ಸತ್ಯ ಬಹಿರಂಗವಾಗುತ್ತೆ ಎಂದು ಹೆದರಿ ಸಿಎಎ ಮೂಲಕ ಹಿಂದೂ-ಮುಸ್ಲಿಂ ಆಟಕ್ಕೆ ಮುಂದಾದ ಕೇಂದ್ರ ಸರ್ಕಾರ.!
ಕೇಂದ್ರದ ನರೇಂದ್ರ ಮೋದಿ ಸರಕಾರದ ಚುನಾವಣಾ ಬಾಂಡ್ ಭ್ರಷ್ಟಾಚಾರ ಮುಚ್ಚಿ ಹಾಕಲು ತರಾತುರಿಯಲ್ಲಿ ಪೌರತ್ವ ಕಾಯಿದೆ ಜಾರಿಗೆ ತಂದಿದೆಯಾ ಅನ್ನುವ ಬಗ್ಗೆ ಇದೀಗ ವ್ಯಾಪಕ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಚುನಾವಣಾ ಬಾಂಡ್ ಗಳ ಖರೀದಿದಾರರು ಮತ್ತು ಫಲಾನುಭವಿ ರಾಜಕೀಯ ಪಕ್ಷಗಳ ವಿವರಗಳನ್ನು ಸಲ್ಲಿಸಲು ಗಡುವು ನೀಡುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದು, ಕೇಂದ್ರದ ನರೇಂದ್ರ ಮೋದಿ ಸರ್ಕಾರಕ್ಕೆ ದೊಡ್ಡ ಹೊಡೆತ ನೀಡಿದೆ. ಏಕೆಂದರೆ ಚುನಾವಣಾ ಬಾಂಡ್ ಭ್ರಷ್ಟಾಚಾರದಲ್ಲಿ ದೊಡ್ಡ ಫಲಾನುಭವಿಯಾಗಿರುವುದು ಬಿಜೆಪಿ ಪಕ್ಷ. ಲೋಕಸಭಾ ಚುನಾವಣೆಗೆ ದಿನಗಣನೆ ಇರುವಾಗಲೇ ಸುಪ್ರೀಂ ಕೋರ್ಟ್ ನ ಮಹತ್ವದ ತೀರ್ಮಾನಕ್ಕೆ ಕೇಂದ್ರದ ಮೋದಿ ಸರಕಾರ ಭಯಪಟ್ಟಿರುವಂತೆ ಕಾಣುತ್ತಿದೆ. ಜನರು ಈ ಬಗ್ಗೆ ಗಲ್ಲಿ ಗಲ್ಲಿಗಳಲ್ಲಿ ಚರ್ಚಿಸಲು ಆರಂಭಿಸಿರುವಂತೆ ಕೇಂದ್ರದ ಗೃಹ ಇಲಾಖೆ ಏಕಾಏಕಿ ಸಿಎಎ ಜಾರಿಗೊಳಿಸಿ ಆದೇಶ ನೀಡಿದೆ.
ತನ್ನ ಹುಳುಕುಗಳು ಹೊರಬಂದಾಗ ಏನಾದರೊಂದು ಕಸರತ್ತು ನಡೆಸುವಲ್ಲಿ ನಿಸ್ಸೀಮರಾಗಿರುವ ಕೇಂದ್ರ ಸರ್ಕಾರ ಪುಲ್ವಾಮಾ ದಾಳಿ ಯಿಂದ ಹಿಡಿದು ಅನೇಕ ಘಟನೆಗಳು ಕೇಂದ್ರ ಸರ್ಕಾರಕ್ಕೆ ಸಂಕಷ್ಟ ಬಂದಾಗ ಕೈ ಹಿಡಿದಿದೆ. ಇದೀಗ ಚುನಾವಣಾ ಬಾಂಡ್ ವಿಚಾರ ರಾಷ್ಟ್ರವ್ಯಾಪಿಯಾಗಿ ಮೋದಿ ಸರ್ಕಾರಕ್ಕೆ ದೊಡ್ಡ ಕಪ್ಪು ಚುಕ್ಕೆ ತಂದುಕೊಡುವಾಗಲೇ ಸಿಎಎ ಜಾರಿ ಮೂಲಕ ಪ್ರತಿತಂತ್ರ ಹೂಡಿ ತಾವು ಸೇಫಾಗಲು ಪ್ರಯತ್ನಿಸುತ್ತಿದೆಯಾ ಅನ್ನುವ ಅನುಮಾನ ಇದೀಗ ಕಾದಿದೆ.

ಜನರು ತಮ್ಮ ಸರಕಾರದ ಹುಳುಕುಗಳ ಬಗ್ಗೆ ಚರ್ಚಿಸಬಾರದು, ಹಿಂದೂ-ಮುಸ್ಲಿಂ ವಿಚಾರ ಮುನ್ನೆಲೆಗೆ ಬರಬೇಕು ಇದುವೇ ಕೇಂದ್ರ ಸರಕಾರದ ಹಿಡನ್ ಅಜೆಂಡಾ ಆಗಿದ್ದು ಇದೀಗ ಸಿಎಎ ಜಾರಿ ಮೂಲಕ ಮತ್ತೆ ಹಿಂದೂ-ಮುಸ್ಲಿಂ ಚರ್ಚೆ ಮುನ್ನೆಲೆಗೆ ಬರುತ್ತಿರುವುದರಿಂದ ದೊಡ್ಡ ಬ್ರಹ್ಮಾಂಡ ಗಾತ್ರದ ಭ್ರಷ್ಟಾಚಾರ ಪ್ರಕರಣದಿಂದ ಕೇಂದ್ರ ಸರಕಾರ ಬಚಾವ್ ಆಗುವ ಸಾಧ್ಯತೆ ನಿಚ್ಚಳವಾಗಿದೆ. ಬಹುತೇಕ ಮೀಡಿಯಾಗಳು ಹಿಂದೂ-ಮುಸ್ಲಿಂ ಸುತ್ತ ಚರ್ಚೆ ನಡೆಸಲು ಆರಂಭಿಸಿರುವುದರಿಂದ ಚುನಾವಣೆಯಲ್ಲಿ ಲಾಭದ ಜೊತೆಗೆ ದೊಡ್ಡ ಸಂಕಷ್ಟದಿಂದ ಪಾರಾಗುವ ಪ್ಲ್ಯಾನ್ ಸಜ್ಜುಗೊಳಿಸಿರುವಂತೆ ಕಾಣುತ್ತಿದೆ.
ಚುನಾವಣಾ ಬಾಂಡ್ ಮೂಲಕ ಬಿಜೆಪಿ ಪಕ್ಷ ಸಾವಿರಾರು ಕೋಟಿ ರೂಪಾಯಿ ಹಣವನ್ನು ಕಪ್ಪವಾಗಿ ಸ್ವೀಕರಿಸಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಬಹಿರಂಗಪಡಿಸುವಂತೆ ಸೂಚಿಸಿದೆ.
ಒಂದು ವೇಳೆ ಸತ್ಯ ಬಹಿರಂಗಗೊಂಡರೆ ಬಿಜೆಪಿ ಮುಖ ಮುಚ್ಚಿಕೊಳ್ಳಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಬಹುದು. ಇಡಿ, ಐಟಿ, ಸಿಬಿಐ ಮುಖಾಂತರ ದಾಳಿ ನಡೆಸಿ ತಾವು ಭ್ರಷ್ಟಾಚಾರ ವಿರೋಧಿಗಳೆಂದು, ಸಾಚಾ ಗಳೆಂದು ಹೊರಜಗತ್ತಿಗೆ ತೋರ್ಪಡಿಸುವ ಪ್ರಯತ್ನ ಕೇಂದ್ರ ದ ಮೋದಿ ಸರಕಾರ ಮಾಡಿತ್ತು. ಆದರೆ ಚುನಾವಣಾ ಬಾಂಡ್ ಸತ್ಯ ಹೊರಬಂದರೆ ತಾವು ಯಾವ ಕಂಪನಿಗಳು, ಸಂಸ್ಥೆಯ ವಿರುದ್ಧ ದಾಳಿ ಮಾಡಿತ್ತೋ ಅವರಿಂದಲೇ ಕೋಟ್ಯಂತರ ರೂಪಾಯಿ ಕಪ್ಪ ಪಡೆದಿದೆ. ಆ ಮೂಲಕ ಲೀಗಲ್ ಆಗಿ ಭ್ರಷ್ಟಾಚಾರ ನಡೆಸಿದ ಕುಖ್ಯಾತಿ ಕೇಂದ್ರದ ಮೋದಿ ಸರ್ಕಾರದ್ದು. ನಾ ಖಾವೂಂಗ, ಖಾನೆದೂಂಗ ಎಂದು ಹೇಳಿ ಸರಕಾರದ ಸಂಸ್ಥೆಗಳನ್ನೇ ಬಳಸಿ ತಮ್ಮ ಪಕ್ಷಕ್ಕೆ ಕಪ್ಪ ಕಾಣಿಕೆ ನೀಡಲು ಬಳಸಿಕೊಂಡಿರುವುದು ಸ್ವತಂತ್ರ ಭಾರತದಲ್ಲಿ ಅತ್ಯಂತ ದೊಡ್ಡ ಭ್ರಷ್ಟಾಚಾರ ಇದಾಗಿದೆ. ಇದೀಗ ಮರೆಮಾಚಿ ಹಿಂದೂ-ಮುಸ್ಲಿಂ ಆಟಕ್ಕೆ ಮುಂದಾಗಿರುವುದು ಭ್ರಷ್ಟಾಚಾರ ಪ್ರಕರಣಗಳನ್ನು ಯಾವ ರೀತಿ ಅಧಿಕಾರಸ್ಥರು ಹೂತು ಹಾಕುತ್ತಾರೆ ಎಂಬುದಕ್ಕೆ ಇದೊಂದು ಉತ್ತಮ ಸಾಕ್ಷಿಯಾಗಿದೆ.
ಚುನಾವಣಾ ಬಾಂಡ್ ಗಳ ವಿವರಗಳನ್ನು ಸಲ್ಲಿಸಲು ಎಸ್ ಬಿ ಐ ನಾಲ್ಕೂವರೆ ತಿಂಗಳುಗಳ ಕಾಲಾವಕಾಶವನ್ನು ಕೇಳಿರುವುದು ಕೇಂದ್ರದ ಮೋದಿ ಸರಕಾರವು ಪ್ರಕರಣ ಮುಚ್ಚಿ ಹಾಕುವ ಕೃತ್ಯವೆಂದು ವಿರೋಧ ಪಕ್ಷ ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. ಒಂದು ದಿನದ ಕೆಲಸಕ್ಕೆ ನಾಲ್ಕೂವರೆ ತಿಂಗಳುಗಳ ಕಾಲಾವಕಾಶವನ್ನು ಎಸ್ ಬಿಐ ಕೇಳಿರುವುದು ನಗೆಪಾಟಲಿಗೀಡಾಗುವ ಸಂಗತಿ ಎಂದು ಪ್ರತಿಪಕ್ಷಗಳು ಬಣ್ಣಿಸಿದೆ.
ಭ್ರಷ್ಟಾಚಾರವನ್ನು ಈ ರೀತಿಯೂ ಮಾಡಬಹುದು, ಭ್ರಷ್ಟಾಚಾರದಲ್ಲಿ ಭಾರತ ವಿಶ್ವ ಗುರು ವಾಗಿದೆ ಎಂದು ಕೇಂದ್ರದ ಮೋದಿ ಸರ್ಕಾರವನ್ನು ವಿಶ್ಲೇಷಕರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
