ಚಾಯ್ಸ್ ಗೋಲ್ಡ್ ಚಿನ್ನದ ಅಂಗಡಿಯಲ್ಲಿ ಕೆಲಸಕ್ಕಿದ್ದ ಅಪ್ರಾಪ್ತ ಯುವಕನೇ ದರೋಡೆಯ ಮಾಸ್ಟರ್ ಮೈಂಡ್.!
ಕ್ಷಣ ಮಾತ್ರದಲ್ಲಿ ಒಂದೂವರೆ ಕೆ.ಜಿ ಚಿನ್ನದ ಗಟ್ಟಿ ದರೋಡೆ ಪ್ರಕರಣ ನಡೆಯುವ ಮೂಲಕ ನಗರದಲ್ಲಿ ಸಂಚಲನ ಮೂಡಿಸಿದ ಪ್ರಕರಣವನ್ನು ಭೇದಿಸುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರದ ಕಾರ್ಸ್ಟ್ರೀಟ್ನಲ್ಲಿ ನಡೆದಿದ್ದ ಚಿನ್ನದ ಗಟ್ಟಿ ದರೋಡೆ ಪ್ರಕರಣದಲ್ಲಿ ಪೊಲೀಸರು ನಾಲ್ವರು ಆರೋಪಿಗಳನ್ನು ಸೆಪ್ಟೆಂಬರ್ 29ರಂದು ಬಂಧಿಸಿದ್ದಾರೆ. ಸೆಪ್ಟೆಂಬರ್ 26ರಂದು ರಾತ್ರಿ ನಡೆದಿದ್ದ ಈ ಘಟನೆಯಲ್ಲಿ ಚಾಯ್ಸ್ ಗೋಲ್ಡ್ ಆಭರಣ ಅಂಗಡಿಯ ಕೆಲಸಗಾರ ಮುಸ್ತಫಾ ಎಂಬಾತನ ಮೇಲೆ ಹಲ್ಲೆ ನಡೆಸಿ ಚಿನ್ನದ ಗಟ್ಟಿಯನ್ನು ಕಸಿದುಕೊಂಡಿದ್ದರು.
ಪೊಲೀಸರ ಪ್ರಕಾರ, ಅಂಗಡಿಯ ಕೆಲಸಗಾರ ಮುಸ್ತಾಫ ಅವರು ಸ್ಕೂಟರ್ (KA-19EZ-2079)ನಲ್ಲಿ ಚಿನ್ನದ ಗಟ್ಟಿಯನ್ನು ಹೊತ್ತೊಯ್ದ ವೇಳೆ ರಾತ್ರಿ ಸುಮಾರು 8.45ಕ್ಕೆ ಕಾರ್ಸ್ಟ್ರೀಟ್ ವೆಂಕಟರಮಣ ದೇವಸ್ಥಾನದ ಎದುರು ಆರೋಪಿಗಳು ದಾಳಿ ನಡೆಸಿದ್ದರು. ಮೊದಲು ಇಬ್ಬರು ಆರೋಪಿ ಸ್ಕೂಟರಿನಲ್ಲಿ ಅಡ್ಡಗಟ್ಟಿ ನಿಲ್ಲಿಸಿದರೆ, ನಂತರ ಕಾರಿನಲ್ಲಿ ಬಂದ ಇತರರು ಮುಸ್ತಾಫ ಅವರನ್ನು ಬಲವಂತವಾಗಿ ಕಾರಿನೊಳಗೆ ಹಾಕಿಕೊಂಡು ಹೋಗಿ, ಹಲ್ಲೆ ನಡೆಸಿ ಮಂಗಳೂರು ಎಕ್ಕೂರು ಪ್ರದೇಶದಲ್ಲಿ ಇಳಿಸಿ ಚಿನ್ನದ ಗಟ್ಟಿಯನ್ನು ದೋಚಿ ಪರಾರಿಯಾಗಿದ್ದರು.

ಈ ಸಂಬಂಧ ಮಂಗಳೂರು ಉತ್ತರ ಠಾಣೆಯಲ್ಲಿ ಅ.ಕ್ರ. 111/2025ರಂತೆ BNS 2023ರ ಕಲಂ 137(2), 310(2) ಅಡಿ ಪ್ರಕರಣ ದಾಖಲಿಸಲಾಗಿತ್ತು. ತನಿಖೆಯ ವೇಳೆ ದರೋಡೆ ಪೂರ್ವಯೋಜಿತ ಸಂಚು ಎಂಬುದು ಬಹಿರಂಗವಾಗಿದೆ.
ಬಂಧಿತರನ್ನು ಉಳ್ಳಾಲ ನಿವಾಸಿಗಳಾದ ಫಾರಿಶ್ (18), ಸಫ್ವಾನ್ (23), ಅರಾಫತ್ ಅಲಿ (18), ಫರಾಝ್ (19) ಎಂದು ಗುರುತಿಸಲಾಗಿದೆ
ಇದಲ್ಲದೆ, ಕಾನೂನು ಸಂಘರ್ಷಕ್ಕೆ ಒಳಗಾದ ಒಬ್ಬ ಬಾಲಕನೂ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ತನಿಖೆಯಿಂದ ತಿಳಿದುಬಂದಂತೆ, ಈ ಬಾಲಕ ಚಾಯ್ಸ್ ಗೋಲ್ಡ್ ಅಂಗಡಿಯಲ್ಲಿ ಕೆಲಸಮಾಡುತ್ತಿದ್ದು, ಮುಸ್ತಾಫ ಅವರು ಚಿನ್ನದ ಗಟ್ಟಿಯನ್ನು ಹೊತ್ತೊಯ್ಯುವ ಮಾಹಿತಿಯನ್ನು ಮುಖ್ಯ ಆರೋಪಿ ಫಾರಿಶ್ಗೆ ಪೂರೈಸಿದ್ದಾನೆ. ಆ ಮಾಹಿತಿ ಆಧರಿಸಿ ಆರೋಪಿಗಳು ಸಂಚು ರೂಪಿಸಿ ದರೋಡೆ ನಡೆಸಿದ್ದಾರೆ.

ಪ್ರಕರಣದಲ್ಲಿ ಬಳಸಿದ ಸುಜುಕಿ ಆಕ್ಸೆಸ್ ಸ್ಕೂಟರ್ (KA-19HT-8545) ವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದರೆ ದರೋಡೆಗೆ ಬಳಸಿದ ಕಾರು ಮತ್ತು ದೋಚಿದ ಚಿನ್ನವನ್ನು ಇನ್ನೂ ವಶಪಡಿಸಿಕೊಳ್ಳಬೇಕಿದೆ.
ಉಪ ಪೊಲೀಸ್ ಆಯುಕ್ತರು (ಅಪರಾಧ ಮತ್ತು ಸಂಚಾರ), ಸಹಾಯಕ ಪೊಲೀಸ್ ಆಯುಕ್ತರು (ಮಧ್ಯ ಉಪವಿಭಾಗ, ಸಿಸಿಬಿ ಘಟಕ) ಇವರ ಮಾರ್ಗದರ್ಶನದಲ್ಲಿ ಮಂಗಳೂರು ಉತ್ತರ ಠಾಣೆ ಪೊಲೀಸರು ಹಾಗೂ ಸಿಸಿಬಿ ಘಟಕದ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿದ್ದರು.
