ಮಂಗಳೂರು ಡಿಸಿ ಕಚೇರಿ ವ್ಯಾಪ್ತಿಯ ನಾಲ್ವರು ನೌಕರ ಸೇವೆ ಖಾಯಂ; ಪ್ರತ್ಯೇಕ ಪ್ರಕರಣಗಳಲ್ಲಿ ಹೈಕೋರ್ಟ್ ಮಹತ್ವದ ತೀರ್ಪು.

ಕರಾವಳಿ

ಎಲ್ಲಾ ನೌಕರರಿಗೂ ನಿವೃತ್ತಿ ನಂತರ ಸಿಕ್ಕಿದ ನ್ಯಾಯ.. ಹೈಕೋರ್ಟಿನಿಂದ ‘Covered by judgment’,

Citizen Rights Foundation ಮೂಲಕ ಕಾನೂನು ಹೋರಾಟ, ನಾಲ್ಕು ಪ್ರಕರಣಗಳಲ್ಲೂ ಹೈಕೋರ್ಟ್ ಮಹತ್ವದ ತೀರ್ಪು

ಬೆಂಗಳೂರು/ಮಂಗಳೂರು : ದಿನಗೂಲಿ ನೌಕರರನ್ನು ಕಾಯಂಗೊಳಿಸುವ ಸಂಬಂಧ ಹೈಕೋರ್ಟ್ ಮಹತ್ವದ ತೀರ್ಪುಗಳನ್ನು ಪ್ರಕಟಿಸಿದೆ. 1986ರಲ್ಲಿ ಸಾಂವಿಧಾನಾತ್ಮಕ ಹುದ್ದೆಗೆ ನೇಮಕವಾಗಿರುವ ನೌಕರರ ಪೈಕಿ ದಕ್ಷಿಣಕನ್ನಡ ಜಿಲ್ಲೆಯ ನಾಲ್ವರು ಮಹಿಳೆಯರ ಸೇವೆಯನ್ನು ಖಾಯಂಗೊಳಿಸಬೇಕೆಂದು ಹೈಕೋರ್ಟ್ ಪ್ರತ್ಯೇಕ ತೀರ್ಪುಗಳನ್ನು ಪ್ರಕಟಿಸಿದೆ. ಈ ಎಲ್ಲಾ ನೌಕರರು ಈಗ ನಿವೃತ್ತಿಯಲ್ಲಿದ್ದು, ನಿವೃತ್ತರಾಗಿ ಹಲವು ವರ್ಷಗಳ ನಂತರ ಈ ತೀರ್ಪುಗಳು ಬಂದಿವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಡಕಚೇರಿ ಆರಂಭ ಸಂದರ್ಭದಲ್ಲಿ (1986ರಲ್ಲಿ) ಈ ನೇಮಕಾತಿ ನಡೆದಿತ್ತು. ಆದರೆ, ಅವರ ಖಾಯಮಾತಿಗೆ ಜಿಲ್ಲಾಡಳಿತ ನಿರಾಕರಿಸಿತ್ತು. ಉಮಾದೇವಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಇವರಿಗೂ ಅನ್ವಯವಾಗುತ್ತದೆ. ಆದರೂ, ಕಂದಾಯ ಇಲಾಖೆಯಲ್ಲಿನ ಕ್ಲರಿಕಲ್ ಲೋಪದಿಂದಾಗಿ ಈ ನೌಕರರ ಹೆಸರುಗಳು ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ವಿದೇಯಕ ಪಟ್ಟಿಗೆ ಸೇರ್ಪಡೆಯಾಗಿದ್ದವು. ಈ ವಿದೇಯಕ ಪಟ್ಟಿಯಲ್ಲಿರುವವರ ಹುದ್ದೆ ಖಾಯಮಾತಿಗೆ ಅರ್ಹವಲ್ಲ ಎಂದು ನೆಪವೊಡ್ಡಿ ಸರ್ಕಾರವು ಈ ನೌಕರರ ಖಾಯಮಾತಿಗೆ ನಿರಾಕರಿಸುತ್ತಾ ಬಂದಿದೆ. ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ನೌಕರರು ಪ್ರತ್ಯೇಕವಾಗಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಪೈಕಿ ಸುಮತಿ ಬಾಯಿ ಎಂಬವರ ಅರ್ಜಿ ಕುರಿತಂತೆ ಹೈಕೋರ್ಟ್ ಏಕಸದಸ್ಯ ಪೀಠವು ಮಂಗಳವಾರ (24.03.2026) ಮಹತ್ವದ ತೀರ್ಪು ಪ್ರಕಟಿಸಿದೆ. ಇದಕ್ಕೂ ಮುನ್ನ ಇತರ ಮೂವರ ದಾವೆ ಬಗ್ಗೆ ತೀರ್ಪು ಪ್ರಕಟಿಸಲಾಗಿತ್ತು.

ಏನಿದು ಪ್ರಕರಣ?

ರಾಜ್ಯದಲ್ಲಿ ನಾಡಕಛೇರಿ ಆರಂಭವಾದ ಸಂಧರ್ಭದಲ್ಲಿ ದಿನಗೂಲಿ ನೌಕರರ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಅದರಂತೆ ನೂರಾರು ಮಂದಿಯ ನೇಮಕಾತಿ ನಡೆದಿತ್ತು.

ಗೊಂದಲ ಸೃಷ್ಟಿಸಿದ್ದ ವಿಧೇಯಕ: ರಾಜ್ಯದಲ್ಲಿ ಟ್ರಿಬ್ಯೂನಲ್ ಅಸ್ತಿತ್ವಕ್ಕೆ ಬಂದಾಗ ಅವುಗಳಿಗೆ ತಾತ್ಕಾಲಿಕ ನೇಮಕಾತಿ ನಡೆಯುವುದು ಸಹಜ. ಕೆಲವು, ಸುದೀರ್ಘ ಕಾಲ ಅಸ್ತಿತ್ವದಲ್ಲಿದ್ದ ಟ್ರಿಬ್ಯೂನಲ್’ಗಳು ಸ್ಥಗಿತಗೊಂಡ ನಂತರ ನೌಕರರನ್ನು ಅನುಕಂಪದ ಆಧಾರದಲ್ಲಿ ದಿನಗೂಲಿ ನೌಕರರನ್ನಾಗಿ ಮುಂದುವರಿಸಲಾಯಿತು. ಅದೇ ಹೊತ್ತಿಗೆ PWD, ಅರೋಗ್ಯ ಗ್ರಾಮೀಣಾಭಿವೃದ್ಧಿ ಸಹಿತ ವಿವಿಧ ಇಲಾಖೆಗಳಲ್ಲಿ ಸಾವಿರಾರು ನೌಕರರು ತಾತ್ಕಾಲಿಕ ದಿನಗೂಲಿ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. 10 ವರ್ಷಕ್ಕೂ ಹೆಚ್ಚು ಕಾಲ ಸೇವೆಯಲ್ಲಿರುವರಿಗೆ ಸೇವಾ ಭದ್ರತೆ ಕಲ್ಪಿಸುವ ಸಂಬಂಧ ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ 2012 Karnataka Daily Wage Employees Welfare Act, 2012) ಜಾರಿಗೆ ತರಲಾಯಿತು. ಈ ವಿದೇಯಕ ವ್ಯಾಪ್ತಿಗೆ ಬರುಯುವವರು ವಯೋನಿವೃತ್ತಿಯಾಗುವ ವರೆಗೂ ಸರ್ಕಾರಿ ನೌಕರರಾಗಿ ಮುಂದುವರಿಯಬಹುದು. ಆದರೆ, ಖಾಯಂ ನೌಕರರ ಸೌಲಭ್ಯ ಸಿಗುವುದಿಲ್ಲ.)

ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ- 2012 ಜಾರಿಯ ಸಂದರ್ಭದಲ್ಲಿ ಕ್ಲರಿಕಲ್ ಲೋಪದಿಂದಾಗಿ, ಸಂವಿಧಾನಾತ್ಮಕವಾಗಿ ನೇಮಕಗೊಂಡ ದಕ್ಷಿಣಕನ್ನಡ ಜಿಲ್ಲೆಯ 9 ಸರ್ಕಾರಿ ನೌಕರರನ್ನೂ ಈ ವಿದೇಯಕ ಪಟ್ಟಿಗೆ ಸೇರಿಸಲಾಯಿತು. ಈ ವಿಚಾರದಲ್ಲಿ ನೊಂದ ನೌಕರರು ಸುಮಾರು ಒಂದೂವರೆ ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದರೂ ತಪ್ಪನ್ನು ಸರಿಪಡಿಸುವಲ್ಲಿ ಕಂದಾಯ ಇಲಾಖೆ ಮುಂದಾಗಿಲ್ಲ. ದಕ್ಷಿಣಕನ್ನಡ ಜಿಲ್ಲಾಧಿಕಾರಿ ಕಚೇರಿಯ PLO ಕಡತದಲ್ಲಿ ಈ ನೌಕರರನ್ನು ಖಾಯಂಗೊಳಿಸಬಹುದು ಎಂದು ಉಲ್ಲೇಖಿಸಲಾಗಿದೆ. ಆದರೆ, ಡಿಸಿ ಕಚೇರಿಯಲ್ಲಿನ ಇನ್ನೂ ಅನೇಕರು ಅರ್ಹರಲ್ಲದ ಕಾರಣ ಎಲ್ಲರನ್ನೂ ವಿದೇಯಕ ವ್ಯಾಪ್ತಿಯಲ್ಲೇ ಮುಂದುವರಿಸಲಾಗಿತ್ತು.

ಇದರಿಂದ ನೊಂದ ನೌಕರರು ಬೆಂಗಳೂರಿನ ‘ಸಿಟಿಜನ್ ರೈಟ್ಸ್ ಫೌಂಡೇಷನ್’ ನೆರವಿನಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಪೈಕಿ ಗುಲಾಬಿ ಎಂಬವರನ್ನು ಖಾಯಂಗೊಳಿಸಬೇಕೆಂಬ ಹೈಕೋರ್ಟ್ ಏಕಸದಸ್ಯ ಪೀಠವು 2024ರಲ್ಲೆ ತೀರ್ಪು ನೀಡಿತ್ತು. ಅದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು (WA No 1872/2024) ವಿಭಾಗೀಯ ಪೀಠವು (24.11.2025 ರಂದು) ವಜಾ ಮಾಡಿದೆ. ಉಮಾದೇವಿ ಪ್ರಕರಣದಲ್ಲಿನ ಸುಪ್ರೀಂಕೋರ್ಟ್ ತೀರ್ಪಿನಂತೆ ಖಾಯಂಗೊಳಿಸಬೇಕೆಂದು ಹೈಕೋರ್ಟ್ ವಿಭಾಗೀಯ ಆದೇಶಿಸಿದೆ. ಇದರ ಬೆನ್ನಲ್ಲೇ, ಗುಲಾಬಿಯವರ ನೇಮಕಾತಿ ಆದೇಶದಲ್ಲೇ ನೇಮಕಗೊಂಡಿರುವ, ಬಂಟ್ವಾಳ ತಹಶೀಲ್ದಾರ್ ಕಚೇರಿಯ ನಿವೃತ್ತ ನೌಕರರಾದ ಸತ್ಯಶಂಕರಿ, ಮಂಗಳೂರಿನ ನಿವೃತ್ತ ಸರ್ಕಾರಿ ನೌಕರರಾದ ವಿಜಯಕುಮಾರಿ ಅವರನ್ನು ಖಾಯಂಗೊಳಿಸಬೇಕೆಂದು ಹೈಕೋರ್ಟ್ ಏಕಸದಸ್ಯ ಪೀಠವು 12.03.2026ರಂದು ತೀರ್ಪು ಪ್ರಕಟಿಸಿದೆ. ಅದೇ ನೇಮಕಾತಿ ಪಟ್ಟಿಯಲ್ಲಿದ್ದ ಮೂಡುಬಿದಿರೆಯ ಸುಮತಿ ಬಾಯಿ ಎಂಬವರನ್ನೂ ಖಾಯಂಗೊಳಿಸಬೇಕೆಂದು ಹೈಕೋರ್ಟ್ ಏಕಸದಸ್ಯ ಪೀಠವು ಮಂಗಳವಾರ (24.03.2026) ತೀರ್ಪು ಪ್ರಕಟಿಸಿದೆ.

ಈ ಎಲ್ಲಾ ಪ್ರಕರಣಗಳಲ್ಲಿ ಹಿರಿಯ ನ್ಯಾಯವಾದಿ ಅಶ್ವಥನಾರಾಯಣ ಅವರ ಮಾರ್ಗದರ್ಶನದಲ್ಲಿ ಎಸ್.ಎ.ಸುಧೀಂದ್ರ ಅವರನ್ನೊಳಗೊಂಡ ವಕೀಲರ ತಂಡ ಸಮರ್ಥ ವಾದ ಮಂಡಿಸಿ ನೊಂದ ನೌಕರರ ಪರವಾಗಿ ಮಹತ್ವದ ತೀರ್ಪು (Covered by judgment) ತಂದುಕೊಡುವಲ್ಲಿ ಯಶಸ್ವಿಯಾಗಿದೆ.

ಪ್ರತಿಕ್ರಿಯೆ:

ಈ ತೀರ್ಪು ಬಗ್ಗೆ ಪ್ರತಿಕ್ರಿಯಿಸಿರುವ ‘ಸಿಟಿಜನ್ ರೈಟ್ಸ್ ಫೌಂಡೇಶನ್’ ಅಧ್ಯಕ್ಷ ಕೆ.ಎ.ಪಾಲ್, ಮಂಗಳೂರು ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳ ಲೋಪದಿಂದಾಗಿ ಅನೇಕ ನೌಕರರು ಅನ್ಯಾಯಕ್ಕೊಳಗಾಗಿದ್ದಾರೆ. ಸುಮಾರು 38 ವರ್ಷಗಳ ಕಾಲ ಸೇವೆಸಲ್ಲಿಸಿದವರ ಪಾಡು ಈ ರೀತಿ ಆಗಿರುವುದು ರಾಜ್ಯದ ಆಡಳಿತ ವ್ಯವಸ್ಥೆಗೆ ಒಂದು ಕಪ್ಪುಚುಕ್ಕೆಯಾಗಿದೆ ಎಂದು ವಿಶ್ಲೇಷಿಸಿದ್ದಾರೆ. ಆದರೂ ಈ ನೌಕರರು ನಿವೃತ್ತಿಯಾದ ನಂತರವಾದರೂ ನ್ಯಾಯ ಸಿಕ್ಕಿದ್ದು, ನ್ಯಾಯಾಂಗದ ಮೇಲೆ ನಂಬಿಕೆ ಹೆಚ್ಚಾಗಿದೆ ಎಂದು ಕೆ.ಎ.ಪಾಲ್ ಅವರು ಹೈಕೋರ್ಟ್ ಪೀಠದ ತೀರ್ಪುಗಳನ್ನು ಸ್ವಾಗತಿಸಿದ್ದಾರೆ.