ಅಪಘಾತದಲ್ಲಿ ಪೋಷಕರು ಮೃತಪಟ್ಟ ಸಂದರ್ಭದಲ್ಲಿ, ಅವರ ವಯಸ್ಕ, ವಿವಾಹಿತ ಹಾಗೂ ಲಾಭದಾಯಕ ಉದ್ಯೋಗದಲ್ಲಿರುವ ಮಕ್ಕಳು ಕೂಡ ಪರಿಹಾರ ಪಡೆಯಲು ಅರ್ಹರು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅವಲಂಬನೆಯ ಪ್ರಮಾಣಕ್ಕೆ ಅನುಗುಣವಾಗಿ ಈ ಮಕ್ಕಳೂ ಪರಿಹಾರಕ್ಕಾಗಿ ಕಾನೂನುಬದ್ಧವಾಗಿ ಅರ್ಹರು ಎಂದು ನ್ಯಾಯಮೂರ್ತಿಗಳಾದ ಎನ್. ಕೋಟೀಶ್ವರ್ ಸಿಂಗ್ ಮತ್ತು ಎನ್.ವಿ. ಅಂಜಾರಿಯ ಅವರ ಪೀಠವು ತೀರ್ಪು ನೀಡಿದೆ. ಕಾನೂನುಬದ್ಧ ಪ್ರತಿನಿಧಿ ಎಂಬುದನ್ನು ಮೋಟಾರು ವಾಹನ ಕಾಯ್ದೆಯಲ್ಲಿ ವ್ಯಾಖ್ಯಾನಿಸಿಲ್ಲವಾದರೂ, ಮೃತ ವ್ಯಕ್ತಿಯ ಆಸ್ತಿಯನ್ನು ಕಾನೂನುಬದ್ಧವಾಗಿ ಪ್ರತಿನಿಧಿಸುವವರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಅರ್ಹರು ಎಂದು ನ್ಯಾಯಪೀಠವು ವ್ಯಾಖ್ಯಾನಿಸಿದೆ.
ಮಾಸಿಕ 9 ಸಾವಿರ ರೂ. ವೇತನ ಪಡೆಯುತ್ತಿದ್ದ, ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ 48 ವರ್ಷದ ವ್ಯಕ್ತಿಯೊಬ್ಬರು ಕಾರು ಅಪಘಾತದಲ್ಲಿ ಮೃತರಾಗಿದ್ದರು. ಅವರ ಪತ್ನಿ ಮತ್ತು ಮೂವರು ಮಕ್ಕಳು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ, ‘ಆರ್ಥಿಕವಾಗಿ ಮೃತರನ್ನು ಅವಲಂಬಿಸಿದ್ದವರು ಮಾತ್ರವೇ ಅಲ್ಲ, ಬದಲಾಗಿ ಅವರ ಆಸ್ತಿಯಲ್ಲಿ ಪಾಲು ಪಡೆಯುವ ಹಾಗೂ ಕಾನೂನುಬದ್ಧವಾಗಿ ಅವರನ್ನು ಪ್ರತಿನಿಧಿಸುವವರೂ ಪರಿಹಾರಕ್ಕೆ ಅರ್ಹರು’ ಎಂದು ನ್ಯಾಯಪೀಠವು ವ್ಯಾಖ್ಯಾನಿಸಿತು.
ಅವಲಂಬಿತರಿಗೆ ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿಯು 8.44 ಲಕ್ಷ ರೂ. ಪರಿಹಾರ ಘೋಷಿಸಿತ್ತು. ಈ ಮೊತ್ತವನ್ನು ರೂಪಾಯಿ 11 ಲಕ್ಷಕ್ಕೆ ಹೆಚ್ಚಿಸಿ ತೆಲಂಗಾಣ ಹೈಕೋರ್ಟ್ ಆದೇಶಿಸಿತ್ತು. ಜೊತೆಗೆ, ನ್ಯಾಯಮಂಡಳಿಯು ತೀರ್ಪು ನೀಡಿದ ದಿನದಿಂದ, ಹಣ ಪಾವತಿ ಆಗುವ ದಿನದವರೆಗೆ ಶೇ 7.5ರಷ್ಟು ಬಡ್ಡಿಯನ್ನೂ ಪಾವತಿಸಬೇಕು ಎಂದು ಅದು ಹೇಳಿತ್ತು. ಅವಲಂಬಿತರು ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಸುಪ್ರೀಂ ಕೋರ್ಟ್, ಒಟ್ಟು ಪರಿಹಾರ ಮೊತ್ತವನ್ನು ರೂಪಾಯಿ 12,47,272ಕ್ಕೆ ಹೆಚ್ಚಿಸಿದೆ.
