ಬಿಜೆಪಿ ವಿರುದ್ಧ ತಿರುಗಿಬಿದ್ದ ದೇಗುಲಗಳ ಅರ್ಚಕರು; ಬಿಜೆಪಿಗೆ ಭಾರೀ ಮುಖಭಂಗ

ರಾಜ್ಯ

ಬಿಜೆಪಿ ಸರ್ಕಾರ ನಮಗೆ ತಸ್ತಿಕ್‌ ಕೊಟ್ಟಿರಲಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಬಂದ ತಕ್ಷಣ ಬೇಡಿಕೆ ಈಡೇರಿದೆ.

ರಾಜ್ಯಸರ್ಕಾರದ ಧರ್ಮದಾಯ ದತ್ತಿಗಳ ತಿದ್ದುಪಡಿ ಮಸೂದೆಯನ್ನು ಬಿಜೆಪಿಯು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದೆ. ಆದರೆ ಈ ಕುರಿತು ರಾಜ್ಯದ ಹಿಂದೂ ದೇವಾಲಯಗಳ ಅರ್ಚಕರ ಸಂಘವು ಬಿಜೆಪಿ ವಿರುದ್ಧ ಕಿಡಿಕಾರಿದ್ದು ಕಾಂಗ್ರೆಸ್ ಸರ್ಕಾರದ ನಡೆಯನ್ನು ಸಮರ್ಥಿಸಿವೆ. ಕಾಂಗ್ರೆಸ್ ಸರ್ಕಾರವು ದೇವಾಲಯಗಳ ಹಣವನ್ನು ಒಳ್ಳೆಯ ಕೆಲಸಗಳಿಗೆ ಬಳಸಿಕೊಳ್ಳುತ್ತಿದೆ. ಚುನಾವಣಾ ಹತ್ತಿರ ಬರುತ್ತಿದಂತೆ ಬಿಜೆಪಿಯವರು ಭಾವನೆಗಳ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅರ್ಚಕರ ಸಂಘವು ದೂರಿದೆ.

ಸುದ್ದಿಗೋಷ್ಟಿ ನಡೆಸಿದ ರಾಜ್ಯ ಆಗಮಿಕರು ಹಾಗೂ ಅರ್ಚಕರ ಸಂಘವು ಬಿಜೆಪಿ ನಡೆಯನ್ನು ಖಂಡಿಸಿತು. ಅಲ್ಲದೆ ಸಂಘದ ಪ್ರಧಾನ ಸಲಹೆಗಾರ ರಾಧಾಕೃಷ್ಣ ಮಾತನಾಡಿ, ಹಿಂದೂ ಧರ್ಮವನ್ನು ಎತ್ತಿ ಹಿಡಿಯುವ ಕೆಲಸ ಎ ದರ್ಜೆಯ ದೇವಸ್ಥಾನಗಳಲ್ಲಿ ಆಗುತ್ತಿದೆ. ನಿತ್ಯವೂ ಕೋಟ್ಯಂತರ ರೂ. ಹಣ ಸಂಗ್ರಹಣೆ ಆಗುತ್ತಿದ್ದು ಇದನ್ನು ಬಿಜೆಪಿ ಸಹಿಸುತ್ತಿಲ್ಲ. ಇದೇ ಕಾರಣ ಇಟ್ಟುಕೊಂಡು ಚರ್ಚ್, ಮಸೀದಿಗಳಿಗೆ ಹೋಗುತ್ತಿದೆ ಎಂಬ ಅಪಪ್ರಚಾರ ನಡೆಸುತ್ತಿದ್ದಾರೆ. ದೈವ ದೇವರುಗಳನ್ನು,ದೇವಸ್ಥಾನಗಳನ್ನು ರಾಜಕೀಯಕ್ಕೆ ಎಳೆಯುವುದನ್ನು ಬಿಟ್ಟು ಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಎ ದರ್ಜೆಯ ದೇವಾಲಯಗಳ ಬಗ್ಗೆ ಅಪಪ್ರಚಾರ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರದಿಂದ ದೇವಾಲಯಗಳ ಅಭಿವೃದ್ಧಿ ಕೆಲಸ ಆಗುತ್ತಿದೆ. ಎ ದರ್ಜೆಯ ದೇವಸ್ಥಾನಗಳಲ್ಲಿ ನೂರಾರು ಕೋಟಿ ವ್ಯವಹಾರ ನಡೆಯುತ್ತಿದೆ. ಈ ಅಭಿವೃದ್ಧಿ ಸಹಿಸಲಾಗದೇ ಬಿಜೆಪಿ ಈ ರೀತಿಯ ಕೆಲಸ ಮಾಡುತ್ತಿದೆ ಎಂದು ದೂರಿದರು. ರಾಜ್ಯದಲ್ಲಿ 50 ವರ್ಷದಿಂದ ಹೋರಾಟ ನಡೆಸುತ್ತಿದ್ದು 42 ಸಾವಿರ ದೇವಾಲಯಗಳು ಬೀದಿ ಪಾಲಾಗಿದ್ದವು. ಅದಕ್ಕೆ ಪರಿಹಾರವಾಗಿ ತಸ್ತಿಕ್ ನೀಡಲಾಗುತ್ತಿದೆ. ನಾವೂ ಆ ಹಣದಲ್ಲಿ ದೇವಾಲಯದ ಪೂಜೆಗಳನ್ನು ಮಾಡಬೇಕು. ರಾಮಲಿಂಗಾ ರೆಡ್ಡಿ ನಮ್ಮ ಹಲವು ಬೇಡಿಕೆ ಈಡೇರಿಸಿದ್ದಾರೆ. ಈ ಹಿಂದಿನ ಸರ್ಕಾರ ನಮಗೆ ತಸ್ತಿಕ್‌ ಕೊಟ್ಟಿರಲಿಲ್ಲ. ಆದರೆ ಹೊಸ ಸರ್ಕಾರ ಬಂದ ತಕ್ಷಣ ಬೇಡಿಕೆ ಈಡೇರಿದೆ. ದೇವಾಲಯದ ಹಣ ಯಾರ ಹುಂಡಿಗೂ ಸೇರುತ್ತಿಲ್ಲ ಎಂದು ಹೇಳಿದರು.

ನಾವು ಅರ್ಚಕರು ಈ ವಿಚಾರದಲ್ಲಿ ಪ್ರತಿಭಟನೆ ಮಾಡುವುದಿಲ್ಲ. ನೇರವಾಗಿ ಬಿಜೆಪಿ ನಾಯಕರನ್ನು ಭೇಟಿ ಮಾಡಿಯೇ ಮನವಿ ಮಾಡಿಕೊಳ್ಳುತ್ತೇವೆ. ನಾವು ಪ್ರತಿ ಬಿಜೆಪಿಯವರ ಮನೆಗೆ ಹೋಗಿ ಮನವಿ ಪತ್ರಗಳನ್ನು ಕೊಟ್ಟು ಕಾಲಿಗೆ ಬಿದ್ದು ವಿರೋಧ ಮಾಡಬೇಡಿ ಅಂತ ಕೇಳಿ ಕೊಳ್ಳುತ್ತೇವೆ. ಇದು ಸರಿಯಲ್ಲ ಅನ್ನೋದನ್ನು ಅವರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಅರ್ಚಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್ ಎಸ್ ದೀಕ್ಷಿತ್ ಹೇಳಿದರು