ಮಂಗಳೂರು: ವಿಮಾನ ಪ್ರಯಾಣಿಕರ ಬ್ಯಾಗೇಜ್ ನಿಂದ ಚಿನ್ನಾಭರಣ ಕಳವು ಪ್ರಕರಣ: ಕಳವು ಮಾಡಿದ ಬ್ಯಾಗೇಜ್ ನೌಕರರ ಬಂಧನ, ಚಿನ್ನಾಭರಣ ಸಹಿತ ನಗದು ವಶ.

ಕರಾವಳಿ

ಬಜಪೆ ಏರ್ ಪೋರ್ಟ್ ಬ್ಯಾಗೇಜ್ ಸಿಬ್ಬಂದಿಗಳೇ ದರೋಡೆಕೋರರು.! ಪ್ರಯಾಣಿಕರ ಬ್ಯಾಗ್ ನಿಂದಲೇ ಚಿನ್ನ ಲಪಟಾಯಿಸುವ ಕರಾಳ ಜಾಲ ಬೆಳಕಿಗೆ.!

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಹಿಳಾ ಪ್ರಯಾಣಿಕರೊಬ್ಬರು 30-08-2025 ರಂದು ಬೆಳಿಗ್ಗೆ ಬೆಂಗಳೂರಿನಿಂದ AIR INDIA EXPRESS ವಿಮಾನದಲ್ಲಿ ಪ್ರಯಾಣ ಮಾಡಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ವಿಮಾನ ನಿಲ್ದಾಣದ ಬ್ಯಾಗೆಜ್ ಬೇಲ್ಟ್ ನಿಂದ ತಮ್ಮ ಲಗೇಜ್ ನ್ನು ಪಡೆದು ಚೆಕ್ ಮಾಡಿದಾಗ 56 ಗ್ರಾಂ ತೂಕದ ಚಿನ್ನಾಭರಣ (ಮೌಲ್ಯ 4,50,000/-) ಕಳವು ಆಗಿದ್ದು, ಈ ಬಗ್ಗೆ ಪ್ರಯಾಣಿಕರು ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ಕಳವು ಪ್ರಕರಣ ದಾಖಲಿಸಿಕೊಂಡು ಬಜಪೆ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ AIR INDIA SATS ಕಂಪೆನಿಯಲ್ಲಿ ಲೋಡರ್ ಅನ್ ಲೋಡರ್ ಕೆಲಸ ಮಾಡಿಕೊಂಡಿರುವ ಮಂಗಳೂರು ತಾಲೂಕು ಕಂದಾವರದ ನಿವಾಸಿ ನಿತಿನ್, ಮೂಡುಪೆರಾರದ ನಿವಾಸಿಗಳಾದ ಸದಾನಂದ, ರಾಜೇಶ್, ಬಜಪೆ ನಿವಾಸಿ ಪ್ರವೀಣ್ ಫೆರ್ನಾಂಡಿಸ್ ರವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ದಿನಾಂಕ 30-08-2025 ರಂದು AIR INDIA EXPRESS ವಿಮಾನದಲ್ಲಿದ್ದ ಲಗೇಜ್ ನಿಂದ ಚಿನ್ನಾಭರಣ ಕಳವು ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾರೆ. ಆರೋಪಿತರು ಮೂಡುಪೆರಾರದ ನಿವಾಸಿ ರವಿರಾಜ್ ಎಂಬಾತನಿಗೆ ಚಿನ್ನಾಭರಣವನ್ನು ಮಾರಿದ್ದು, ಆರೋಪಿತರಿಂದ ಸುಮಾರು 5 ಲಕ್ಷ ರೂಪಾಯಿ ಮೌಲ್ಯದ 50 ಗ್ರಾಂ ಚಿನ್ನದ ಗಟ್ಟಿಯನ್ನು ಪೊಲೀಸರು ವಶಪಡಿಸಿರುತ್ತಾರೆ.

ವಿಚಾರಣೆಯಲ್ಲಿ ಈ ಹಿಂದೆ 2025 ನೇ ಸಾಲಿನ ಜನವರಿ ತಿಂಗಳಿನಲ್ಲಿ ಇದೇ ರೀತಿ ಪ್ರಯಾಣಿಕರ ಮನೋಹರ್ ಶೆಟ್ಟಿ ರವರ ಬ್ಯಾಗಿನಿಂದ ಕಳವು ಮಾಡಿದ್ದ 2 ಲಕ್ಷ ರೂಪಾಯಿ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇದರ ಬಗ್ಗೆ ಈಗಾಗಲೇ ಬಜಪೆ ಪೊಲೀಸ್ ಠಾಣೆಯಲ್ಲಿ ಅ.ಕ್ರ 27/2025 ಪ್ರಕರಣ ದಾಖಲಾಗಿ ತನಿಖೆ ಹಂತದಲ್ಲಿತ್ತು. ಈ ಎಲ್ಲಾ ಆರೋಪಿಗಳು ಸುಮಾರು 9 ವರ್ಷಗಳಿಂದ AIR INDIA SATS ರಲ್ಲಿ ಕೆಲಸವನ್ನು ನಿರ್ವಹಿಸಿರುತ್ತಾರೆ. ಸದ್ರಿ ಎಲ್ಲಾ 5 ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಇನ್ನೂ ಹೆಚ್ಚಿನ ತನಿಖೆಗಾಗಿ ಪೊಲೀಸ್ ವಶಕ್ಕೆ ಪಡೆಯುವ ಸಾಧ್ಯತೆ ಇದೆ.

ವಿಮಾನದ ಪ್ರಾಯಾಣಿಕರು ಬೆಲೆ ಬಾಳುವ ವಸ್ತುಗಳಾದ ಚಿನ್ನ, ನಗದನ್ನು ಬ್ಯಾಗೇಜ್ ನಲ್ಲಿ ಕಳುಹಿಸುವಾಗ ಆರೋಪಿಗಳು ಬ್ಯಾಗ್ ತೆರೆದಿದ್ದಲ್ಲಿ ಹುಡುಕುವುದು. ಕೆಲವೊಮ್ಮೆ ಬ್ಯಾಗ್ ಲಾಕ್ ನ ಸುಲಭ ಪಾಸ್ ವಾರ್ಡ್ ಸಂಖ್ಯೆಗಳಿದ್ದಲ್ಲಿ ಪ್ರಯತ್ನಿಸಿ ಕಳವು ಮಾಡುತ್ತಿರುವುದು ಕಂಡು ಬರುತ್ತದೆ. ಪ್ರಯಾಣಿಕರು ಈ ರೀತಿ ನಿರ್ಲಕ್ಷ್ಯತೋರದೇ, ಜಾಗೃತೆ ವಹಿಸಬೇಕಾಗಿದೆ.