ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಅಪೂರ್ಣ ಕಾಮಗಾರಿ ಅಪಘಾತಕ್ಕೆ ಕಾರಣ: 25 ಅಪಘಾತ ವಲಯ : ಎಡಿಜಿಪಿ.ಅಲೋಕ್ ಕುಮಾರ್

ರಾಜ್ಯ

ಮೈಸೂರು-ಬೆಂಗಳೂರು ಹೆದ್ದಾರಿ ಕಾಮಗಾರಿ ಅಪೂರ್ಣವಾಗಿದೆ, ಹೆದ್ದಾರಿಯಲ್ಲಿ ಉಂಟಾಗುವ ಅಪಘಾತ, ಸಾವು ನೋವುಗಳನ್ನು ತಡೆಯಲೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡಲೇ ಅಪೂರ್ಣ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.ಹೆದ್ದಾರಿಯಲ್ಲಿ ಸುಮಾರು20-25 ಕಡೆಗಳಲ್ಲಿ ಅಪಘಾತ ವಲಯಗಳಿವೆ.ಎಲ್ಲ ಕಡೆಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ.ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದರು.

ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಹಲವಾರು ಕಾಮಗಾರಿಗಳು ಬಾಕಿ ಉಳಿದಿವೆ. ಸಿಸಿ ಕ್ಯಾಮರಾಗಳ ಅಳವಡಿಕೆ ಬಾಕಿ ಇದೆ. ಈಗಾಗಲೇ ಹೆದ್ದಾರಿ ಉದ್ಘಾಟನೆ ಆಗಿದೆ. ಬಾಕಿ ಕಾಮಗಾರಿಗಳಿಗೆ ಹೆಚ್ಚುವರಿ ಅನುದಾನ ತಂದು ಕೆಲಸ ಮಾಡಿಸುವುದು ಎನ್‍ಎಚ್‍ಎಐ ಅಧಿಕಾರಿಗಳ ಕೆಲಸ.ಸರ್ಕಾರದ ನಿಯಮಗಳ ಪ್ರಕಾರ ಪ್ರಸ್ತಾವನೆ, ಟೆಂಡರ್ ಮಾಡಿ ಕೆಲಸ ಮಾಡಿಸಬೇಕಿದೆ.   ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಪೊಲೀಸರನ್ನು ಕೇಳಿ ಕಾಮಗಾರಿ ಮಾಡಿಲ್ಲ. ಸಮಸ್ಯೆ ಆದಾಗ ಸರಿ ಮಾಡಿ ಅಂತ ನಮ್ಮನ್ನು ಕರೆಯುತ್ತಾರೆ ಎಂದರು.

ಬೆಂಗಳೂರಿನಿಂದ ಮೈಸೂರುವರೆಗಿನ 118 ಕಿಮೀ ವ್ಯಾಪ್ತಿಯಲ್ಲಿ 20ರಿಂದ 25 ಅಪಘಾತ ಸ್ಥಳಗಳನ್ನು ಗಮನಿಸಿದ್ದೇನೆ. NHAI ಪ್ರಾಯೋಗಿಕ ಆಧಾರದ ಮೇಲೆ ಸ್ವಯಂಚಾಲಿತ  ನಂಬರ್ ಪ್ಲೇಟ್ ಗುರುತು ಹಚ್ಚುವ  ಕ್ಯಾಮೆರಾವನ್ನು ಸ್ಥಾಪಿಸಿದೆ ಅದು ಸಾಕಾಗುವುದಿಲ್ಲ. ಅಪಘಾತಗಳನ್ನು ತಡೆಗಟ್ಟಲು ಅವರು ಎಲ್ಲಾ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದರು.

ಇತ್ತೀಚೆಗೆ ಮೂರು ದಿನಗಳ ಕಾಲ ಎಕ್ಸ್‌ಪ್ರೆಸ್‌ವೇ ಪರಿಶೀಲಿಸಿದ ತಜ್ಞರ ತಂಡವು ಸಮಸ್ಯೆಗಳ ಬಗ್ಗೆ ವೀಕ್ಷಣೆಗ ಮಾಡಿದ್ದು, ಶೀಘ್ರವೇ ವರದಿ ಸಲ್ಲಿಸಲಿದೆ. ವರದಿ ಆಧರಿಸಿ ಎನ್ ಎಚ್ ಎಐ ಕಾಮಗಾರಿ ಕೈಗೆತ್ತಿಕೊಳ್ಳಲಿದೆ ಎಂದು ಎಡಿಜಿಪಿ ತಿಳಿಸಿದ್ದಾರೆ.ಒಂದು ವೇಳೆ ಅವರು  ಅವಶ್ಯಕತೆ ಈಡೇರಿಸಲು ವಿಫಲವಾದರೆ ಅಥವಾ ದೊಡ್ಡ ಅಪಘಾತ ಸಂಭವಿಸಿದಲ್ಲಿ ನಿರ್ಲಕ್ಷ್ಯದ ಅಡಿಯಲ್ಲಿ ಅವರನ್ನು ಬಂಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.