ದಕ್ಷಿಣ ಕನ್ನಡ: ಕೆಪಿಎಸ್ ಸಿ ನೇಮಕಾತಿಗೆ ಕೋಟಿ ಕೋಟಿ ಡೀಲ್..! ದ.ಕ ಜಿಲ್ಲಾ ಕಾಂಗ್ರೆಸ್ ಸಭೆಯಲ್ಲಿ ಅಲ್ಲೋಲ ಕಲ್ಲೋಲ.!

ರಾಜ್ಯ

BIG POLITICAL EXCLUSIVE

ಕಾರ್ಯಕರ್ತರ ಪ್ರಶ್ನೆಗೆ ತಬ್ಬಿಬ್ಬಾಗಿ ಸೋತು ಸುಣ್ಣಾದ ಮಾಜಿ ಶಾಸಕ.. ಕಾಂಗ್ರೆಸ್ ನಾಯಕರ ನಡೆಗೆ ಕಾರ್ಯಕರ್ತರು ಫುಲ್ ಗರಂ

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ ಸಿ) ಸದಸ್ಯ ಹುದ್ದೆ ಕೋಟಿ, ಕೋಟಿಗೆ ಬಿಕರಿಯಾಂತೆ.!

ಇನ್ನೇನೂ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಶವಪೆಟ್ಟಿಗೆಗೆ ಮೊಳೆ ಹೊಡೆಯುವುದೊಂದೇ ಬಾಕಿ ಇದೆ. ಸಾಲು ಸಾಲು ಚುನಾವಣೆಯಲ್ಲಿ ಕಾಂಗ್ರೆಸ್ ಫುಲ್ ಡಮಾರ್ ಆಗಿದೆ. ಆದರೆ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿಯುವ ಕಾರ್ಯಕರ್ತರಿಂದ ಜಿಲ್ಲೆಯಲ್ಲಿ ಪಕ್ಷ ಅಲ್ಪಸ್ವಲ್ಪ ಉಸಿರಾಡುತ್ತಿದೆ. ನಾಯಕರಾದವರೂ ಪಕ್ಷವನ್ನು ಬೆಳೆಸುತ್ತಿಲ್ಲ. ಬಹುತೇಕ ನಾಯಕರು ಹಗಲು ಕಾಂಗ್ರೆಸ್ ಆದರೆ ರಾತ್ರಿ ಬಿಜೆಪಿಗರಾಗುತ್ತಾರೆ! ಇಂತಹ ನಾಯಕರನ್ನು ಮುಂದಿಟ್ಟು ಚುನಾವಣೆಗೆ ಹೋದರೆ ಖತಂ..ಖತಂ ಅಲ್ಲದೆ ಬೇರೇನೂ. ಪಕ್ಷಕ್ಕಾಗಿ ದುಡಿಯಲು ಕಾರ್ಯಕರ್ತರು ಬೇಕು. ಅಧಿಕಾರ ಮಾತ್ರ ಪಕ್ಷಕ್ಕೆ ನಯಾಪೈಸೆಯ ಲಾಭವಿಲ್ಲದ ಮಂದಿಗೆ. ಇದೇ ಕಾರಣದಿಂದ ಪಕ್ಷ ಮತ್ತಷ್ಟು ಎಕ್ಕುಟ್ಟಿ ಹೋಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಉಸಿರು ನಿಲ್ಲಿಸಿ ದಶಕಗಳೇ ಕಳೆದಿದೆ. ಆದರೆ ನಿಗಮ ಮಂಡಳಿಗಳ ನೇಮಕಾತಿಗಂತೂ ಇಲ್ಲಿ ಕೋಟಿ ಕೋಟಿ ಡೀಲ್ ನಡೆಯುತ್ತಿದೆ ಎಂಬುದನ್ನು ನೀವು ನಂಬಲೇಬೇಕು. ಅದಕ್ಕೆ ಸಾಕ್ಷಿ ಒದಗಿಸುವಂತಹ ಘಟನೆಯೊಂದು ದ.ಕ ಜಿಲ್ಲಾ ಕಾಂಗ್ರೆಸ್ ನಲ್ಲಿ ನಡೆದಿದೆ. ಕೆಲ ನಾಯಕರು ದುಡ್ಡಿಗಾಗಿ ಕಾಂಗ್ರೆಸ್ಸಿಗರೇ ಅಲ್ಲದವರಿಗೆ ಉನ್ನತ ಹುದ್ದೆಯನ್ನು ಮರಾಟ ಮಾಡುತ್ತಿರುವುದು ಕಾರ್ಯಕರ್ತರ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲಿ ದುಡ್ಡೇ ದೊಡ್ಡಪ್ಪ, ಪ್ರಾಮಾಣಿಕತೆ, ನಿಷ್ಠೆ ಎನ್ನುವುದು ಬರೀ ಕಾರ್ಯಕರ್ತರಿಗೆ ಮಾತ್ರ ಸೀಮಿತವಾಗಿದೆ.

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ ಸಿ) ಸದಸ್ಯರ ಹುದ್ದೆ ಬಿಕರಿಯಾಗುತ್ತಿದೆ. ಇಂತಹದ್ದೊಂದು ಚರ್ಚೆ ಕಾಂಗ್ರೆಸ್ ಪಕ್ಷದಲ್ಲೇ ನಡೆಯುತ್ತಿದೆ. ದಿನಾಂಕ 13-09-2024 ರಂದು ಮಂಗಳೂರಿನಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಸಭೆಯಲ್ಲಿ ನೇಮಕಾತಿ ಬಗ್ಗೆ ಕಾರ್ಯಕರ್ತರು ನಾಯಕರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಈ ಹಿಂದಿನ ಸದಸ್ಯರಾಗಿದ್ದ ರೋನಾಲ್ಡ್ ಅನಿಲ್ ಫೆರ್ನಾಂಡಿಸ್ ಅವರ ಅವಧಿ ಜುಲೈ ತಿಂಗಳಿಗೆ ಮುಕ್ತಾಯವಾಗಿದ್ದು, ತೆರವಾದ ಸ್ಥಾನಕ್ಕೆ ಮತ್ತೊಮ್ಮೆ ಕ್ರೈಸ್ತ ಸಮುದಾಯದ ವ್ಯಕ್ತಿಯನ್ನು ನೇಮಕ ಮಾಡುವಂತೆ ಮಾಜಿ ಶಾಸಕರೊಬ್ಬರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಿಫಾರಸು ಪತ್ರ ನೀಡಿದ್ದಾರೆ. ಇದರ ಜೊತೆಗೆ ಕ್ರೈಸ್ತರ ಪ್ರಮುಖ ಸಂಘಟನೆ ಕೂಡ ಮುಖ್ಯಮಂತ್ರಿಯವರಿಗೆ ಮನವಿ ನೀಡಿದ್ದು, ಕ್ರೈಸ್ತ ಅಭ್ಯರ್ಥಿಗೆ ನೀಡುವಂತೆ ಕೋರಿಕೊಂಡಿದ್ದಾರೆ. ಕೆಪಿಎಸ್ ಸಿ ಈ ಹಿಂದಿನ ಸದಸ್ಯ ಸ್ಥಾನವನ್ನು ಕ್ರೈಸ್ತ ಸಮುದಾಯಕ್ಕೆ ನೀಡಲಾಗಿತ್ತು. ಇದೀಗ ಮತ್ತೆ ಕ್ರೈಸ್ತ ಸಮುದಾಯಕ್ಕೆ ನೀಡುವ ಔಚಿತ್ಯವಾದರೂ ಏನು.? ಮುಸ್ಲಿಂ, ಬಂಟ್ಸ್, ಬಿಲ್ಲವ ಅಥವಾ ಇತರ ಸಮುದಾಯಕ್ಕೆ ಸೇರಿದವರು ಕಾಂಗ್ರೆಸ್ ನಲ್ಲಿ ದುಡಿಯುತ್ತಿಲ್ಲವೇ.?

ಇನ್ನು ಕೆಪಿಎಸ್ ಸಿ ಸದಸ್ಯ ಸ್ಥಾನಕ್ಕೆ ಲಾಬಿ ನಡೆಸುವ ವ್ಯಕ್ತಿ ಕಾಂಗ್ರೆಸ್ ಕಾರ್ಯಕರ್ತರಾದರೇ ಅದನ್ನು ಸಹಿಸಬಹುದಿತ್ತು. ಆದರೆ ಮಾಜಿ ಶಾಸಕರು ಶಿಫಾರಸು ಮಾಡಿದ ವ್ಯಕ್ತಿ ಗೃಹಿಣಿ ಆಗಿದ್ದು, ಪಕ್ಷದ ಸಾಮಾನ್ಯ ಕಾರ್ಯಕರ್ತರಲ್ಲ. ಅವರಿಂದ ಪಕ್ಷಕ್ಕೆ ನಯಾಪೈಸೆಯ ಉಪಯೋಗವಾಗಿಲ್ಲ. ಇಂತಹವರನ್ನು ಪ್ರತಿಷ್ಠಿತ ಹುದ್ದೆಗೆ ಶಿಫಾರಸು ಮಾಡುವ ಹಿಂದಿನ ಉದ್ದೇಶದ ಹಕೀಕತ್ತಾದರೂ ಏನು.?

ಈ ಬಗ್ಗೆ ಕಾರ್ಯಕರ್ತರೇ ಆಕ್ರೋಶಗೊಂಡಿದ್ದಾರೆ. ಲಾಬಿ ನಡೆಸುತ್ತಿರುವ ವ್ಯಕ್ತಿ ಮಾಜಿ ಶಾಸಕರೊಬ್ಬರ ಸಂಬಂಧಿ ಎನ್ನಲಾಗಿದ್ದು. ಇದರ ಹಿಂದೆ ದೊಡ್ಡ ಕೋಟಿಗಟ್ಟಲೆಯ ಡೀಲೊಂದು ನಡೆದಿದೆ ಅನ್ನುವ ಅಪಸ್ವರ ಇದೀಗ ಕೇಳಿ ಬಂದಿದೆ. ದ.ಕ ಜಿಲ್ಲೆಯ ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರು ಸೋತು ಸುಣ್ಣಾದ ಮಾಜಿ ಶಾಸಕರನ್ನು ಮಾತನಾಡಲು ಬಿಡದೆ ಸಖತ್ತಾಗಿಯೇ ಬೆವರಿಳಿಸಿದ್ದಾರೆ. ದ.ಕ. ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಪ್ರಮುಖರೊಬ್ಬರು ಕೆಪಿಎಸ್ ಸಿ ಸದಸ್ಯರ ಆಯ್ಕೆ ಬಗ್ಗೆ ಎಷ್ಟು ಕೋಟಿಗೆ ಮಾರಾಟವಾಗಿದೆ ಎಂದು ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೆ ಧ್ವನಿಗೂಡಿಸಿದ ಇನ್ನಿತರ ಕಾರ್ಯಕರ್ತರು ಐದು ಕೋಟಿ ರೂಪಾಯಿ ಪಡೆದು ಬಿಕರಿಯಾಗಿವೆ ಎಂದು ನಾಯಕರ ಎದುರೇ ಬಹಿರಂಗವಾಗಿ ಆರೋಪಿಸಿದ್ದಾರೆ. ನಾವು ದುಡ್ಡು ಕೊಡಲು ಸಿದ್ಧ, ನಮಗೂ ಸ್ಥಾನ ಕೊಡುತ್ತೀರಾ ಎಂದು ನಾಯಕರನ್ನು ಪ್ರಶ್ನಿಸಿದ್ದಾರೆ. ಕಾರ್ಯಕರ್ತರೇ ಆಗಿರದವರನ್ನು ಪ್ರಮುಖ ಆಯಕಟ್ಟಿನ ಜಾಗಕ್ಕೆ ತಂದು ಕೂರಿಸುವ ಹಿಂದಿನ ಅಜೆಂಡಾ ಬಗ್ಗೆಯೂ ಕಾರ್ಯಕರ್ತರು ಗರಂ ಆಗಿದ್ದಾರೆ. ಕಾರ್ಯಕರ್ತರ ನಡೆಯಿಂದ ತಬ್ಬಿಬ್ಬಾಗುವ ಸ್ಥಿತಿ ಮಾಜಿ ಶಾಸಕರದ್ದು. ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಲಾಗುತ್ತದೆ ಎಂದು ವಿಧಾನಪರಿಷತ್ ಸದಸ್ಯರು, ಮಾಜಿ ಶಾಸಕರ ಬಗ್ಗೆ ಮಂಗಳೂರಿನ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರ್ಯಕರ್ತರ ಪ್ರಶ್ನೆಗೆ ತಡವರಿಸಿದ ನಾಯಕರು ಕಾರ್ಯಕರ್ತರ ಮೇಲೆಯೇ ರೇಗಾಡಿದ ಪ್ರಸಂಗವೂ ನಡೆದಿದೆ. ಒಟ್ಟಾರೆ ಕಾಂಗ್ರೆಸ್ ಸಭೆಯಲ್ಲಿ ಕೆಪಿಎಸ್ ಸಿ ಸದಸ್ಯ ಹುದ್ದೆಯ ವಿಚಾರ ತಾರಕಕ್ಕೇರಿ ಗೊಂದಲದಿಂದಲೇ ಸಭೆ ಮುಕ್ತಾಯವಾಗಿದೆ.

ಕಾಂಗ್ರೆಸ್ ಪಕ್ಷ ಕಾರ್ಯಕರ್ತರನ್ನು ಕಡೆಗಣಿಸುವುದು ಎಲ್ಲಿಯವರೆಗೆ ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೆ ಪಕ್ಷಕ್ಕೆ ಭವಿಷ್ಯವಿಲ್ಲ. ಕೋಟಿ ಕೋಟಿ ದುಡ್ಡಿಗಾಗಿ ಹುದ್ದೆಗಳು ಮಾರಾಟವಾಗುತ್ತಿದ್ದು, ಯಾರು ಹೆಚ್ಚು ಕೊಡುತ್ತಾರೋ ಅವರಿಗೆ ಮಾರಾಟ ಮಾಡಲಾಗುತ್ತಿದೆ. ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಹೈಕಮಾಂಡ್ ನಿಂದ ಬಂದ ದುಡ್ಡನ್ನು ಕೆಲವು ಪ್ರಭಾವಿ ನಾಯಕರು ಚುನಾವಣೆಗೆ ಬಳಸದೆ ಲಪಟಾಯಿಸಿದ ಗುರುತರ ಆರೋಪವು ಪಕ್ಷದ ಪಡಸಾಲೆಯಲ್ಲಿ ಗುಸು ಗುಸು ಕೇಳಿ ಬರುತ್ತಿದೆ. ಕೆಪಿಎಸ್ ಸಿ ಸದಸ್ಯ ಹುದ್ದೆ ಜಿಲ್ಲಾ ಕಾಂಗ್ರೆಸ್ ನಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದು, ಇದರ ಹಿಂದೆ ಕೋಟಿ ಕೋಟಿ ಡೀಲ್ ನಡೆದ ವಿಚಾರ ಮೆಲ್ಲಗೆ ಕೇಳಿ ಬರುತ್ತಿದೆ. ಮೈಸೂರು ಮುಡಾ ಹಗರಣ, ವಾಲ್ಮಿಕಿ ಹಗರಣವನ್ನೂ ಮೀರಿಸುವಂತಹ ಭ್ರಷ್ಟಾಚಾರ ನಡೆದಿದೆ. ಕಾಂಗ್ರೆಸ್ ಹೈಕಮಾಂಡ್ ಇನ್ನಾದರೂ ಕೋಟಿ ಕೋಟಿ ದುಡ್ಡಿಗಾಗಿ ಹುದ್ದೆ ಮಾರಾಟವಾಗುವುದನ್ನು ತಡೆಯಬೇಕಿದೆ. ನೈಜ ಕಾರ್ಯಕರ್ತರಿಗೆ ಅಧಿಕಾರ ದಯಪಾಲಿಸಬೇಕಿದೆ.