ನಾಳೆ ಭಾರತ ಬಂದ್‌, ಕೇಂದ್ರ ಸರ್ಕಾರದ ‘ಕಾರ್ಮಿಕ ವಿರೋಧಿ’ ನೀತಿಗಳ ವಿರುದ್ಧ ಪ್ರತಿಭಟನೆ. ದೇಶಾದ್ಯಂತ 25 ಕೋಟಿಗೂ ಹೆಚ್ಚು ಕಾರ್ಮಿಕರು ಭಾಗಿ ಸಾಧ್ಯತೆ

ರಾಷ್ಟ್ರೀಯ

ದೇಶಾದ್ಯಂತ 25 ಕೋಟಿಗೂ ಹೆಚ್ಚು ಕಾರ್ಮಿಕರು ಭಾರತ ನಾಳೆ ಬಂದ್‌ಗೆ ಸಜ್ಜಾಗಿದ್ದು, ಕೇಂದ್ರ ಸರ್ಕಾರದ ‘ಕಾರ್ಮಿಕ ವಿರೋಧಿ’ ನೀತಿಗಳ ವಿರುದ್ಧ ತಮ್ಮ ಪ್ರತಿಭಟನೆಯನ್ನು ದಾಖಲಿಸಲಿದ್ದಾರೆ. ಬ್ಯಾಂಕಿಂಗ್, ವಿಮೆ, ಡಾಕ್ ಸೇವೆಗಳು, ಕಲ್ಲಿದ್ದಲು ಗಣಿಗಾರಿಕೆ, ಹೆದ್ದಾರಿ ಮತ್ತು ನಿರ್ಮಾಣ ಕ್ಷೇತ್ರಗಳು ಸೇರಿದಂತೆ ಹಲವು ಪ್ರಮುಖ ಸೇವೆಗಳು ಸ್ಥಗಿತಗೊಳ್ಳುವ ಸಾಧ್ಯತೆಯಿದ್ದು, ದೇಶದ ಜನಜೀವನ ಅಸ್ತವ್ಯಸ್ತಗೊಳ್ಳುವ ನಿರೀಕ್ಷೆಯಿದೆ. ಕೇಂದ್ರದ 10 ಪ್ರಮುಖ ಕಾರ್ಮಿಕ ಸಂಘಟನೆಗಳ ಒಕ್ಕೂಟ ಮತ್ತು ಅದರ ಸಹಯೋಗಿಗಳು ಈ ಬಂದ್‌ಗೆ ಕರೆ ನೀಡಿವೆ. ಸರ್ಕಾರದ ‘ಕಾರ್ಮಿಕ ವಿರೋಧಿ, ರೈತ ವಿರೋಧಿ, ರಾಷ್ಟ್ರವಿರೋಧಿ ಮತ್ತು ಕಾರ್ಪೊರೇಟ್ ಪರ’ ನೀತಿಗಳೇ ಈ ಬೃಹತ್ ಪ್ರತಿಭಟನೆಗೆ ಕಾರಣ.

ನಾವು ದೇಶವ್ಯಾಪಿ ಮುಷ್ಕರವನ್ನು ಯಶಸ್ವಿಗೊಳಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. 25 ಕೋಟಿಗೂ ಹೆಚ್ಚು ಕಾರ್ಮಿಕರು ಈ ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ. ರೈತರು ಮತ್ತು ಗ್ರಾಮೀಣ ಕಾರ್ಮಿಕರು ಕೂಡ ದೇಶಾದ್ಯಂತ ಪ್ರತಿಭಟನೆಗೆ ಸಾಥ್ ನೀಡಲಿದ್ದಾರೆ” ಎಂದು ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ಅಮರ್‌ಜೀತ್ ಕೌರ್ ತಿಳಿಸಿದ್ದಾರೆ.

ಕಾರ್ಮಿಕ ಸಂಘಗಳು ಸರ್ಕಾರದ ನೀತಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ. ಕಳೆದ ವರ್ಷವೇ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾಗೆ 17 ಅಂಶಗಳ ಬೇಡಿಕೆಗಳ ಪಟ್ಟಿ ಸಲ್ಲಿಸಿದ್ದರೂ, ಸರ್ಕಾರ ಕಳೆದ 10 ವರ್ಷಗಳಿಂದ ವಾರ್ಷಿಕ ಕಾರ್ಮಿಕ ಸಮ್ಮೇಳನವನ್ನು ನಡೆಸಿಲ್ಲ ಎಂದು ಒಕ್ಕೂಟ ಆಕ್ಷೇಪಿಸಿದೆ. ನಾಲ್ಕು ಕಾರ್ಮಿಕ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ಸರ್ಕಾರವು ಕಾರ್ಮಿಕರ ಒಗ್ಗಟ್ಟಿನ ಶಕ್ತಿಯನ್ನು ದುರ್ಬಲಗೊಳಿಸುತ್ತಿದೆ. ಇದರಿಂದ ಸಾಮೂಹಿಕ ಚರ್ಚೆಯ ಹಕ್ಕು, ಮುಷ್ಕರದ ಹಕ್ಕು ಕಸಿದುಕೊಳ್ಳಲಾಗುತ್ತಿದೆ ಮತ್ತು ‘ವ್ಯಾಪಾರ ಸೌಲಭ್ಯ’ದ ಹೆಸರಿನಲ್ಲಿ ಉದ್ಯೋಗದಾತರಿಗೆ ಮಣೆಹಾಕಲಾಗುತ್ತಿದೆ” ಎಂದು ಒಕ್ಕೂಟ ಆರೋಪಿಸಿದೆ.

ದೇಶದ 65% ಜನಸಂಖ್ಯೆ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೂ, 20-25 ವರ್ಷ ವಯಸ್ಸಿನವರಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಇಂತಹ ಸಮಯದಲ್ಲಿ, ಶಾಶ್ವತ ಉದ್ಯೋಗಗಳನ್ನು ಸೃಷ್ಟಿಸದೆ, ರೈಲ್ವೆ, ಎನ್​ಎಮ್​ಡಿಸಿ, ಉಕ್ಕು ಕ್ಷೇತ್ರ ಮತ್ತು ಶಿಕ್ಷಣದಲ್ಲಿ ನಿವೃತ್ತರನ್ನು ಮರುನೇಮಕ ಮಾಡುವ ಸರ್ಕಾರದ ನೀತಿಯನ್ನು ಕಾರ್ಮಿಕ ಸಂಘಗಳು ತೀವ್ರವಾಗಿ ವಿರೋಧಿಸಿವೆ. ಇಂತಹ ನೀತಿಗಳು ದೇಶದ ಬೆಳವಣಿಗೆಗೆ ಹಾನಿಕಾರಕ ಎಂದು ಒಕ್ಕೂಟ ಎಚ್ಚರಿಸಿದೆ. ಈ ಮುಷ್ಕರಕ್ಕೆ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕೃಷಿ ಕಾರ್ಮಿಕರ ಒಕ್ಕೂಟಗಳ ಜಂಟಿ ವೇದಿಕೆಯು ಸಂಪೂರ್ಣ ಬೆಂಬಲ ಘೋಷಿಸಿದ್ದು, ಗ್ರಾಮೀಣ ಭಾರತದಲ್ಲಿ ಭಾರೀ ಪ್ರತಿಭಟನೆಗೆ ಸಿದ್ಧತೆ ನಡೆಸಿದೆ.
ನಾಳೆ ನಡೆಯಲಿರುವ ಈ ಬೃಹತ್ ಬಂದ್‌ನಿಂದ ದೇಶದಾದ್ಯಂತ ಸೇವೆಗಳ ಮೇಲೆ ವ್ಯಾಪಕ ಪರಿಣಾಮ ಬೀರುವ ಸಾಧ್ಯತೆಯಿದೆ.