲರು ಆಯ್ಕೆಯಾಗುತ್ತಿದ್ದರು. ಯಾವಾಗ ಈ ವಿಷಯ ಸ್ಪಷ್ಟವಾಯಿತೋ.? ಆಗ ದಿಲ್ಲಿಯ ಕಾಂಗ್ರೆಸ್ ಥಿಂಕ್ ಟ್ಯಾಂಕಿನ ಪ್ರಮುಖರು ಚಿಂತೆಗೊಳಗಾದರು. ಕಾರಣ.? ಕೇಂದ್ತದಲ್ಲಿ ಅಧಿಕಾರ ಕಳೆದುಕೊಂಡಿದ್ದ ಕಾಂಗ್ರೆಸ್ ಪಕ್ಷಕ್ಕೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಾರ್ಟಿ ಫಂಡು ತರಬಲ್ಲವರು ಬೇಕಾಗಿದ್ದರು. ಹೀಗಾಗಿ ಕರ್ನಾಟಕದಲ್ಲಿ ಕೆ.ಹೆಚ್.ಪಾಟೀಲರು ಮುಖ್ಯಮಂತ್ರಿಯಾಗುವ ಬದಲು ಎಸ್.ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಬೇಕು ಎಂಬುದು ಅವರ ಲೆಕ್ಕಾಚಾರವಾಗಿತ್ತು. ಆದ್ದರಿಂದಲೇ ರಾಜೀವ್ ಗಾಂಧಿಯವರಿಗೆ ಈ ವಿಷಯ ತಿಳಿಸಿದ ಥಿಂಕ್ ಟ್ಯಾಂಕ್ ಪ್ರಮುಖರು, ಈ ವಿಷಯದಲ್ಲಿ ಕೆ.ಹೆಚ್.ಪಾಟೀಲರ ಮನ ಒಲಿಸುವ ಜವಾಬ್ದಾರಿಯನ್ನು ಅವರಿಗೇ ಬಿಟ್ಟರು.

ಹೀಗಾಗಿ ತಾವೇ ಖುದ್ದಾಗಿ ಕೆ.ಹೆಚ್.ಪಾಟೀಲರಿಗೆ ಫೋನು ಮಾಡಿದ ರಾಜೀವ್ ಗಾಂಧಿ ಅವರು: ‘ಪಾಟೀಲ್ ಜೀ. ನಿಮ್ಮಿಂದ ನನಗೊಂದು ಸಹಾಯವಾಗಬೇಕು. ನೀವು ನಮ್ಮ ತಾಯಿಯವರ ಕಾಲದಿಂದ ಪಕ್ಷದ ನಿಷ್ಟಾವಂತರು. ನಮ್ಮ ತಾಯಿಯವರೂ ಇದನ್ನು ಜ್ಞಾಪಿಸಿಕೊಳ್ಳುತ್ತಿದ್ದರು. ಹೀಗಾಗಿ ಈ ಸಂದರ್ಭದಲ್ಲಿ ನಿಮ್ಮಿಂದ ಒಂದು ಸಹಕಾರ ಕೋರುತ್ತಿದ್ದೇನೆ’ಎಂದರು.
ರಾಜೀವ್ ಗಾಂಧಿಯವರ ಈ ಮಾತು ಕೇಳಿದ ಕೆ.ಹೆಚ್.ಪಾಟೀಲರು: ‘ಸಾರ್.ನೀವು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು. ನೀವು ನನ್ನ ಬಳಿ ಕೋರಿಕೊಳ್ಳಬೇಕಿಲ್ಲ. ಆದೇಶ ನೀಡಿ ಸಾಕು. ನಾನದನ್ನು ಪಾಲಿಸುತ್ತೇನೆ’ ಎಂದರು.
ಅದಕ್ಕುತ್ತರಿಸಿದ ರಾಜೀವ್ ಗಾಂಧಿಯವರು, ಕೆಲ ಉದ್ದೇಶಗಳಿಂದಾಗಿ ನಾವು ಕರ್ನಾಟಕದಲ್ಲಿ ಎಸ್.ಬಂಗಾರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ನಿರ್ಧರಿಸಿದ್ದೇವೆ. ನೀವು ಸಹಕರಿಸಬೇಕು ಎಂದರು.
ಅವರ ಈ ಮಾತಿಗೆ ಕೆ.ಹೆಚ್.ಪಾಟೀಲರು ತಲೆಬಾಗಿದ್ದಷ್ಟೇ ಅಲ್ಲ. ಶಾಸಕಾಂಗ ಸಭೆಯಲ್ಲಿ ತಾವೇ ಮುಂದಾಗಿ ಬಂಗಾರಪ್ಪ ಅವರ ಆಯ್ಕೆಗೆ ದಾರಿ ಮಾಡಿಕೊಟ್ಟರು.

ಇದಾದ ನಂತರದ ಮತ್ತೊಂದು ಘಟನೆ 1992 ರಲ್ಲಿ ನಡೆಯಿತು. ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ಬಂಗಾರಪ್ಪ ಪದಚ್ಯುತರಾಗಿ ಪರ್ಯಾಯ ನಾಯಕನ ಆಯ್ಕೆಗೆ ಕಸರತ್ತು ಆರಂಭವಾಗಿತ್ತು. ಅವತ್ತು ಪರ್ಯಾಯ ನಾಯಕನ ಆಯ್ಕೆಗೆ ಶಾಸಕಾಂಗ ಸಭೆಯಲ್ಲಿ ಚುನಾವಣೆ ನಡೆದರೆ ಒಕ್ಕಲಿಗ ಸಮುದಾಯದ ನಾಯಕ ಎಸ್.ಎಂ.ಕೃಷ್ಣ ಆಯ್ಕೆಯಾಗುವುದು ನಿಶ್ಚಿತವಾಗಿತ್ತು.
ಆದರೆ ಯಾವಾಗ ಇದು ಸ್ಪಷ್ಟವಾಯಿತೋ.? ಆಗ ಕೇರಳದ ಕಾಂಗ್ರೆಸ್ ನಾಯಕ ಕೆ.ಕರುಣಾಕರನ್ ಮತ್ತು ತಮಿಳುನಾಡಿನ ಮರಗತಂ ಚಂದ್ರಶೇಖರ್ ಅವರು ವೀರಪ್ಪ ಮೊಯ್ಲಿ ಅವರ ಪರವಾಗಿ ಫೀಲ್ಡಿಗಿಳಿದರು. ಮತ್ತು ದೇವಮಾನವ ಚಂದ್ರಾಸ್ವಾಮಿಯವರ ನೆರವು ಪಡೆದು ಪ್ರಧಾನಿ ಪಿ.ವಿ.ನರಸಿಂಹರಾಯರ ಮೇಲೆ ಒತ್ತಡ ಹೇರಿದರು. ಎಷ್ಟೇ ಆದರೂ ಈಗ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ಬಂಗಾರಪ್ಪ ಅವರು ಹಿಂದುಳಿದ ವರ್ಗದಿಂದ ಬಂದವರು. ಹೀಗಾಗಿ ಅವರ ಜಾಗಕ್ಕೆ ಹಿಂದುಳಿದ ವರ್ಗದವರೇ ಆದ ಎಂ.ವೀರಪ್ಪ ಮೊಯ್ಲಿಯವರನ್ನು ತಂದು ಕೂರಿಸುವುದು ಬೆಟರ್ರು ಎಂಬ ಮಾತು ಯಾವಾಗ ನರಸಿಂಹರಾಯರ ಕಿವಿಗೆ ಬಿತ್ತೋ?ಆಗ ಅವರೂ ಹೆಚ್ಚು ಮಾತನಾಡದೆ ಮೊಯ್ಲಿ ಹೆಸರಿಗೆ ಗ್ರೀನ್ ಸಿಗ್ನಲ್ ಕೊಟ್ಟರು. ಇವತ್ತೂ ಅಷ್ಟೇ. ಇತಿಹಾಸದ ಈ ಘಟನೆಗಳು ಮರುಕಳಿಸಿದರೆ ಡಿಕೆಶಿ ಪಟ್ಟಾಭಿಷೇಕ ಅಸಂಭವವೇನಲ್ಲ.

ಕೆಳಗಿಳಿಯಲು ಸಿದ್ದು ಒಪ್ಪುತ್ತಾರಾ.?

ಒಂದು ವೇಳೆ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಒಪ್ಪಂದವಾಗಿದ್ದರೆ ಕಾಂಗ್ರೆಸ್ ವರಿಷ್ಟರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಇದೇ ರೀತಿ ಸೂಚನೆ ಕೊಡಬೇಕು. ಒಂದು ವೇಳೆ ಒಪ್ಪಂದ ಆಗದೆ ಇದ್ದರೂ ಪರ್ಯಾಯ ನಾಯಕನ ಆಯ್ಕೆಗೆ ಅದು ಮನಸ್ಸು ಮಾಡಿದರೆ ಹೀಗೆಯೇ ಸೂಚನೆ ನೀಡಿ ಸಹಕಾರ ಕೊಡಿ ಅನ್ನಬೇಕು.

ಆದರೆ ಸಧ್ಯದ ಸ್ಥಿತಿಯಲ್ಲಿ ಕಾಂಗ್ರೆಸ್ ವರಿಷ್ಟರು ಅಧಿಕಾರ ತ್ಯಾಗಕ್ಕೆ ಸೂಚನೆ ನೀಡಿದರೆ ಅದನ್ನು ಸಿದ್ದರಾಮಯ್ಯ ಒಪ್ಪುವುದು ಅನುಮಾನ.
ಇದೇ ರೀತಿ ಅಧಿಕಾರ ಹಂಚಿಕೆ ಒಪ್ಪಂದದ ಹೆಸರಿನಲ್ಲಿ ಇಲ್ಲವೇ ತಮ್ಮ ತೀರ್ಮಾನದ ಹಿನ್ನೆಲೆಯಲ್ಲಿ ಅಧಿಕಾರ ತ್ಯಾಗ ಮಾಡುವಂತೆ ವರಿಷ್ಟರು ಸಿದ್ಧರಾಮಯ್ಯ ಅವರಿಗೆ ಸೂಚನೆ ನೀಡಲು ಯೋಚಿಸುತ್ತಾರೆ ಎಂಬುದೂ ಅಸಹಜವಲ್ಲ.
ಯಾಕೆಂದರೆ ಜನನಾಯಕರಾಗಿ ಬೆಳೆದು ನಿಂತಿರುವ ಸಿದ್ಧರಾಮಯ್ಯ ಅವರಿಗೆ ಅಹಿಂದ ವರ್ಗಗಳ ಸಾಲಿಡ್ಡು ಬೆಂಬಲವಿದೆ. ಹೀಗಾಗಿ ಒಬ್ಬ ಜನನಾಯಕನನ್ನು ಕೆಳಗಿಳಿಸುವ ನಿರ್ಧಾರ ತೆಗೆದುಕೊಳ್ಳುವುದು ಎಷ್ಟು ಕಷ್ಟ ಅಂತ ವರಿಷ್ಟರಿಗೂ ಗೊತ್ತು.

1980 ರಲ್ಲಿ ದೇವರಾಜ ಅರಸರನ್ನು ಮುಖ್ಯಮಂತ್ರಿ ಹುದ್ದೆಯಿಂದ ಬಲವಂತವಾಗಿ ಕೆಳಗಿಳಿಸಿದ ಕಾಂಗ್ರೆಸ್ 1983 ರಲ್ಲಿ ಮೊದಲ ಬಾರಿ ಅಧಿಕಾರ ಕಳೆದುಕೊಂಡಿತು. 1992 ರಲ್ಲಿ ಬಂಗಾರಪ್ಪ ಅವರನ್ನು ಬಲವಂತವಾಗಿ ಕೆಳಗಿಳಿಸಿದ ಕಾರಣಕ್ಕಾಗಿ 1994 ರ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿತು. ಈಗ ಸಿದ್ದರಾಮಯ್ಯ ಅವರ ವಿಷಯದಲ್ಲೂ ಅಷ್ಟೇ. ಅವರನ್ನು ಬಲವಂತವಾಗಿ ಇಳಿಸಲು ಪ್ರಯತ್ನಿಸಿದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಬೋರಲು ಮಲಗುವುದು ಗ್ಯಾರಂಟಿ.
ಅದಕ್ಕಿಂತ ದೊಡ್ಡ ಸಮಸ್ಯೆ ಎಂದರೆ ಅಸ್ತಿತ್ವದಲ್ಲಿರುವ ಹಾಲಿ ಸರ್ಕಾರವೇ ಉರುಳುವಂತಹ ಸನ್ನಿವೇಶ ಸೃಷ್ಟಿಯಾಗಬಹುದು. ಇಲ್ಲ, ಶಾಸಕಾಂಗ ಪಕ್ಷದ ಬಲವನ್ನು ಬಳಸಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸೋಣ ಎಂದರೆ ಅದು ಕೂಡಾ ಬೂಮ್ ರಾಂಗ್ ಆಗುವ ಸಾಧ್ಯತೆ ಜಾಸ್ತಿ.

ಯಾಕೆಂದರೆ ರಾಜ್ಯದ ನೂರಾ ಮೂವತ್ತರಿಂದ ನೂರೈವತ್ತು ಕ್ಷೇತ್ರಗಳಲ್ಲಿ ಕುರುಬ ಮತದಾರರ ಸಂಖ್ಯೆ ಗಣನೀಯವಾಗಿದೆ. ಈ ಕ್ಷೇತ್ರಗಳಲ್ಲಿ ಹತ್ತು ಸಾವಿರದಿಂದ ನಲವತ್ತು ಸಾವಿರದಷ್ಟಿರುವ ಕುರುಬ ಮತದಾರರನ್ನು ನಿರ್ಲಕ್ಷಿಸಿ ಕಾಂಗ್ರೆಸ್ ಶಾಸಕರು ಬಹಿರಂಗವಾಗಿ ಡಿಕೆಶಿ ಬೆಂಬಲಕ್ಕೆ ನಿಲ್ಲುವ ಸಾಧ್ಯತೆ ಕಡಿಮೆ.
ಹೀಗಾಗಿ ಸನ್ನಿವೇಶವನ್ನು ಆಳವಾಗಿ ಗಮನಿಸಿರುವ ಡಿಕೆಶಿ, ಬಣ ರಾಜಕೀಯದ ಗೊಡವೆಗೆ ಹೋಗದೆ ಅಧಿಕಾರ ಹಸ್ತಾಂತರದ ಜವಾಬ್ದಾರಿಯನ್ನು ಸೋನಿಯಾಗಾಂಧಿಯವರ ಹೆಗಲಿಗೆ ವರ್ಗಾಯಿಸಿದ್ದಾರೆ. ಸಧ್ಯದ ಪರಿಸ್ಥಿತಿಯಲ್ಲಿ ಅದು ಜಾಣ ನಡೆಯೂ ಹೌದು.

ಆರ್.ಟಿ.ವಿಠ್ಠಲಮೂರ್ತಿ