ದಾಳಿ ನಡೆಸಿ ಮಾಂಸ, ಕೋವಿ ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು; ಆರೋಪಿಗಳು ಎಸ್ಕೇಪ್.
ಮಗನ ಹುಟ್ಟುಹಬ್ಬಕ್ಕಾಗಿ ರಕ್ಷಿಣಾರಣ್ಯದಿಂದ ಕಡವೆಯನ್ನು ಗುಂಡಿಕ್ಕಿ ಕೊಂದು ಮಾಂಸವನ್ನು ಫ್ರಿಡ್ಜ್ ನಲ್ಲಿಟ್ಟ ಪ್ರಕರಣ ಉಪ್ಪಿನಂಗಡಿ ಬಳಿ ನಡೆದಿದೆ. ಮಾಹಿತಿ ಪಡೆದ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳ ತಂಡ ಶಿರಾಡಿ ಗ್ರಾಮದ ಗುಂಡ್ಯ ನಿವಾಸಿ ಸುರೇಶ್ ಎಂಬವರ ಮನೆಗೆ ದಾಳಿ ನಡೆಸಿದೆ. ಹತ್ಯೆಗೆ ಬಳಸಿದ ಕೋವಿ, ಫ್ರಿಡ್ಜ್ ನಲ್ಲಿ ಇರಿಸಲಾಗಿದ್ದ ಕಡವೆ ಮಾಂಸವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ .
ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ಆರೋಪಿಗಳು ಗುಂಡ್ಯ ಹೊಳೆಯಲ್ಲಿ ಈಜಿ ಪರಾರಿಯಾಗಿದ್ದಾರೆ. ಆರೋಪಿಗಳನ್ನು ಶಿರಾಡಿ ಗ್ರಾಮದ ಗುಂಡ್ಯ ನಿವಾಸಿ ಸುರೇಶ್ ಮತ್ತವರ ಸ್ನೇಹಿತರೆಂದು ಗುರುತಿಸಲಾಗಿದೆ.
ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳ ನಿರ್ದೇಶನದ ಮೇರೆಗೆ ಉಪ ವಲಯ ಅರಣ್ಯಾಧಿಕಾರಿ ಯತೀಂದ್ರ ಇಲಾಖಾ ಸಿಬಂದಿ ಸುನಿಲ್, ಶಿವಾನಂದ ಅವರ ತಂಡ ಆರೋಪಿ ಸುರೇಶ್ ಮನೆಗೆ ದಾಳಿ ನಡೆಸಿದೆ. ಉಪ್ಪಿನಂಗಡಿ ವಲಯ ಅರಣ್ಯಾಧಿ ಕಾರಿ ರಾಘವೇಂದ್ರ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
