ಬೆಳ್ತಂಗಡಿ ಪೋಲಿಸ್ ಉಪ-ವಿಭಾಗದ ಡಿವೈಎಸ್ಪಿ ಸಿ.ಕೆ ರೋಹಿಣಿ ರವರು ನೆರಿಯ ಗ್ರಾಮದ ಆಲಂಗಾಯಿಯಲ್ಲಿರುವ ಮಹರ್ಷಿ ವಾಲ್ಮೀಕಿ ಆಶ್ರಮ ಶಾಲೆಗೆ ಆದಿತ್ಯವಾರ ಭೇಟಿ ನೀಡಿದರು. ಈ ವಸತಿ ಶಾಲೆಯ ಆದಿವಾಸಿ ಮಕ್ಕಳೊಂದಿಗೆ ಬೆರೆತು, ಮಾತುಕತೆ ನಡೆಸಿ, ಮಕ್ಕಳಿಗೆ ಕಾನೂನಿನ ಪಾಠ ಮಾಡಿದರು.

ಸರ್ಕಾರದ ಸೌಲಭ್ಯಗಳನ್ನು ಚೆನ್ನಾಗಿ ಬಳಸಿಕೊಂಡು, ಉನ್ನತ ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೆ ಏರಬೇಕು ಆಗ ಸರ್ಕಾರದ ಕಾರ್ಯಕ್ರಮಗಳು ಸಾರ್ಥಕತೆಯಾಗುತ್ತದೆ ಎಂದರು. ಮಧ್ಯಾಹ್ನ ಮಕ್ಕಳ ಜೊತೆಗೆ ಊಟ ಮಾಡಿದ ಡಿವೈಎಸ್ಪಿರವರು ಹಳೆಯ ವಸತಿ ನಿಲಯ ಕಟ್ಟಡವನ್ನು ವೀಕ್ಷಣೆ ಮಾಡಿದರು. ಜೊತೆಗೆ 5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ವಸತಿಶಾಲಾ ಕಟ್ಟಡವನ್ನು ವೀಕ್ಷಿಸಿ ಸಂತಸಗೊಂಡರು. ನೂತನ ಕಟ್ಟಡದ ಉದ್ಘಾಟನೆಯನ್ನು ಆದಷ್ಟು ಬೇಗ ನಡೆಸುವ ಬಗ್ಗೆ ಸಂಬಂಧಪಟ್ಟ ಇಲಾಖೆಗಳೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು. ಸುಮಾರು 3 ಘಂಟೆಗಳ ಕಾಲ ಮಕ್ಕಳ ಜೊತೆಗೆ ಬೆರೆತರು. ಈ ಸಂದರ್ಭದಲ್ಲಿ ಧರ್ಮಸ್ಥಳ ಪೋಲಿಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಸಮರ್ಥ್, ಧರ್ಮಸ್ಥಳ ಪೋಲಿಸ್ ಠಾಣೆಯ ಸಿಬ್ಬಂದಿಗಳು ಜೊತೆಗಿದ್ದರು. ಶಾಲಾ ಶಿಕ್ಷಕರು, ಹಾಸ್ಟೆಲ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
