ಮಂಗಳೂರು: ತಲಪಾಡಿ-ಕೆ ಸಿ ರೋಡು ಶಾರದಾ ವಿದ್ಯಾ ನಿಕೇತನ ಪಿಯು ಕಾಲೇಜಿನಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪಿಯುಸಿ ಹಂತದ ಟ್ವೆಕಾಂಡೋ ಚಾಂಪಿಯನ್ ಶಿಪ್ಪಿನಲ್ಲಿ ಜಿಲ್ಲೆಯ ನಾಲ್ವರು ಟ್ವೆಕಾಂಡೋ ಪಟುಗಳು 3 ಚಿನ್ನ ಹಾಗೂ 1 ಬೆಳ್ಳಿ ಪದಕ ಗೆದ್ದುಕೊಂಡು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಬಾಲಕರ ವಿಭಾಗದ 75 ಕೆಜಿ ವಿಭಾಗದಲ್ಲಿ ತುಂಬೆ ಬಿ ಎ ಪದವಿಪೂರ್ವ ಕಾಲೇಜು ದ್ವಿತೀಯ ಪಿಯುಸಿ ವಿದ್ಯಾರ್ಥಿ ಮೊಹಮ್ಮದ್ ಅಯಾನ್ ಅವರು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಈತ ಗೂಡಿನಬಳಿ ನಿವಾಸಿ ಜಿ ಕೆ ಮುಹಮ್ಮದ್ ಆರಿಫ್-ನಸೀಮಾ ದಂಪತಿಯ ಪುತ್ರ.

ಅಂಡರ್ 55 ಕೆಜಿ ವಿಭಾಗದಲ್ಲಿ ಮೊಡಂಕಾಪು ಕಾರ್ಮೆಲ್ ಪದವಿಪೂರ್ವ ಕಾಲೇಜು ಪ್ರಥಮ ಪಿಯುಸಿ ವಿದ್ಯಾರ್ಥಿ ಮುಹಮ್ಮದ್ ಹಿಶಾಂ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಈತ ಪಾಣೆಮಂಗಳೂರು-ನೆಹರುನಗರ ನಿವಾಸಿ ಅಬ್ದುಲ್ ಖಾದರ್ ಪಿ ಜೆ-ಮುಮ್ತಾಝ್ ದಂಪತಿಯ ಪುತ್ರ.
69 ಕೆಜಿ ವಿಭಾಗದಲ್ಲಿ ಯೆನಪೋಯ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಮುಹಮ್ಮದ್ ನಿಹಾಲ್ ನಝೀರ್ ಅವರು ಬೆಳ್ಳಿ ಪದಕ ಗೆದ್ದಿದ್ದಾರೆ. ಈತ ಪಾಣೆಮಂಗಳೂರು-ನೆಹರುನಗರ ನಿವಾಸಿ ದಿವಂಗತ ಅಬ್ದುಲ್ ನಝೀರ್ ಮುಹಮ್ಮದ್ ಹಾಗೂ ಸುಮಯ್ಯ ಎಸ್ ಮುಹಮ್ಮದ್ ದಂಪತಿಯ ಪುತ್ರ.
ಅಂಡರ್ 44 ಕೆಜಿ ಬಾಲಕಿಯರ ವಿಭಾಗದಲ್ಲಿ ಕೊಡಿಯಾಲ್ ಬೈಲ್ ಶಾರದಾ ವಿದ್ಯಾಲಯದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕುಸುಮಾ ಚಿನ್ನದ ಪದಕ ಗೆದ್ದಿದ್ದಾರೆ. ಈಕೆ ಸುರತ್ಕಲ್ ನಿವಾಸಿ ಎನ್ ಮಾಧಣ್ಣ-ಮಮತಾ ದಂಪತಿಯ ಪುತ್ರಿ.
ಜಿಲ್ಲಾ ಮಟ್ಟದಲ್ಲಿ ಪದಕ ಗೆದ್ದ ಕ್ರೀಡಾಪಟುಗಳು ಚಿಕ್ಕಬಳ್ಳಾಪುರದಲ್ಲಿ ನಡೆಯಲಿರುವ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ದಕ್ಷಿಣ ಕನ್ನಡ ಟೇಕ್ವಾಂಡೋ ಎಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ, ತರಬೇತುದಾರ ಇಸಾಕ್ ಇಸ್ಮಾಯಿಲ್ ನಂದಾವರ ಅವರು ಕ್ರೀಡಾಪಟುಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಸುರತ್ಕಲ್ಲಿನ ಎಕ್ಸ್ ಟ್ರೀಮ್ ಫಿಟ್ ಮತ್ತು ಫೈಟ್ ಕ್ಲಬ್ ಕ್ರೀಡಾಪಟುಗಳಿಗೆ ತರಬೇತಿ ಬೆಂಬಲ ನೀಡಿದೆ.
