ಮೇಲ್ಮನೆ ಸ್ಥಾನಕ್ಕೆ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್ ರವರ ಹೆಸರು ಚಾಲ್ತಿಯಲ್ಲಿ.!

ಕರಾವಳಿ

ಕೋಟ ಶ್ರೀನಿವಾಸ ಪೂಜಾರಿಯವರಿಂದ ತೆರವಾಗುವ ಮೇಲ್ಮನೆ ಸ್ಥಾನಕ್ಕೆ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್ ರವರ ಹೆಸರು ಕೇಳಿಬರುತ್ತಿದೆ. ಸದ್ಯದಲ್ಲೇ ವಿಧಾನಸಭೆಯ ಮೂಲಕ ವಿಧಾನಪರಿಷತ್ತಿಗೆ ಸದಸ್ಯರನ್ನು ಚುನಾಯಿಸಲಾಗುತ್ತದೆ. ಇದರ ಮೂಲಕ ಮೇಲ್ಮನೆ ಪ್ರವೇಶಿಸುವುದಕ್ಕೆ ಬಿಜೆಪಿಯಲ್ಲಿ ಪ್ರಯತ್ನ ಪ್ರಾರಂಭವಾಗಿದ್ದು, ನಳಿನ್‌ ಕುಮಾರ್‌ ಅವರಿಗೆ ಪರಿಷತ್‌ ಸ್ಥಾನ ಕಲ್ಪಿಸಬೇಕೆಂಬ ಚರ್ಚೆ ಪ್ರಾರಂಭವಾಗಿದೆ.

ಲೋಕಸಭಾ ಚುನಾವಣೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿಯವರು ಉಡುಪಿ- ಚಿಕ್ಕಮಗಳೂರಿನಿಂದ ಗೆದ್ದರೆ ಪರಿಷತ್ತಿನಲ್ಲಿ ಅವರ ಸ್ಥಾನ ತೆರವಾಗುತ್ತದೆ. ಆ ಸ್ಥಾನಕ್ಕೆ ನಳಿನ್‌ ಅವರನ್ನು ಆಯ್ಕೆ ಮಾಡಬಹುದು ಎನ್ನಲಾಗುತ್ತಿದೆ. ಸದ್ಯದ ಲೆಕ್ಕಾಚಾರದ ಪ್ರಕಾರ ಬಿಜೆಪಿಗೆ ಈ ಚುನಾವಣೆಯಲ್ಲಿ ಮೂರು ಸ್ಥಾನ ಗಳು ಲಭಿಸಲಿವೆ. ಇದರ ಮೇಲೆ ಘಟಾನುಘಟಿ ನಾಯಕರು ಕಣ್ಣಿರಿಸಿದ್ದು, ಕರಾವಳಿ ಭಾಗದ ಶಾಸಕರು ಹಾಗೂ ಸಂಘ ಪರಿವಾರದ ಕೆಲವು ಹಿರಿಯರು ನಳಿನ್‌ ಪರ ವಾದ ಮಂಡಿಸಿದ್ದಾರೆ. ಇದರ ಜತೆಗೆ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೆಸರು ಕೂಡ ಪ್ರಸ್ತಾವವಾಗುತ್ತಿದೆ.

ನಳಿನ್‌ ಪರ ಬಿಜೆಪಿ ನಾಯಕರು ಕೆಲವು ಪ್ರಬಲ ಕಾರಣಗಳನ್ನೇ ನೀಡಿದ್ದಾರೆ. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಅಧ್ಯಕ್ಷರಾದ ನಳಿನ್‌ ಸರಕಾರದ ವಿರುದ್ಧದ ಆರೋಪದ ಮಧ್ಯೆಯೂ ಸಂಘಟನಾತ್ಮಕವಾಗಿ ಉತ್ತಮ ಕೆಲಸ ಮಾಡಿದ್ದಾರೆ. ಪಕ್ಷದ ಶಿಸ್ತಿನ ಗೆರೆ ದಾಟಿಲ್ಲ. ಲೋಕಸಭಾ ಚುನಾವಣೆಗೆ ಬದಲಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತೇವೆ ಎಂದಾಗಲೂ ವಿರೋಧ ವ್ಯಕ್ತಪಡಿಸದೆ ಪಕ್ಷದ ಜತೆಗೆ ನಿಂತರು. ಹೀಗಾಗಿ ಅವರಿಗೆ ಪಕ್ಷದ ಸಹಜ ನ್ಯಾಯದ ಪ್ರಕಾರವೇ ಬದಲಿ ವ್ಯವಸ್ಥೆ ಕಲ್ಪಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ. ಇದಕ್ಕೆ ಪಕ್ಷದ ಎಲ್ಲ ಬಣಗಳು ಒಪ್ಪುವ ಸಾಧ್ಯತೆ ಹೆಚ್ಚಿದೆ. ಇದೆಲ್ಲದರ ಮಧ್ಯೆ ಅವರಿಗೆ ರಾಜ್ಯಸಭಾ ಸದಸ್ಯತ್ವ ನೀಡಬೇಕೆಂಬ ವಾದವೂ ಇದೆ. ಈ ಮಧ್ಯೆ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿಯವರಿಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದ್ದು, ಮೇಲ್ಮನೆ ಸ್ಪರ್ಧೆಯಲ್ಲಿ ಅವರ ಹೆಸರು ಕೂಡ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.