ಬಂಟ್ವಾಳ: ಅಕ್ರಮ ಗೋಹತ್ಯೆ ಪ್ರಕರಣವನ್ನು ಭೇದಿಸಿದ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು

ಕರಾವಳಿ

ಆರೋಪಿಯ ಮನೆ, ವಧೆ ಮಾಡಿರುವ ಶೇಡ್‌ ನ ಆವರಣ ಪೊಲೀಸರಿಂದ ಜಪ್ತಿ; ಮುಟ್ಟುಗೋಲು ಮಾಡುವ ಬಗ್ಗೆ ಎ.ಸಿ ಅವರಿಗೆ ವರದಿ

ದಿನಾಂಕ 16-11-2025 ರಂದು ಬೆಳಗ್ಗೆ ಬಂಟ್ವಾಳ ತಾಲೂಕು ಅರಳ ಗ್ರಾಮದ ನಿವಾಸಿ ಮೈಯದಿ ಎಂಬವರು, ಮನೆಯ ಆವರಣದಲ್ಲಿರುವ ಶೆಡ್‌ ಬಳಿ ಜಾನುವಾರುಗಳನ್ನು ಕಟ್ಟಿಕೊಂಡು, ವಧೆ ಮಾಡಿ ಮಾಂಸ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣಾ ಸರ್ಕಲ್ ಇನ್ಸ್ ಪೆಕ್ಟರ್ ರವರ ನೇತ್ರತ್ವದ ಪೊಲೀಸರ ತಂಡ ಸ್ಥಳಕ್ಕೆ ದಾಳಿ ನಡೆಸಿದ್ದು, ಆರೋಪಿಯ ಮನೆಯ ಬಳಿಯ ಶೆಡ್‌ ನಲ್ಲಿ ಮೂರು ಮಂದಿ ಸೇರಿ ಅಕ್ರಮವಾಗಿ ದನಗಳನ್ನು ವಧೆ ಮಾಡಿ ಮಾಂಸ ಮಾಡುತ್ತಿದ್ದು, ದಾಳಿ ಸಮಯದಲ್ಲಿ ಇಬ್ಬರು ಪರಾರಿಯಾಗಿದ್ದು, ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿರುತ್ತಾರೆ.

ಓರ್ವನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಈತ ಮಯ್ಯದ್ದಿ ಎಂಬಾತನಾಗಿದ್ದು, ಶೆಡ್‌ ನಲ್ಲಿದ್ದ ಮೂರು ಹಸುಗಳನ್ನು ಮತ್ತು ಒಂದು ಕರುವನ್ನು ರಕ್ಷಿಸಲಾಗಿದ್ದು, ವಧೆ ಮಾಡಿದ ಸುಮಾರು 150 ಕೆ.ಜಿ ದನದ ಮಾಂಸವನ್ನು ವಶ ಪಡಿಸಿಕೊಂಡಿರುತ್ತಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅಕ್ರ 172/2022 ಕಲಂ 4,5,7,12 ಕರ್ನಾಟಕ ಜಾನುವಾರು ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯಿದೆ 2020 ಕಲಂ 11(1)(ಡಿ) ಪ್ರಾಣಿ ಹಿಂಸೆ ನಿಷೇಧ ಕಾಯಿದೆ ಹಾಗೂ ಕಲಂ 303(2)307 ಬಿಎನ್‌ಎಸ್‌ ಕಾಯಿದೆಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಪ್ರಕರಣದ ಸ್ಥಳದಲ್ಲಿ ಬಂಧನಕ್ಕೊಳಗಾದ ಆರೋಪಿ ಮೈಯ್ಯದಿ ಎಂಬಾತನನ್ನು ಮಾನ್ಯ ನ್ಯಾಯಾಲಯ ಹಾಜರುಪಡಿಸಿರುತ್ತಾರೆ. ತಲೆಮರೆಸಿಕೊಂಡ ಆರೋಪಿಗಳ ಪತ್ತೆಕಾರ್ಯ ಪ್ರಗತಿಯಲ್ಲಿದೆ.

ಆರೋಪಿಗಳು ಯಾವುದೇ ಪರವಾನಿಗೆ ಇಲ್ಲದೇ ಮನೆಯ ಆವರಣದ ಶೆಡ್‌ ನಲ್ಲಿ ಅಕ್ರಮ ಕಸಾಯಿಖಾನೆಯನ್ನು ನಿರ್ಮಾಣ ಮಾಡಿಕೊಂಡು, ಮನೆಯಿಂದಲೇ ಅಕ್ರಮ ವಿದ್ಯುತ್‌ ಸಂಪರ್ಕ ಪಡೆದು ಜಾನುವಾರುಗಳ ವಧೆ ನಡೆಸಿರುವುದು ಕಂಡುಬಂದ ಹಿನ್ನೆಲೆಯಲ್ಲಿ, ಆರೋಪಿಯ ಮನೆ ಹಾಗೂ ಶೇಡ್‌ ನ ಆವರಣವನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಜಪ್ತಿ ಮಾಡಿ, ಮಾನ್ಯ ಸಹಾಯಕ ಆಯುಕ್ತರು ಹಾಗೂ ಉಪ-ವಿಭಾಗೀಯ ದಂಡಾಧಿಕಾರಿ ಮಂಗಳೂರು, ಇವರಿಗೆ ಮುಟ್ಟುಗೋಲು ಮಾಡುವ ಬಗ್ಗೆ ವರದಿಯನ್ನು ಸಲ್ಲಿಸಿರುತ್ತಾರೆ.