ಸರ್ಕಾರಿ ಅಧಿಕಾರಿಗಳ ಅಂಧಾ ದರ್ಬಾರ್ ಗೆ ಕೊನೆಯಿಲ್ಲವೇ.?
ಮಂಗಳೂರು: ದ.ಕ.ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ-ನಿರ್ದೇಶಕರ ಕಛೇರಿಯಲ್ಲಿನ ಅಧಿಕಾರಿಗಳಿಗೆ, ಸಿಬ್ಬಂದಿಗಳ ಆಟಕ್ಕೆ ಅಂಕುಶ ಹಾಕೋರಿಲ್ಲವೇ.? ಎಂದು ಜನ ಪ್ರಶ್ನಿಸುತ್ತಿದ್ದಾರೆ. ಸರ್ಕಾರಿ ಕಛೇರಿಯಲ್ಲೇ ಭರ್ಜರಿ ಬಾಡೂಟ ಏರ್ಪಡಿಸಿ ಬಳಿಕ ಸರ್ಕಾರಿ ವಾಹನದಲ್ಲೇ ಅಧಿಕಾರಿಗಳು, ಸಿಬ್ಬಂದಿಗಳು ಕರ್ತವ್ಯಕ್ಕೆ ಗೈರುಹಾಜರಾಗಿ ಅಡ್ಯಾರ್ ಫಾಲ್ಸ್ ಗೆ ಜಾಲಿ ಟ್ರಿಪ್ ಹೋಗಿರುವುದು ನಾಗರಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಇಲ್ಲಿನ ಉಪನಿರ್ದೇಶಕಿ, ಮ್ಯಾನೇಜರ್ ವಿರುದ್ಧ ಇದೇ ಮೊದಲಲ್ಲ ಸಾರ್ವಜನಿಕ ಆರೋಪಗಳು ಪದೇ ಪದೇ ಕೇಳಿಬರುತ್ತಿವೆ. ಜಿಲ್ಲಾ ವ್ಯಾಪ್ತಿಯಲ್ಲಿರುವ ವಿದ್ಯಾರ್ಥಿನಿಲಯಗಳಲ್ಲಿನ ವಿದ್ಯಾರ್ಥಿಗಳಿಗೆ ಕಡಿಮೆ ಪ್ರಮಾಣದಲ್ಲಿ ಆಹಾರ ನೀಡುವುದು, ಅವ್ಯವಸ್ಥೆ ಸರಿಪಡಿಸದೇ ಇರುವುದು, ಮೂಲಭೂತ ಸೌಕರ್ಯಗಳ ಬಗ್ಗೆ ಬೇಜವಾಬ್ದಾರಿ ಸೇರಿದಂತೆ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡದೇ ನಿರ್ಲಕ್ಷ್ಯ ತೋರುವುದು ಮೊದಲಾದ ಗಂಭೀರ ಆರೋಪಗಳು ವ್ಯಕ್ತವಾಗಿವೆ.

ಸಾರ್ವಜನಿಕರನ್ನು, ಕೆಳಹಂತದ ಸಿಬ್ಬಂದಿಗಳನ್ನು ಉಪನಿರ್ದೇಶಕಿ ಮತ್ತು ಕಛೇರಿಯ ಇತರ ಅಧಿಕಾರಿಗಳು ಕಡೆಗಣಿಸುತ್ತಾರೆಂಬ ಆಕ್ರೋಶ ವ್ಯಕ್ತವಾಗಿದೆ. ಜಿಲ್ಲಾಧಿಕಾರಿಗಳು ತಕ್ಷಣವೇ ಇಂತಹ ಬೇಜವಾಬ್ದಾರಿ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ವಿರುದ್ಧ ಇಲಾಖಾ ತನಿಖೆ ನಡೆಸಿ ಸಮಾಜ ಕಲ್ಯಾಣ ಇಲಾಖೆಯನ್ನು ಭ್ರಷ್ಟಾಚಾರ ಮುಕ್ತವಾಗಿಸಬೇಕೆಂದು ಜನ ಒತ್ತಾಯಿಸಿದ್ದಾರೆ.
