ಅಬಕಾರಿ ಇಲಾಖೆಯ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆ; ಅಬಕಾರಿ ಸಚಿವರ ತಲೆ ದಂಡ ಸಾಧ್ಯತೆ.

ರಾಜ್ಯ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಒಂದಿಲ್ಲೊಂದು ಹಗರಣ ಬರುತ್ತಲೇ ಇದೆ. ವಾಲ್ಮೀಕಿ, ಮುಡಾ ಹಗರಣ, ಇದೀಗ ಅಬಕಾರಿ ಇಲಾಖೆಯ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗುತ್ತಿದೆ. ಹಗರಣಗಳಿಂದ ರಾಜ್ಯ ಸರ್ಕಾರವನ್ನು ಮುಜುಗರಕ್ಕೀಡುವಂತೆ ಮಾಡಿದೆ. ಹೀಗಾಗಿ ಸಚಿವರೊಬ್ಬರ ತಲೆದಂಡ ಖಚಿತ ಎನ್ನಲಾಗಿದೆ. ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ್ ರಾಜೀನಾಮೆ ಪಡೆಯಲು ಸಿದ್ಧತೆ ನಡೆಯುತ್ತಿದೆ ಎಂಬ ಚರ್ಚೆ ಕಾಂಗ್ರೆಸ್‌ ವಲಯದಲ್ಲೇ ಕೇಳಿ ಬಂದಿದೆ..

ಅಬಕಾರಿ ಇಲಾಖೆಯಲ್ಲಿ 700 ಕೋಟಿ ರೂ. ಹಗರಣದ ಆರೋಪ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್‌ಗೆ ಮುಜುಗರ ಉಂಟು ಮಾಡಿತ್ತು. ಮಹಾರಾಷ್ಟ್ರ ಚುನಾವಣೆಯಲ್ಲೂ ಕಾಂಗ್ರೆಸ್ ಪಾಲಿಗೆ ಕಿರಿಕಿರಿಯಾಗಿತ್ತು. ರಾಜ್ಯಪಾಲರಿಗೆ ದೂರು ನೀಡಿ, ಬಾರ್ ಬಂದ್ ಮಾಡಲು ಮಾಲೀಕರು ಮುಂದಾಗಿದ್ದರು.

ಮಹಾರಾಷ್ಟ್ರ ಚುನಾವಣೆಯ ಸಮಯದಲ್ಲೂ ವಿಪಕ್ಷಗಳು ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದು ಕಾಂಗ್ರೆಸ್‌ಗೆ ಇರುಸು ಮುರುಸು ತಂದಿತ್ತು. ಈ ವಿಚಾರದಿಂದ ಸಚಿವ ತಿಮ್ಮಾಪುರ್ ಮೇಲೆ ಹೈಕಮಾಂಡ್ ಭಾರೀ ಅಸಮಾಧಾನಗೊಂಡಿತ್ತು

ತಿಮ್ಮಾಪುರ್ ರಾಜೀನಾಮೆ ವಿಚಾರದಲ್ಲಿ ಸ್ಪಷ್ಟವಾದ ನಿರ್ಧಾರ ತೆಗೆದುಕೊಂಡು ಬನ್ನಿ ಎಐಸಿಸಿ ನಾಯಕರು ಸಿದ್ದರಾಮಯ್ಯಗೆ ಸೂಚಿಸಿದ್ದರು. ಎಐಸಿಸಿ ಪ್ರಮುಖ ನಾಯಕರ ಜೊತೆಗಿನ ಮಾತುಕತೆಯ ವೇಳೆ ಹೈಕಮಾಂಡ್ ನಿರ್ಧಾರಕ್ಕೆ ಬದ್ದ ಎಂಬ ಸಂದೇಶವನ್ನು ಸಿ.ಎಂ ರವಾನೆ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಕರ್ನಾಟಕದ ಉಪಚುನಾವಣೆ ಮತ್ತು ಜಾರ್ಖಂಡ್‌, ಮಹಾರಾಷ್ಟ್ರ ಚುನಾವಣೆಯ ಬಳಿಕ ತಿಮ್ಮಾಪೂರ್‌ ವಿಚಾರದಲ್ಲಿ ಹೈಕಮಾಂಡ್ ‌ ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ. ಒಟ್ಟಾರೆ ರಾಜ್ಯ ಸರ್ಕಾರದಲ್ಲಿ ಒಂದಿಲ್ಲೊಂದು ಕಂಟಕ ಎದುರಾಗುತ್ತಿದ್ದು, ಇದು ವಿಪಕ್ಷಗಳಿಗೆ ಆಹಾರವಾಗಿದೆ.