ಪೊಲೀಸರಿಗೆ ಬ್ಲಾಕ್ಮೇಲ್: ಖಾಸಗಿ ಸುದ್ದಿವಾಹಿನಿಯ ಪತ್ರಕರ್ತ ಅರೆಸ್ಟ್

ರಾಷ್ಟ್ರೀಯ

ಡ್ರಗ್ಸ್ ದಂಧೆ ಶಾಮೀಲಾತಿಯ ಸ್ಟೋರಿ; ಹದಿನೈದು ಲಕ್ಷ ರೂಪಾಯಿ ಡಿಮ್ಯಾಂಡ್

ಮೂವರು ಪೊಲೀಸ್ ಇನ್ಸ್ ಪೆಕ್ಟರ್ ಗಳಿಗೆ ವಾಟ್ಸಾಪ್ ಕರೆ ಮಾಡಿ ತಲಾ 5 ಲಕ್ಷ ರೂಪಾಯಿ ನೀಡುವಂತೆ ಬ್ಲ್ಯಾಕ್ಮೇಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಸುದ್ದಿ ವಾಹಿನಿಯ ಪತ್ರಕರ್ತನೊಬ್ಬನನ್ನು ಬಾಗಲೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪತ್ರಕರ್ತ ಶರತ್ ಶರ್ಮಾ ಕಲಗಾರು ಎಂಬಾತನೇ ಬಂಧಿತ ಆರೋಪಿ. ಬಾಗಲೂರು ಠಾಣೆ ಸಬ್ ಇನ್ಸ್ ಪೆಕ್ಟರ್ ರಮೇಶ್ ಎಂಬುವರ ದೂರಿನನ್ವಯ ಪ್ರಕರಣ ದಾಖಲಿಸಲಾಗಿದೆ.

ಮಹಾರಾಷ್ಟ್ರ ಪೊಲೀಸರು ಬೆಂಗಳೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ ಹಚ್ಚಿ ಕೋಟ್ಯಂತರ ರೂಪಾಯಿ ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಬಾಗಲೂರು ಠಾಣೆ ಇನ್ಸ್ ಪೆಕ್ಟರ್ ಶಬರೀಶ್, ಸಬ್ ಇನ್ಸ್ ಪೆಕ್ಟರ್ ರಮೇಶ್, ಕೊತ್ತನೂರು ಠಾಣೆ ಇನ್ಸ್ ಪೆಕ್ಟರ್ ಚೇತನ್ ಕುಮಾರ್ ಮತ್ತು ಅವಲಹಳ್ಳಿ ಠಾಣೆ ಇನ್ಸ್ ಪೆಕ್ಟರ್ ರಾಮಕೃಷ್ಣ ಅವರಿಗೆ ಡಿಸೆಂಬರ್ 28 ರಂದು ವಾಟ್ಸಾಪ್ ಕರೆ ಮಾಡಿರುವ ಆರೋಪಿ ಡ್ರಗ್ಸ್ ಫ್ಯಾಕ್ಟರಿ ನಡೆಸುವವರ ಜೊತೆ ಶಾಮೀಲಾಗಿ ಕೋಟಿ ಕೋಟಿ ಲಂಚ ತೆಗೆದುಕೊಂಡು ದಂಧೆ ನಡೆಸಲು ಅವಕಾಶ ನೀಡಿದ್ದಾರೆ ಎಂದು ಸ್ಟೋರಿಯೊಂದನ್ನು ಸಿದ್ಧಪಡಿಸಲಾಗಿದೆ. ಅದು ಡಿಸೆಂಬರ್ 29 ರ ಬೆಳಿಗ್ಗೆ 9 ಗಂಟೆಗೆ ಪ್ರಸಾರವಾಗುತ್ತೆ. ಇದು ಪ್ರಸಾರವಾದರೆ ನೀವು ಮೂವರ ಅಮಾನತು ಆಗುತ್ತದೆ. ಆ ಸ್ಟೋರಿ ಪ್ರಸಾರವಾಗಬಾರದೆಂದರೆ ತಲಾ 5 ಲಕ್ಷ ರೂಪಾಯಿ ನೀಡಿ ಎಂದು ಬೇಡಿಕೆ ಇಟ್ಟಿದ್ದ. ಈತನ ಆಡಿಯೋ ಸ್ಕ್ರೀನ್ ರೆಕಾರ್ಡ್ ಮಾಡಿಕೊಂಡಿದ್ದ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ತನಿಖೆ ಕೈಗೆತ್ತಿಕೊಂಡಿದ್ದಾರೆ. ಆರೋಪಿ ಖಾಸಗಿ ವಾಹಿನಿ ಪರ ಮಧ್ಯಸ್ಥಿಕೆ ವಹಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.