ಅಕ್ರಮ ಟೋಲ್ ಗೇಟ್ ಗಳ ವಿರುದ್ಧ ಎಪ್ರಿಲ್ ನಲ್ಲಿ ಪಾದಯಾತ್ರೆಯ ಎಚ್ಚರಿಕೆ: ಮುನೀರ್ ಕಾಟಿಪಳ್ಳ

ಕರಾವಳಿ

ಬಿ.ಸಿ ರೋಡ್ – ಚಾರ್ಮಾಡಿ ರಸ್ತೆಯ ಪಣಕಜೆ ಎಂಬಲ್ಲಿ ನಿರ್ಮಾಣವಾಗುವ ಟೋಲ್ ಗೇಟ್ ಕಾನೂನು ಬಾಹಿರವಾಗಿದೆ. ಜಿಲ್ಲೆಯಲ್ಲಿರುವ ಅಕ್ರಮ ಟೋಲ್ ಗೇಟ್ ಗಳ ವಿರುದ್ಧ ಎಪ್ರಿಲ್ ನಲ್ಲಿ ಪಾದಯಾತ್ರೆ ನಡೆಸಲಾಗುವುದು ಎಂದು ಸಿಪಿಐ(ಎಂ) ದ.ಕ ಜಿಲ್ಲಾ ಕಾರ್ಯದರ್ಶಿ, ಹೋರಾಟಗಾರ ಮುನೀರ್ ಕಾಟಿಪಳ್ಳ ಎಚ್ಚರಿಕೆ ನೀಡಿದರು. ಅವರು ಬೆಳ್ತಂಗಡಿ ತಾಲೂಕಿನ ಪಣಕಜೆ ಎಂಬಲ್ಲಿ ಟೋಲ್ ಗೇಟ್ ನಿರ್ಮಾಣ ಸ್ಥಳಕ್ಕೆ ಜಿಲ್ಲಾ ಮಟ್ಟದ ಟೋಲ್ ಗೇಟ್ ತೆರವು ಹೋರಾಟ ಸಮಿತಿ ನಿಯೋಗದಲ್ಲಿ ಭೇಟಿ ನೀಡಿ, ಪರಿಶೀಲನೆ ನಡೆಸಿ ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

ದ.ಕ ಜಿಲ್ಲೆಯ ಜನರ ಶಾಂತಿಯುತ ಟೋಲ್ ಗೇಟ್ ವಿರುದ್ಧದ ಪ್ರತಿಭಟನೆಯನ್ನು ಕೇಂದ್ರ ಸರ್ಕಾರ ಜಿಲ್ಲೆಯ ಜನರ ದೌರ್ಬಲ್ಯ ಎಂದು ತಿಳಿದುಕೊಂಡಿದೆ‌. ಬೇಕಾಬಿಟ್ಟಿ ಟೋಲ್ ಗೇಟ್ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡು ನಮ್ಮ ಸಹನೆಯನ್ನು ಪರೀಕ್ಷೆ ಮಾಡುವಂತಿದೆ. ನಮ್ಮ ಸಹನೆಗೂ ಮಿತಿ ಇದೆ ಎಂದು ಎಚ್ಚರಿಕೆ ನೀಡಿದರು. ಎಪ್ರಿಲ್ ನಲ್ಲಿ ನಡೆಯುವ ಪಾದಯಾತ್ರೆ ಮೂಲಕ ಕೇಂದ್ರ ಸರ್ಕಾರಕ್ಕೆ ನಮ್ಮ ಒಗ್ಗಟ್ಟಿನ ಎಚ್ಚರಿಕೆ ನೀಡಬೇಕಾಗಿದೆ ಎಂದರು.

ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ ಪ್ರತಿ 60 ಕಿಮೀ ದೂರದಲ್ಲಿರಬೇಕಾದ ಟೋಲ್ ಗೇಟ್ ಗಳು 30- 40 ಕಿಮೀ ದೂರದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಚತುಷ್ಪತ ರಸ್ತೆಯಲ್ಲಿರಬೇಕಾದ ಟೋಲ್ ಗೇಟ್ ಗಳನ್ನು ಭೂ ಸಾರಿಗೆ ಇಲಾಖೆಯ ರಸ್ತೆಗಳಲ್ಲೂ ನಿರ್ಮಾಣ ಮಾಡುತ್ತಿರುವುದು ದುರಂತ. ಇದರ ವಿರುದ್ಧ ಪಕ್ಷಬೇಧ ಮರೆತು ಒಗ್ಗಟ್ಟಿನ ಹೋರಾಟ ಅಗತ್ಯವಿದೆ ಎಂದರು.

ಈ ಸಂದರ್ಭದಲ್ಲಿ ನಿಯೋಗದಲ್ಲಿ ಟೋಲ್ ಗೇಟ್ ತೆರವು ಹೋರಾಟ ಸಮಿತಿ ಸಂಚಾಲಕರಾದ ಬಿ‌‌. ಶೇಖರ್, ಮೋಹನ್ ಶೆಟ್ಟಿ ಪಂಜಿಕಲ್ಲು, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಭಂಡಾರಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಅಂಚನ್, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಶೇಖರ್ ಕುಕ್ಕೇಡಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್, ಕೆ.ಕೆ ಶಾಹುಲ್ ಹಮೀದ್, ಬಂಟ್ವಾಳ ಸಿಪಿಐ ಮುಖಂಡರಾದ ಸುರೇಶ್ ಕುಮಾರ್, ಭಾರತಿ ಪ್ರಶಾಂತ್, ಸಮಾನ ಮನಸ್ಕ ವೇದಿಕೆಯ ಹರೀಶ್ ಬಿ‌.ಸಿ ರೋಡ್, ಸಿಪಿಐ(ಎಂ) ಮುಖಂಡ ಶೇಖರ್ ಲಾಯಿಲ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲಿಯಾನ್, ಮುಖಂಡರಾದ ಪ್ರವೀಣ್ ಫೆರ್ನಾಂಡೀಸ್ ಹಳ್ಳಿಮನೆ, ಚಿತ್ತರಂಜನ್ ಶೆಟ್ಟಿ ಬೊಂಡಾಲ, ಸುದೀಪ್ ಶೆಟ್ಟಿ ಮಾಣಿ, ಲುಕ್ಮಾನ್ ಬಂಟ್ವಾಳ, ಶಬೀರ್ ಸಿದ್ದಕಟ್ಟೆ, ಪ್ರಜ್ವಲ್ ಶೆಟ್ಟಿ, ರಾಜಶೇಖರ ಶೆಟ್ಟಿ ಮಡಂತ್ಯಾರು, ಬೇಬಿ ಸುವರ್ಣ , ರವೀಂದ್ರ ಅಮಿನ್ ಬಳೆಂಜ, ಅಬ್ದುಲ್ ರಹಿಮಾನ್ ಪಡ್ಪು, ಚಂದ್ರಹಾಸ ಕೇದೆ, ವಿನ್ಸೆಂಟ್ ಡಿಸೋಜ, ಶ್ಯಾಮ್ ಪ್ರಸಾದ್ ಸಂಪಿಗೆತ್ತಾಯ, ಮಹಮ್ಮದಾಲಿ, ಶರೀಫ್ ಸಬರಬೈಲು, ಮುಂತಾದವರು ಉಪಸ್ಥಿತರಿದ್ದರು.