ಸಾಮಾಜಿಕ ಜಾಲತಾಣದಲ್ಲಿ ಅವಮಾನಕಾರಿ‌ ಸಂದೇಶ ಪ್ರಸಾರ; 5 ಮಂದಿ ವಿರುದ್ದ ಪ್ರಕರಣ ದಾಖಲು

ಕರಾವಳಿ

ದ.ಕ: ಹುಬ್ಬಳ್ಳಿ ಚಬ್ಬಿ ಗ್ರಾಮದ ನಿವಾಸಿ ಅಜಿತ್ ನಾಗಪ್ಪ ಬಸಾಪುರ್ (32) ಎಂಬವರ ದೂರಿನಂತೆ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಎಂಬಲ್ಲಿ, ಪ್ರಕರಣದ ಆರೋಪಿತನಾದ ಗಿರೀಶ ಮಟ್ಟೆಣ್ಣ ಎಂಬವರು ಜೈನ ಧರ್ಮಕ್ಕೆ ಮತ್ತು ಜೈನ ಧರ್ಮೀಯರ ಭಾವನೆಗಳಿಗೆ ಅವಮಾನಪಡಿಸುವ ಉದ್ದೇಶದಿಂದ ಕುಡ್ಲ ರಾಂಪೇಜ್ ಯೂಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ, ಜೈನರು ಹಾಗೂ ಜೈನ ಧರ್ಮದವರ ಬಗ್ಗೆ ತುಚ್ಚವಾಗಿ ಮಾತನಾಡಿರುತ್ತಾರೆ ಹಾಗೂ ಪ್ರಕರಣದ ಮತ್ತೋರ್ವ ಆರೋಪಿ ಕುಡ್ಲ ರಾಂಪೇಜ್ ಚಾನೆಲ್ ಮಾಲೀಕನು ಸದ್ರಿ ಸಂದರ್ಶನದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ಜೈನ ಧರ್ಮೀಯರ ಧಾರ್ಮೀಕ ಭಾವನೆಗಳಿಗೆ ಅಪಮಾನಿಸಿರುತ್ತಾನೆ ಎಂಬುದಾಗಿ ನೀಡಿದ ದೂರಿನ ಮೇರೆಗೆ, ದಿನಾಂಕ: 12-08-2025 ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ, ಅಕ್ರ: 86/2025, ಕಲಂ.196(1) (ಎ) 299 ಬಿ.ಎನ್.ಎಸ್. 2023 ರಂತೆ ಪ್ರಕರಣ ದಾಖಲಾಗಿರುತ್ತದೆ.

ಬೆಳ್ತಂಗಡಿ ನಿವಾಸಿ ಶ್ರೀಮತಿ ವಿಜಯ (41) ಎಂಬವರು, ದಿನಾಂಕ 12.08.2025 ರಂದು ಮದ್ಯಾಹ್ನ ತನ್ನ ಫೇಸ್ ಬುಕ್ ಖಾತೆಯನ್ನು ನೋಡುತ್ತಿದ್ದಾಗ “ವಿಕಾಸ್‌ ವಿಕ್ಕಿ ಹಿಂದೂ“ ಎಂಬ ಪೇಸ್‌ ಬಕ್‌ ಖಾತೆಯಲ್ಲಿ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಶ್ಲೀಲ ಪದಗಳನ್ನು ಬಳಸಿ ಸಾರ್ವಜನಿಕವಾಗಿ ಕಿರಿಕಿರಿಯಾಗುವಂತಹ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿರುವುದು ಕಂಡುಬಂದಿರುತ್ತದೆ, ಎಂಬುದಾಗಿ ನೀಡಿದ ದೂರಿನ ಮೇರೆಗೆ, ದಿನಾಂಕ: 12.08.2025 ರಂದು ವೇಣೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ 71/2025, ಕಲಂ:296 ಬಿಎನ್ಎಸ್ -2023 ದಾಖಲಾಗಿರುತ್ತದೆ.

ಬೆಳ್ತಂಗಡಿ ನಿವಾಸಿ ಧನಂಜಯ ಜೈನ್ (47) ಎಂಬವರು, ದಿನಾಂಕ 12.08.2025 ರಂದು ಮದ್ಯಾಹ್ನ ತನ್ನ ಫೇಸ್ ಬುಕ್ ಖಾತೆಯನ್ನು ನೋಡುತ್ತಿದ್ದಾಗ“ಏನ್ರಿ ಗೌಡ್ರೆ” ಎಂಬ ಪೇಸ್ ಬುಕ್ ಖಾತೆಯಲ್ಲಿ ಅಶ್ಲೀಲ ಪದಗಳನ್ನು ಬಳಸಿ ಸಾರ್ವಜನಿಕವಾಗಿ ಕಿರಿಕಿರಿಯಾಗುವಂತಹ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿರುವುದು ಕಂಡುಬಂದಿರುತ್ತದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ದಿನಾಂಕ: 12.08.2025 ರಂದು ವೇಣೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ 72/2025, ಕಲಂ:296 ಬಿಎನ್ಎಸ್ -2023ಪ್ರಕರಣ ದಾಖಲಾಗಿರುತ್ತದೆ.

ಬೆಳ್ತಂಗಡಿ ನಿವಾಸಿ ಪ್ರಭಾಕರ ಗೌಡ (51) ರವರು ತನ್ನ ಮೊಬೈಲ್ ನಲ್ಲಿ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ಪರಿಶೀಲಿಸುತ್ತಿದ್ದಾಗ, ಲಾಯರ್ ಜಗದೀಶ್ ಎಂಬಾತನು ತನ್ನ ಫೇಸ್ಬುಕ್ ಖಾತೆಯಲ್ಲಿ, ಧರ್ಮಸ್ಥಳದಲ್ಲಿ ಪ್ರಸ್ತುತ ನಡೆಯುತ್ತಿರುವ ಉತ್ಖನನ ಕಾರ್ಯಕ್ಕೆ ಸಂಬಂಧಿಸಿದಂತೆ, ಸಾರ್ವಜನಿಕರಿಗೆ ಅಪರಾಧ ಎಸಗಲು ದುಷ್ಪ್ರೇರಣೆಯಾಗುವಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ, ಅಕ್ರಮ ಕೂಟ ಸೇರಿ ಮಾರಕ ಆಯುಧವನ್ನು ಬಳಕೆ ಮಾಡಿ ಅಪರಾಧ ಎಸಗಲು ಪ್ರೋತ್ಸಾಹಿಸಿರುವುದು ಕಂಡುಬಂದಿರುತ್ತದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ, ದಿನಾಂಕ: 13-08-2025 ರಂದು ಬೆಳ್ತಂಗಡಿ ಠಾಣಾ ಅಕ್ರ: 88/2025 ಕಲಂ: 57 ಜೊತೆಗೆ 189(6), 191(3) ಬಿಎನ್ಎಸ್ 2023 ರಂತೆ ಪ್ರಕರಣ ದಾಖಲಾಗಿರುತ್ತದೆ.

ಬೆಳ್ತಂಗಡಿ ನಿವಾಸಿ ಪ್ರಭಾಕರ ಗೌಡ (51) ಎಂಬವರು, ದಿನಾಂಕ: 13-08-2025 ರಂದು ಬೆಳಿಗ್ಗೆ ತನ್ನ ಮೊಬೈಲ್ ನಲ್ಲಿ ಸಾಮಾಜಿಕ ಜಾಲತಾಣದ ಸಂದೇಶಗಳನ್ನು ಪರಿಶೀಲಿಸುತ್ತಿರುವಾಗ, ಸಾಮಾಜಿಕ ಜಾಲತಾಣದಲ್ಲಿ ಲೊಕೇಶ್ ಪೂಜಾರಿ ಎಂಬ ಫೇಸ್ಬುಕ್ ಖಾತೆದಾರನು ತನ್ನ ಫೇಸ್ಬುಕ್ ಖಾತೆಯಲ್ಲಿ, ಕೋಟಿ ಚೆನ್ನಯರಿಗೆ ಸಂಬಂಧಿಸಿದಂತೆ, ಎರಡು ಸಮುದಾಯಗಳ ನಡುವೆ ಜಾತಿಯ ಆಧಾರದಲ್ಲಿ ವೈಮನಸ್ಸು ಉಂಟಾಗುವಂತಹ ಹಾಗೂ ಸಾರ್ವಜನಿಕರಲ್ಲಿ ಅಪಾಯದ ಭೀತಿಯುಂಟಾಗುವಂತೆ ಸುಳ್ಳು ವದಂತಿಗಳಿರುವ ಸಂದೇಶಗಳನ್ನು ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ಖಾತೆಯಲ್ಲಿ ಪ್ರಸಾರ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ದಿನಾಂಕ: 13-08-2025 ರಂದು ಬೆಳ್ತಂಗಡಿ ಠಾಣೆಯಲ್ಲಿ ಅಕ್ರ: 89/2025 ಕಲಂ: 353(2) ಬಿಎನ್ಎಸ್ -2023 ರಂತೆ ಪ್ರಕರಣ ದಾಖಲು.

ಬೆಳ್ತಂಗಡಿ ನಿವಾಸಿ ಎಮ್ ಉದಯ ಪೂಜಾರಿ (41) ಎಂಬವರು, ದಿನಾಂಕ: 13-08-2025 ಬೆಳಿಗ್ಗೆ, ತನ್ನ ಮೊಬೈಲ್ ನಲ್ಲಿ ಸಾಮಾಜಿಕ ಜಾಲತಾಣಗಳನ್ನು ಪರಿಶೀಲಿಸುತ್ತಿರುವಾಗ, ಪ್ರಕರಣದ ಆರೋಪಿ ನವೀನ್ ಜೈನ್ ಎಂಬಾತನು ಯೂಟ್ಯೂಬ್ ನಲ್ಲಿ, ಜನರು ಅಕ್ರಮಕೂಟ ಸೇರಿ, ಸಾರ್ವಜನಿಕರ ನೆಮ್ಮದಿಗೆ ಭಂಗವನ್ನುಂಟು ಮಾಡುವಂತಹ ಅಪರಾಧಗಳನ್ನು ನಡೆಸಲು ಹಾಗೂ ಕಾನೂನು ಬಾಹಿರ ಕೃತ್ಯಗಳನ್ನು ಎಸಗಲು ದುಷ್ಕೃರಣೆಯಾಗುವಂತೆ ವಿಡಿಯೋಗಳನ್ನು ಪ್ರಸಾರ ಮಾಡಿರುವುದು ಕಂಡುಬಂದಿರುತ್ತದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ: 91/2025 ಕಲಂ: 57 ಜೊತೆಗೆ 189,190 ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.