ಗುಂಪು ಹಲ್ಲೆ ತಡೆಗಟ್ಟಲು ಮಾನ್ಯ ಸುಪ್ರೀಂ ಕೋರ್ಟ್ ನೀಡಿರುವ ಮಾರ್ಗಸೂಚಿಗಳು. ಇದು ರಾಜ್ಯದಲ್ಲಿ ಪಾಲನೆಯಾಗುತ್ತಿದೆಯೇ.?

ಕರಾವಳಿ

ಕಾಂಗ್ರೆಸ್ ನಾಯಕರೇ ಕರಾವಳಿ ಕೋಮುವಾದದ ಮೂಲ ಸಮಸ್ಯೆ.

ಅಶ್ರಫ್ ಎಂಬ ಮಾನಸಿಕ ಅಸ್ವಸ್ತನ (ಗುಂಪು) ಹತ್ಯೆ ಪ್ರಕರಣ: ಮಂಗಳೂರು ಕಮೀಷನರ್ ಸಾಹೇಬ್ರು ಹೇಳುತ್ತಾರೆ, ಪಾಕಿಸ್ತಾನ ಪರ ಘೋಷಣೆಯ ಯಾವುದೇ ಸಾಕ್ಷಿ ಸಿಕ್ಕಿಲ್ಲ. ಬೆಂಗಳೂರಲ್ಲಿ ಕುಳಿತ ಗೃಹಮಂತ್ರಿಯೊಬ್ಬರು ಹೇಳಿಕೆ ನೀಡುತ್ತಾರೆ. ಪಾಕಿಸ್ತಾನ ಪರ ಘೋಷಣೆ ಕೂಗಿದ ಅಂತ, ಮರುದಿನ ಮರು ಹೇಳಿಕೆ ನೀಡುತ್ತಾರೆ, ಆರೋಪಿಗಳು ಹೇಳಿದ್ದಾರೆ ಅಂತ.!
ಮುಖ್ಯಮಂತ್ರಿ ಗಳ ಹೇಳಿಕೆ: ಪಾಕಿಸ್ತಾನ ಪರ ಯಾರೂ ಘೋಷಣೆ ಕೂಗಿದರೂ ರಾಷ್ಟ್ರದ್ರೋಹ. (ಈ ಬಗ್ಗೆ ಇವತ್ತು ಹುಟ್ಟಿದ ಮಗುವಿಗೂ ಜ್ಞಾನವಿದೆ.) ‘ಮಾನಸಿಕ ಅಸ್ವಸ್ತನಾದ ಯುವಕನ ಹತ್ಯೆಯನ್ನು ಖಂಡಿಸದ ಸಿದ್ರಾಮಣ್ಣ ಪೊಲೀಸ್ ವೈಫಲ್ಯದ ಬಗ್ಗೆ, ಕರಾವಳಿಯ ಕೋಮುವಾದದ ಬಗ್ಗೆ ಮಾತನಾಡದೆ ‘ಪಾಕಿಸ್ತಾನ ಪರ ಘೋಷಣೆ ಕೂಗುವುದು ಅಪರಾಧ’ ಎಂದು ಆರೋಪಿಗಳ ಧ್ವನಿಯಲ್ಲಿ ಮಾತನಾಡಿದರು. ಆದರೆ.. ಅಧಿಕಾರಸ್ಥಾನದಲ್ಲಿರುವ ಒಬ್ಬನೇ ಒಬ್ಬ ಗುಂಪು ಹತ್ಯೆಯ ಬಗ್ಗೆ ತುಟಿ ಬಿಚ್ಚಿಲ್ಲ.! ಇದು ದುರಂತ.

ಗೌರವಾನ್ವಿತ ಸುಪ್ರೀಂ ಕೋರ್ಟ್ ಗುಂಪು ಹತ್ಯೆಯ ಈ ಬಗ್ಗೆ ಖಡಕ್ಕಾಗಿ ಹೇಳಿದೆ.

‘ಅನೈತಿಕ ಗೂಂಡಾಗಿರಿ’ ಯಿಂದ ಅನೇಕ ಜನರು ಸಾವನ್ನಪ್ಪಿದ್ದರು. ಇದರ ವಿರುದ್ಧ ಕಠಿಣ ಕಾನೂನು ಜಾರಿಗೊಳಿಸುವಂತೆ ಸಾಮಾಜಿಕ ಕಾರ್ಯಕರ್ತ ತೆಹ್ಸೀನ್‌ ಪೂನಾವಾಲಾ ಹಾಗೂ ಇತರರು ಸುಪ್ರಿಂ ಕೋರ್ಟ್‌ ಮೆಟ್ಟಿಲೇರಿದ್ದರು.

ಜುಲೈ 17, 2018ರಲ್ಲಿ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ಮಾನ್ಯ ಸುಪ್ರಿಂ ಕೋರ್ಟ್‌ ನ ಮುಖ್ಯ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್‌ ಇದ್ದ ಪೀಠವು ಈ ಬಗ್ಗೆ ವಿಶೇಷ ಕಾನೂನನ್ನು ರಚಿಸಬೇಕೆಂದು ಸರ್ಕಾರಕ್ಕೆ ಸೂಚಿಸಿತ್ತು.

ಗುಂಪು ಹಲ್ಲೆ (ಅನೈತಿಕ ಪೊಲೀಸ್‌ಗಿರಿ) ತಡೆಗಟ್ಟಲು ಮಾನ್ಯ ನ್ಯಾಯಾಲಯ ನೀಡಿದ ಮಾರ್ಗಸೂಚಿಗಳೆಂದರೆ:-

ಜಿಲ್ಲೆಯಲ್ಲಿ ಪೊಲೀಸ್‌ ವರಿಷ್ಠಾಧಿಕಾರಿ (ಆ ಹುದ್ದೆಗಿಂತ ಮೇಲಿನಲ್ಲಿರುವ ಅಧಿಕಾರಿಯಾದರೂ ಸರಿಯೇ) ನೋಡಲ್‌ ಅಧಿಕಾರಿಯನ್ನಾಗಿ ನೇಮಿಸಬೇಕು. ನೋಡಲ್‌ ಅಧಿಕಾರಿಯು ಒಂದು ಟಾಸ್ಕ್‌ ಫೋರ್ಸ್‌ ರಚಿಸಬೇಕು. ಗುಂಪು ಹಲ್ಲೆಯಂತಹ ಪ್ರಕರಣಗಳನ್ನು ತಡೆಯಲು ಟಾಸ್ಕ್‌ ಫೋರ್ಸ್‌ಗೆ ಡಿಎಸ್‌ಪಿ ಶ್ರೇಣಿಯ ಅಧಿಕಾರಿಯನ್ನು ನೇಮಿಸಬೇಕು. ಇವರು ಗುಪ್ತಚರ ಇಲಾಖೆಯ ಸಹಾಯ ಪಡೆದು ಜಿಲ್ಲೆಯಲ್ಲಿ ನಡೆಯುತ್ತಿರುವ ದ್ವೇಷ ಭಾಷಣ, ಪ್ರಚೋದನಕಾರಿ ಹೇಳಿಕೆಗಳು ಮತ್ತು ನಕಲಿ ಸುದ್ದಿಗಳನ್ನು ಹರಡುವವರ ಬಗ್ಗೆ ಮಾಹಿತಿ ಕಲೆ ಹಾಕಬೇಕಾಗಿದೆ.
ತೀರ್ಪು ಬಂದ ಮೂರು ವಾರಗಳ ಒಳಗೆ ಜಿಲ್ಲೆ ಹಾಗೂ ಗ್ರಾಮಗಳಲ್ಲಿ ವರದಿಯಾದ ಗುಂಪು ಹಲ್ಲೆಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ವರದಿ ಮಾಡಿ, ಕೇಂದ್ರ ಸರ್ಕಾರಕ್ಕೆ ನೀಡಬೇಕು. ಅಂತಹ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಕ್ರಮ ಮತ್ತು ನಿಗಾ ವಹಿಸಬೇಕು.
ಗುಂಪು ಹಿಂಸಾಚಾರದ ಬಗ್ಗೆ ತಿಳಿದುಕೊಳ್ಳಲು ನೋಡಲ್ ಅಧಿಕಾರಿಯು(ಎಸ್‌ಪಿ) ಜಿಲ್ಲೆಗಳಲ್ಲಿನ ಸ್ಥಳೀಯ ಗುಪ್ತಚರ ಘಟಕಗಳು ಮತ್ತು ಟಾಸ್ಕ್‌ ಫೋರ್ಸ್‌ಗಳೊಂದಿಗೆ ನಿಯಮಿತ ಸಭೆಗಳನ್ನು (ಕನಿಷ್ಠ ತಿಂಗಳಿಗೊಮ್ಮೆ) ನಡೆಸಲೇಬೇಕು.
ಪೊಲೀಸ್ ಮಹಾನಿರ್ದೇಶಕರು ಅಥವಾ ಗೃಹ ಇಲಾಖೆಯ ಕಾರ್ಯದರ್ಶಿಯು ಎಲ್ಲಾ ನೋಡಲ್ ಅಧಿಕಾರಿಗಳು ಮತ್ತು ರಾಜ್ಯ ಪೊಲೀಸ್ ಗುಪ್ತಚರ ಮುಖ್ಯಸ್ಥರೊಂದಿಗೆ ನಿಯಮಿತ ಪರಿಶೀಲನಾ ಸಭೆಗಳನ್ನು (ಕನಿಷ್ಠ 15 ದಿನಗಳೊಂದಿಗೆ) ನಡೆಸಬೇಕು.
ಸ್ವಯಂ ಘೋಷಿತ ರಕ್ಷಕರು ಎಂದು ಹೇಳಿಕೊಳ್ಳುವ ಗುಂಪುಗಳ ಬಗ್ಗೆ ಪೊಲೀಸರಿಗೆ ಮಾಹಿತಿ ಇರಬೇಕು ಮತ್ತು ಅವರ ಗುಂಪನ್ನು ಒಂದುಗೂಡದಂತೆ ನೋಡಿಕೊಳ್ಳಬೇಕು.
ಯಾವುದೇ ಜಾತಿ ಅಥವಾ ಸಮುದಾಯದ ಆಧಾರದ ಮೇಲೆ ಗುಂಪು ಹಿಂಸಾಚಾರ ಮತ್ತು ಹತ್ಯೆಗಳನ್ನು ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಮನ್ವಯತೆಯಿಂದ ಕೆಲಸ ಮಾಡಬೇಕು. ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಗಸ್ತು ತಿರುಗುವ ಕುರಿತು ಡಿಜಿಪಿ ಅವರು ಎಸ್‌ಪಿಗೆ ಸುತ್ತೋಲೆ ಹೊರಡಿಸಬೇಕು.

ಗುಂಪು ಹಲ್ಲೆಗಳನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೇಡಿಯೋ, ದೂರದರ್ಶನ ಮತ್ತು ಗೃಹ ಇಲಾಖೆ ಮತ್ತು ರಾಜ್ಯ ಪೊಲೀಸರ ಅಧಿಕೃತ ವೆಬ್‌ಸೈಟ್‌ಗಳು ಸೇರಿದಂತೆ ಇತರ ಮಾಧ್ಯಮಗಳಲ್ಲಿ ಪ್ರಸಾರ ಮಾಡಬೇಕು.

ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಪೂರಿತ, ಪ್ರಚೋದನಕಾರಿ ಸಂದೇಶ ಹಾಗೂ ವಿಡಿಯೋಗಳ ಪ್ರಸಾರವನ್ನು ಕೂಡಲೇ ಗಮನಿಸಿ ತಡೆಯುವುದು ಕೇಂದ್ರ ಮತ್ತು ರಾಜ್ಯಗಳ ಕರ್ತವ್ಯವಾಗಿದೆ.
ಐಪಿಸಿ ಸೆಕ್ಷನ್ 153A ಅಡಿಯಲ್ಲಿ ಘಟನೆ ನಡೆದ ತಕ್ಷಣ ಗುಂಪು ಹಲ್ಲೆ ಮಾಡಿದವರ ವಿರುದ್ಧ ಪೊಲೀಸರು ಎಫ್‌ಐಆರ್‌ಗಳನ್ನು ದಾಖಲಿಸಬೇಕು.
ಪರಿಸ್ಥಿತಿಯ ಗಂಭೀರತೆ ಮತ್ತು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಕೇಂದ್ರವು ರಾಜ್ಯಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಬೇಕು.
ಇಷ್ಟೇ ಅಲ್ಲದೇ, ಹಲ್ಲೆ ಅಥವಾ ಗುಂಪು ಹಿಂಸಾಚಾರದ ಘಟನೆ ನಡೆದಿರುವುದು ಸ್ಥಳೀಯ ಪೊಲೀಸರ ಗಮನಕ್ಕೆ ಬಂದರೆ, ಆ ವ್ಯಾಪ್ತಿಯಲ್ಲಿರುವ ಪೊಲೀಸ್ ಠಾಣೆ ತಕ್ಷಣವೇ ಎಫ್‌ಐಆರ್ ದಾಖಲಿಸಬೇಕು.

ಹತ್ಯೆ ಮತ್ತು ಗುಂಪು ಹಿಂಸಾಚಾರದ ಸಂತ್ರಸ್ತರಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರಗಳು ಯೋಜನೆಯನ್ನು ಸಿದ್ಧಪಡಿಸಬೇಕು. ದೈಹಿಕ ಹಲ್ಲೆ , ಮಾನಸಿಕ ಘಾಸಿ, ಉದ್ಯೋಗ ನಷ್ಟ, ಕಾನೂನು ಮತ್ತು ವೈದ್ಯಕೀಯ ವೆಚ್ಚಗಳನ್ನು ಆಯಾಯಾ ಸರ್ಕಾರವೇ ಭರಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ವಿಫಲರಾದ ಪೊಲೀಸ್ (ನೋಡಲ್‌ ಅಧಿಕಾರಿ) ಅಥವಾ ಜಿಲ್ಲಾಧಿಕಾರಿಗಳ ವಿರುದ್ಧ ಕರ್ತವ್ಯ ಲೋಪದ ಮೇಲೆ ಕ್ರಮ ಕೈಗೊಳ್ಳಬೇಕು. ಈ ರೀತಿಯ ಕರ್ತವ್ಯ ಲೋಪವನ್ನು ‘ಉದ್ದೇಶಪೂರ್ವಕ ನಿರ್ಲಕ್ಷ್ಯ’ ಎಂದೇ ಪರಿಗಣಿಸಲಾಗುತ್ತದೆ. ಇದು ಗುಂಪು ಹಲ್ಲೆಯ ಬಗ್ಗೆ ಮಾನ್ಯ ಸುಪ್ರೀಂ ಕೋರ್ಟ್ ನೀಡಿರುವ ಮಾರ್ಗಸೂಚಿಗಳು. ಇದನ್ನು ಯಾವ ರಾಜ್ಯ ಸರಕಾರಗಳು ಪಾಲನೆ ಮಾಡಿದೆ.?

ರಾಜ್ಯದಲ್ಲಿ ಯಾವ ಸರ್ಕಾರ ಬಂದರೂ ಬದಲಾಗದ ಕರಾವಳಿಯ ಪರಿಸ್ಥಿತಿಗೆ ಕಾರಣರು ಯಾರು.? ಕರಾವಳಿಯಲ್ಲಿ ಕಾಂಗ್ರೆಸ್ ಶಾಸಕರಿದ್ದರೂ, ಶಾಸಕರು ಇಲ್ಲದೇ ಇದ್ದರೂ, ಕಾಂಗ್ರೆಸ್ ಸರ್ಕಾರ ಇದ್ದರೂ, ಇಲ್ಲದಿದ್ದರೂ ಮುಗಿಯದ ‘ಕೋಮುಹಿಂಸೆ’ಯ ಹಿಂದಿರುವವರು ಯಾರು.? ಕಾಂಗ್ರೆಸ್ ನಾಯಕರ ಸೈದ್ದಾಂತಿಕ ಬದ್ಧತೆ ಕೊರತೆಯೇ ಕರಾವಳಿಯ ಈ ಸ್ಥಿತಿಗೆ ಕಾರಣ. ಕೋಮುವಾದದ ಆಳ ಅಗಲಗಳನ್ನು ಅರಿಯಲಾಗದ, ಬಿಜೆಪಿಯನ್ನು ಸೋಲಿಸುವುದೇ ಕೋಮುವಾದಕ್ಕೆ ಪರಿಹಾರ ಎಂದು ಭಾವಿಸಿರುವ ಕಾಂಗ್ರೆಸ್ ನಾಯಕರೇ ಕರಾವಳಿ ಕೋಮುವಾದದ ಮೂಲಸಮಸ್ಯೆ. ಆರ್ ಎಸ್ ಎಸ್ ಹಿಡನ್ ಅಜೆಂಡಾ ಹೊಂದಿರುವ ಸಂಘಟನೆಗಳು, ವ್ಯಕ್ತಿಗಳನ್ನು ಪೋಷಿಸುವ ಕರಾವಳಿ ಕಾಂಗ್ರೆಸ್ ನಾಯಕರು, ತಮ್ಮ ಸರ್ಕಾರದ ಅವಧಿಯಲ್ಲೆ ಹಿಂದುತ್ವವನ್ನು ಸದೃಢವಾಗಿ ಬೆಳೆಸುತ್ತಾರೆ. ಇದೇ ಕರಾವಳಿಯ ಬಹಳ ದೊಡ್ಡ ದುರಂತ.!