ಸಂತ್ರಸ್ತ ಕೈದಿಗಳ ಬಿಡುಗಡೆಗೆ ಏಕರೂಪ ನೀತಿ ರೂಪಿಸುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ

ರಾಷ್ಟ್ರೀಯ

ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿ ಈವರೆಗೂ ಜೈಲಿನಲ್ಲಿ ಕೊಳೆಯುತ್ತಿರುವ ವೃದ್ಧರು ಹಾಗೂ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ಕೈದಿಗಳ ಅವಧಿಪೂರ್ವ ಬಿಡುಗಡೆಗೆ ಸಂಬಂಧಿಸಿದಂತೆ ಮೂರು ತಿಂಗಳ ಒಳಗಾಗಿ ಸೂಕ್ತ ನೀತಿ ರೂಪಿಸುವಂತೆ ಸುಪ್ರೀಂ ಕೋರ್ಟ್​ ಗುರುವಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿಗಳಾದ ವಿಕ್ರಮ್​ ನಾಥ್​ ಮತ್ತು ಸಂದೀಪ್​ ಮೆಹ್ತಾ ಅವರಿದ್ದ ಪೀಠ ಈ ಮಹತ್ವದ ತೀರ್ಪು ನೀಡಿದೆ. ಈ ನೀತಿಯು ಕೈದಿಗಳ ಬಿಡುಗಡೆಗೆ ಇರಬೇಕಾದ ಅರ್ಹತಾ ಮಾನದಂಡಗಳು ಮತ್ತು ಕಾರ್ಯವಿಧಾನದ ಚೌಕಟ್ಟನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಬೇಕು. ವಿಶೇಷವಾಗಿ ಮಾರಣಾಂತಿಕ ಕಾಯಿಲೆ ಎಂಬುದಕ್ಕೆ ಸ್ಪಷ್ಟ ಮತ್ತು ಏಕರೂಪದ ವ್ಯಾಖ್ಯಾನವನ್ನು ನೀಡಬೇಕು ಎಂದು ಪೀಠವು ಹೇಳಿದೆ.

ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ಅಥವಾ 70 ವರ್ಷ ಮೇಲ್ಪಟ್ಟ ಕೈದಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಕೋರಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (ಎನ್‌ಎಲ್​ಎಸ್​ಎ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿತು. ಜೊತೆಗೆ, ಸಮಗ್ರ ನೀತಿಯುಳ್ಳ ವರದಿ ತಯಾರಿಸಿ, ಆ ಕುರಿತು ಅಧಿಸೂಚನೆಯನ್ನು ಮೂರು ತಿಂಗಳ ಒಳಗೆ ಹೊರಡಿಸಬೇಕು ಎಂದೂ ತಾಕೀತು ಮಾಡಿದೆ.

ಬಿಡುಗಡೆಗಾಗಿ ಅರ್ಹ ಕೈದಿಗಳನ್ನು ಗುರುತಿಸಲು ಆಯಾ ರಾಜ್ಯಗಳ ಕಾನೂನು ಸೇವಾ ಪ್ರಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ನೀತಿ ರೂಪಿಸಬೇಕು. ಅವಧಿಪೂರ್ವ ಅಥವಾ ಮಾನವೀಯ ಆಧಾರದ ಮೇಲೆ ಬಿಡುಗಡೆ ಕೋರಿ ಸಲ್ಲಿಸುವ ಅರ್ಜಿಗಳ ಪರಿಶೀಲನೆ, ವಿಲೇವಾರಿಗೆ ಕಾಲಮಿತಿ, ಪಾರದರ್ಶಕತೆ ಮತ್ತು ಸುಲಭ ಪ್ರಕ್ರಿಯೆಯನ್ನು ಆ ನೀತಿ ಒಳಗೊಂಡಿರಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ