ಉತ್ತರ ಪ್ರದೇಶದಲ್ಲಿ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಗೆ ಈ ಬಾರಿ ಗೆಲುವು ದಕ್ಕಲಿದೆ: ರಾಹುಲ್ ಗಾಂಧಿ, ಭವಿಷ್ಯ

ರಾಷ್ಟ್ರೀಯ

ಸಾರ್ವತ್ರಿಕ ಚುನಾವಣೆಯ ಏಳೂ ಹಂತಗಳಲ್ಲಿ ಉತ್ತರ ಪ್ರದೇಶದ ಲೋಕಸಭಾ ಕ್ಷೇತ್ರದ ಚುನಾವಣೆ ನಡೆಯುತ್ತಿದೆ. ಮೊದಲ ಮತ್ತು ಎರಡನೇ ಹಂತದಲ್ಲಿ ತಲಾ 8, ಮೂರನೇ 10, ನಾಲ್ಕನೇ 13, ಐದನೇ ಮತ್ತು ಆರನೇ ತಲಾ 14 ಮತ್ತು ಕೊನೆಯ ಹಂತದಲ್ಲಿ 13 ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ. ಕೇಂದ್ರದಲ್ಲಿ ಚುಕ್ಕಾಣಿ ಹಿಡಿಯಲು ಉತ್ತರ ಪ್ರದೇಶದ ಫಲಿತಾಂಶ ಬಹಳ ನಿರ್ಣಾಯಕ, ಕಾರಣ ಅಲ್ಲಿರುವುದು 80 ಲೋಕಸಭಾ ಕ್ಷೇತ್ರಗಳು. ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟ 64, ಮಹಾಘಟಬಂಧನ್ 15 ಮತ್ತು ಕಾಂಗ್ರೆಸ್ ಕೇವಲ ಒಂದು ಸ್ಥಾನವನ್ನು ಗೆದ್ದಿತ್ತು. ಆದರೆ, ಈ ಬಾರಿ ರಾಹುಲ್ ಗಾಂಧಿ ಭಾರೀ ಆಶಾದಾಯಕವಾಗಿದ್ದಾರೆ.

ಈ ಬಾರಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ಇಂಡಿಯಾ ಮೈತ್ರಿಕೂಟ ಮ್ಯಾಜಿಕ್ ಮಾಡಲಿದೆ ಎನ್ನುವ ವಿಶ್ವಾಸವನ್ನು ವ್ಯಕ್ತ ಪಡಿಸಿದ್ದಾರೆ. ಕಳೆದ ಬಾರಿ, ಕಾಂಗ್ರೆಸ್ ಒಂದೇ ಒಂದು ಸೀಟ್ (ರಾಯ್‌ಬರೇಲಿ) ಮಾತ್ರ ಗೆದ್ದಿತ್ತು. ಈ ಬಾರಿ ಅದು ಬಿಜೆಪಿಗೆ ರಿವರ್ಸ್ ಆಗಲಿದೆ ಎಂದು ರಾಹುಲ್ ಹೇಳಿದ್ದಾರೆ. ಪ್ರಯಾಗರಾಜ್ (ಅಲಹಾಬಾದ್) ನಲ್ಲಿ, ಅಖಿಲೇಶ್ ಯಾದವ್ ಜೊತೆ ಚುನಾವಣಾ ಸಭೆಯಲ್ಲಿ ಮಾತನಾಡುತ್ತಿದ್ದ ರಾಹುಲ್, ” ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಕೇವಲ ಒಂದು ಸ್ಥಾನ ಸಿಗಲಿದೆ, ಮಿಕ್ಕ ಎಲ್ಲಾ 79 ಕ್ಷೇತ್ರಗಳಲ್ಲಿ ಇಂಡಿಯಾ ಮೈತ್ರಿಕೂಟ ಜಯ ಸಾಧಿಸಲಿದೆ ” ಎಂದು ಭವಿಷ್ಯ ನುಡಿದಿದ್ದಾರೆ.

ಅಲಹಾಬಾದ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಉಜ್ವಲ್ ರಮಣ್ ಸಿಂಗ್ ಪರ ಮತಯಾಚಿಸಿ ಮಾತನಾಡಿದ ರಾಹುಲ್, ನಮ್ಮ ಮೊದಲ ಸಂಘರ್ಷ ಸಂವಿಧಾನದ ಉಳಿವಿಗಾಗಿ. ಬಿಜೆಪಿ ಮತ್ತು ಸಂಘ ಪರಿವಾರದ ನಿರಂತರ ದಾಳಿಯಿಂದ ದೇಶವನ್ನು ರಕ್ಷಿಸಬೇಕಿದೆ ಎಂದು ರಾಹುಲ್ ಗಾಂಧಿ ಅಭಿಪ್ರಾಯ ಪಟ್ಟರು.

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಗೆಲುವು ಸಿಗುವುದು ಒಂದು ಕ್ಷೇತ್ರದಲ್ಲಿ ಮಾತ್ರ, ಅದು ವಾರಣಾಸಿಯಲ್ಲಿ ನರೇಂದ್ರ ಮೋದಿ ಗೆಲುವನ್ನು ಸಾಧಿಸಬಹುದು. ಮಿಕ್ಕ ಎಲ್ಲಾ ಕಡೆ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಗೆ ಈ ಬಾರಿ ಗೆಲುವು ದಕ್ಕಲಿದೆ ಎಂದು ರಾಹುಲ್ ಗಾಂಧಿ, ಭವಿಷ್ಯ ನುಡಿದಿದ್ದಾರೆ.