ರಾಮಮಂದಿರ ಮಠದ‌ ಲೋಕೇಶ್ವರ ಸ್ವಾಮೀಜಿಯಿಂದ ಅಪ್ರಾಪ್ತೆಯ ಅತ್ಯಾಚಾರ, ಜೀವ ಬೆದರಿಕೆ, ಸ್ವಾಮಿ ಬಂಧನ

ರಾಜ್ಯ

ಅಪ್ರಾಪ್ತ ವಯಸ್ಸಿನ ಹೆಣ್ಣುಮಗಳನ್ನು ಮುಕ್ಕಿ ತಿಂದಿದ್ದಲ್ಲದೆ ಇದೀಗ ಕೊಲೆ ಬೆದರಿಕೆಯನ್ನು ಹಾಕಿದ ಆರೋಪದಲ್ಲಿ ಬೆಳಗಾವಿಯ ರಾಮಮಂದಿರ ಮಠದ‌ ಲೋಕೇಶ್ವರ ಎಂಬ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೃತ್ಯವೆಸಗಿದ ಬಳಿಕ ಯಾರಿಗೂ ಹೇಳದಂತೆ ಸ್ವಾಮೀಜಿ ಬೆದರಿಕೆ ಕೂಡ ಹಾಕಿದ್ದ ಎನ್ನಲಾಗುತ್ತಿದೆ. ಅತ್ಯಾಚಾರ ವಿಚಾರ ಬಾಯಿಬಿಟ್ಟರೆ ಕೊಲೆಗೈಯ್ಯುವ ಬೆದರಿಕೆ ಹಾಕಿದ್ದ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಯಭಾಗ ಮೇಕಳಿ‌ ಮಠದ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿರುತ್ತಾರೆ. ಅಪ್ಪ ಮತ್ತು ಮಗಳು ಈ ಮಠಕ್ಕೆ ಆಗಾಗ ಭೇಟಿ ನೀಡಿರುವ ಸಮಯದಲ್ಲಿ ಪರಿಚಯವಾದ ಸ್ವಾಮೀಜಿ ಅವರ ಆಪ್ರಾಪ್ತೆ ಮಗಳನ್ನು ರಾಯಚೂರು, ಬಾಗಲಕೋಟೆಯ ಲಾಡ್ಜ್‌ಗಳಿ​ಗೆ ಕರೆದೊಯ್ದು 2 ದಿನಗಳ ಕಾಲ ಅತ್ಯಾಚಾರವೆಸಗಿದ್ದಾನೆ ಎನ್ನುವ ಆರೋಪ ಇದೀಗ ಕೇಳಿಬಂದಿದೆ ಎನ್ನಲಾಗಿದೆ.

ಎರಡು ದಿನಗಳ ಬಳಿಕ ಮನೆಗೆ ಬಂದ ಮಗಳನ್ನು ಎಲ್ಲಿ ಹೋಗಿದ್ದೆ ಎಂದು ಪೋಷಕರು ವಿಚಾರಿಸಿದಾಗ ಪ್ರಕರಣ ಬಯಲಾಗಿದ್ದು, ಕೃತ್ಯವೆಸಗಿದ ಬಳಿಕ ಯಾರಿಗೂ ಹೇಳದಂತೆ ಸ್ವಾಮೀಜಿ ಅಪ್ರಾಪ್ತೆಗೆ ಬೆದರಿಕೆ ಕೂಡ ಹಾಕಿದ್ದನಂತೆ. ಇದೀಗ ಪೋಷಕರು ದೂರು ನೀಡಿದ್ದು, ಪೊಲೀಸರು ಮಠದಲ್ಲಿ ಶೋಧಕಾರ್ಯ ನಡೆಸಿದ್ದಾರೆ. ಸ್ವಾಮೀಜಿಯ ಮಠದಲ್ಲಿ ಮಾರಕಾಸ್ತ್ರಗಳು ಕೂಡ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಕೂಡಲೇ ಸ್ವಾಮೀಜಿಯನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.