ರಾಜ್ಯ ಬಿಜೆಪಿಯಲ್ಲಿ ಭಾರಿ ಬದಲಾವಣೆಯ ಲಕ್ಷಣ. ಸಿ.ಟಿ. ರವಿ ವಿಧಾನ ಪರಿಷತ್‌ ವಿಪಕ್ಷ ನಾಯಕ ಸ್ಥಾನ, ಆರ್‌.ಅಶೋಕ್‌ಗೆ ಬಿಜೆಪಿಯ ರಾಷ್ಟ್ರೀಯ ಮಟ್ಟದ ಜವಾಬ್ದಾರಿ ಸಾಧ್ಯತೆ.

ರಾಜ್ಯ

ಕೇಂದ್ರ ಸಚಿವ ಸಂಪುಟ ರಚನೆಯ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲೂ ಸಮೀಕರಣಗಳು ಬದಲಾಗುವ ಲಕ್ಷಣ ಸೃಷ್ಠಿಯಾಗಿದೆ. ಸಿ.ಟಿ. ರವಿ ವಿಧಾನ ಪರಿಷತ್‌ ವಿಪಕ್ಷ ನಾಯಕರನ್ನಾಗಿಸುವ ಸಾಧ್ಯತೆ ಬಗ್ಗೆ ಪಕ್ಷದಲ್ಲಿ ಚಿಂತನೆ ನಡೆಯುತ್ತಿದ್ದು, ಆರ್‌.ಅಶೋಕ್‌ಗೆ ಬಿಜೆಪಿಯ ರಾಷ್ಟ್ರೀಯ ಮಟ್ಟದ ಜವಾಬ್ದಾರಿ ಸಿಗಲಿದೆ ಎಂದು ಹೇಳಲಾಗುತ್ತಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಜೆ.ಪಿ. ನಡ್ಡಾ ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಹೀಗಾಗಿ ರಾಷ್ಟ್ರಮಟ್ಟದಲ್ಲಿ ಪಕ್ಷದ ಪದಾಧಿಕಾರಿಗಳು ಬದಲಾಗಲಿದ್ದಾರೆ. ಸಹಜವಾಗಿಯೇ ಈ ಪಟ್ಟಿಯಲ್ಲಿ ಕರ್ನಾಟಕಕ್ಕೂ ಒಂದಿಷ್ಟು ಸ್ಥಾನಗಳು ಲಭಿಸುವುದು ನಿಶ್ಚಿತವಾಗಿದ್ದು, ಹಿರಿತನ ಆಧರಿಸಿ ಆರ್‌. ಅಶೋಕ್‌ಗೆ ಆಯಕಟ್ಟಿನ ಸ್ಥಾನ ಲಭಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಕೇಂದ್ರ ಸಚಿವ ಸಂಪುಟದಲ್ಲಿ ಹಳೇ ಮೈಸೂರು ಭಾಗಕ್ಕೆ ಈ ಬಾರಿ ಯಥೇಚ್ಚ ಅವಕಾಶ ಸಿಕ್ಕಿದೆ. ಒಕ್ಕಲಿಗ ಸಮುದಾಯಕ್ಕೆ ಸೇರಿದ ಇಬ್ಬರಿಗೆ ಅವಕಾಶ ಲಭಿಸಿದೆ. ಇದರ ಜತೆಗೆ ಸಿ.ಟಿ. ರವಿ ಮೇಲ್ಮನೆ ವಿಪಕ್ಷ ನಾಯಕರಾದರೆ ಉಭಯ ಸದನದಲ್ಲಿ ಒಕ್ಕಲಿಗರಿಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಉತ್ತರ ಕರ್ನಾಟಕ ಅಥವಾ ಕರಾವಳಿ ಭಾಗಕ್ಕೆ ಅವಕಾಶ ನೀಡುವುದು ಅನಿವಾರ್ಯವಾಗಬಹುದು.