ಕಾಂಗ್ರೆಸ್ ಸರಕಾರ ಪರಿಸ್ಥಿತಿ ಕೈ ಮೀರುವ ಮುಂಚಿತವಾಗಿ ಎಚ್ಚೆತ್ತುಕೊಳ್ಳಲಿ: ಮುನೀರ್ ಕಾಟಿಪಳ್ಳ
“ಮಸೀದಿಗಳ ಮುಂದೆ ಹನುಮಾನ್ ಚಾಲೀಸು ಪಠಣ ಮಾಡುವುದು ಖಂಡಿತಾ, ರಸ್ತೆ ಬದಿ ನಮಾಜು ಮಾಡಿದರೆ (ಮುಸ್ಲಿಮರನ್ನು ಮರ್ದಿಸಲು) ಇನ್ನು ಮುಂದೆ ನಮ್ಮ ಕೈಯಲ್ಲಿ ಧ್ವಜ ಅಲ್ಲ, ದಂಡ ಇರುತ್ತದೆ, ಎಚ್ಚರಿಕೆ…” ಎಂದು ಮಂಗಳೂರಿನ ಹೃದಯ ಭಾಗದಲ್ಲಿ ಜನರನ್ನು ಗುಂಪು ಸೇರಿಸಿ ಮುಸ್ಲಿಂ ಸಮುದಾಯಕ್ಕೆ ಬಹಿರಂಗ ಬೆದರಿಕೆ ಹಾಕಿದ ಬಜರಂಗ ದಳದ ಪುನೀತ್ ಅತ್ತಾವರ ಮೇಲೆ ಕೇಸು ದಾಖಲಿಸಲು, ಬಂಧಿಸಲು ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗರ್ ವಾಲ್ ರಿಗೆ ಯಾರಾದರು ಮನವಿ ನೀಡಬೇಕೆ ? ಗೃಹ ಸಚಿವ ಪತಮೇಶ್ವರ ರಿಗೆ ಈ ಕುರಿತು ಇನ್ನೂ ಮಾಹಿತಿ ತಲುಪಲಿಲ್ಲವೆ ?
ಮಸೀದಿ ಮುಂದೆ ಹನುಮಾನ್ ಚಾಲೀಸು ಪಠಣ ಮಾಡುತ್ತೇವೆ, ಮುಸ್ಲಿಮರ ವಿರುದ್ದ ದಂಡ ಎತ್ತಿಕೊಳ್ಳುತ್ತೇವೆ ಎಂಬುದು ಕೋಮು ಗಲಭೆ ಸೃಷ್ಟಿಗೆ ಕುಮ್ಮಕ್ಕು, ಸಂಚು ಅಲ್ಲವೆ, ಗಂಭೀರ ಕ್ರಿಮಿನಲ್ ಒಳಸಂಚು ಇದರ ಹಿಂದೆ ಅಡಗಿಲ್ಲವೆ ? ಇದನ್ನೆಲ್ಲ ಪೊಲೀಸ್ ಇಲಾಖೆಗೆ ಮನವರಿಕೆ ಮಾಡಿಕೊಡಲು ಪೊಲೀಸ್ ಕಮೀಷನರ್ ಕಚೇರಿಗೆ ನಿಯೋಗ ಕಟ್ಟಿಕೊಂಡು ಹೋಗಲೇ ಬೇಕೆ ? ಕರಾವಳಿಯ ಕೋಮುವಾದಿ ಶಕ್ತಿಗಳ ಎದುರಾಗಿ ಈ ಸರಕಾರ ದೃಢವಾಗಿ ನಿಲ್ಲಲು ಇನ್ನೆಷ್ಟು ಕಾಲ ಬೇಕು. ಮತಾಂಧ ಶಕ್ತಿಗಳನ್ನು ಹದ್ದುಬಸ್ತಿನಲ್ಲಿಡಬಲ್ಲ ಐಪಿಎಸ್ ಅಧಿಕಾರಿಗಳನ್ನು ಮಂಗಳೂರಿಗೆ ಕಳುಹಿಸಲು ಸರಕಾರಕ್ಕೆ ಯಾರು ಅಡ್ಡಿ ?
ಮಂಗಳೂರು ಪೊಲೀಸ್ ಕಮೀಷನರ್ ಅವರೆ, ತಕ್ಷಣವೆ ಸೂಕ್ತ ಸೆಕ್ಷನ್ ಗಳಡಿ ಮೊಕದ್ದಮೆ ಹೂಡಿ ಕೋಮುಗಲಭೆಗೆ ಬಹಿರಂಗ ಪ್ರಚೋದನೆ ನೀಡುತ್ತಿರುವ ಪುನೀತ್ ಅತ್ತಾವರ, ಶರಣ್ ಪಂಪ್ ವೆಲ್ ರನ್ನು ಬಂಧಿಸಿ. ಕಾಂಗ್ರೆಸ್ ಸರಕಾರ ಪರಿಸ್ಥಿತಿ ಕೈ ಮೀರುವ ಮುಂಚಿತವಾಗಿ ಎಚ್ಚೆತ್ತುಕೊಳ್ಳಲಿ.
